ಶಿರಸಿಯ ಅಮೀತಕುಮಾರ ಹೆಗಡೆ ಅವರು ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದರೂ 30 ಲಕ್ಷ ರೂಪಾಯಿಗಾಗಿ ಪತ್ನಿ ದೀಪಾ ಹೆಗಡೆ ಅವರನ್ನು ಪೀಡಿಸುತ್ತಿದ್ದಾರೆ. ದೀಪಾ ಹೆಗಡೆ ಅವರು ತವರುಮನೆಯಿಂದ 20 ತೊಲೆ ಬಂಗಾರ ತಂದಿರಿಸಿದರೂ ಅದಕ್ಕೆ ತೃಪ್ತಿಯಾಗದ ಅಮೀತಕುಮಾರ ಹೆಗಡೆ ಅವರು ಮತ್ತೆ 30 ಲಕ್ಷ ರೂ ಬೇಡುತ್ತಿದ್ದಾರೆ.
ಶಿರಸಿ ಉಂಚಳ್ಳಿ ಬಳಿಯ ಕೇರೆಕೊಪ್ಪ ಅಮೀತಕುಮಾರ ಹೆಗಡೆ ಅವರ ಊರು. ದೊಡ್ಡ ಕಂಪನಿಯಲ್ಲಿ ಉನ್ನತ ಹುದ್ದೆಯ ಉದ್ಯೋಗಿಯಾಗಿರುವ ಅಮೀತಕುಮಾರ ಹೆಗಡೆ ಅವರು ಅಮೇರಿಕಾದಲ್ಲಿಯೂ ಕೆಲಸ ಮಾಡಿದ್ದಾರೆ. ಮನೆ ಕಡೆ ಅತಿಕ್ರಮಣ ತೋಟ, ಸುಂದರ ಸಂಸಾರ, ಕೈತುಂಬ ಸಂಬಳ ಬರುವ ಉದ್ಯೋಗವಿದ್ದರೂ ಅವರಲ್ಲಿನ ಹಣದ ದಾಹ ಮಾತ್ರ ತೀರಿಲ್ಲ. ಹೀಗಾಗಿ ಪತ್ನಿಯ ತವರು ಮನೆ ಆಸ್ತಿಯ ಮೇಲೆ ಕಣ್ಣು ಹಾಕಿದ ಅವರು ಅಲ್ಲಿಂದ ಕಾಸು ತಂದುಕೊಡುವoತೆ ಪೀಡಿಸುತ್ತಿದ್ದಾರೆ.
ಯಲ್ಲಾಪುರದ ಮಾವಿನಮನೆಯ ಗೋಗದ್ದೆಯಲ್ಲಿ ದೀಪಾ ಹೆಗಡೆ ಅವರು ವಾಸವಾಗಿದ್ದು, 2022ರ ಏಪ್ರಿಲ್ 22ರಂದು ಶಿರಸಿಯ ಗಡಿಹಳ್ಳಿ ಸಭಾಭವನದಲ್ಲಿ ಅಮೀತಕುಮಾರ ಹೆಗಡೆ ಅವರೊಂದಿಗೆ ದೀಪಾ ಹೆಗಡೆ ಅವರ ವಿವಾಹವಾಗಿದೆ. ಅಮಿತಕುಮಾರ ಹೆಗಡೆ ಹಾಗೂ ದೀಪಾ ಹೆಗಡೆ ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಎರಡೂ ಕುಟುಂಬದ ಒಪ್ಪಿಗೆ ಮೇರೆಗೆ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮವನ್ನು ನಡೆಸಲಾಗಿದೆ. ವಿವಾಹದ ಕಾಲದಲ್ಲಿಯೇ ದೀಪಾ ಹೆಗಡೆ ಕುಟುಂಬದವರು ವರೋಪಚಾರ ಎಂಬ ಹೆಸರಿನಲ್ಲಿ 50 ಸಾವಿರ ಹಣದ ಜೊತೆ 20 ತೊಲೆ ಬಂಗಾರವನ್ನು ಒಪ್ಪಿಸಿದ್ದಾರೆ. ಅದಾಗಿಯೂ, ಅಮಿತಕುಮಾರ ಹೆಗಡೆ ಅವರ ತಂದೆ ಸುರೇಶ ವೀರಭದ್ರ ಹೆಗಡೆ ಹಾಗೂ ಅನುಸೂಯಾ ಸುರೇಶ ಹೆಗಡೆ ಅವರು ಇನ್ನಷ್ಟು ಹಣಕ್ಕಾಗಿ ದೀಪಾ ಹೆಗಡೆ ಅವರನ್ನು ಮನೆಯಿಂದ ಹೊರಹಾಕಿದ್ದಾರೆ. ಮದುವೆ ನಂತರ ದೀಪಾ ಹೆಗಡೆ ಅವರು ಪತಿ ಅಮಿತಕುಮಾರ ಹೆಗಡೆ ಅವರ ಜೊತೆ ಅಮೇರಿಕಾಗೂ ಹೋಗಿ ಬಂದಿದ್ದಾರೆ. ವಿದೇಶದಲ್ಲಿಯೂ ಅಮಿತಕುಮಾರ ಹೆಗಡೆ ಅವರು ಅಮಾನವೀಯ ರೀತಿಯಲ್ಲಿ ವರ್ತಿಸಿ ಪತ್ನಿಗೆ ಹಿಂಸೆ ನೀಡಿದ್ದಾರೆ. `ಸ್ವಂತ ಭೂಮಿ ಖರೀದಿಗೆ ಕಾಸು ಕೊಡು’ ಎಂದು ಅಮೀತಕುಮಾರ ಹೆಗಡೆ ಅವರು ದೈಹಿಕವಾಗಿಯೂ ದಾಳಿ ಮಾಡಿದ್ದಾರೆ. ಶಿರಸಿಗೆ ಹಿಂತಿರುಗಿದ ನಂತರವೂ ಮತ್ತೆ ಹಣಕ್ಕಾಗಿ ವೀರಭದ್ರ ಹೆಗಡೆ ಹಾಗೂ ಅನುಸೂಯಾ ಹೆಗಡೆ ಅವರು ಕಾಡಿಸಿದ್ದು, ತವರುಮನೆಯಿಂದ ಮತ್ತೆ 30 ಲಕ್ಷ ರೂ ಹಣ ತರಲು ಒಪ್ಪದ ದೀಪಾ ಹೆಗಡೆ ಅವರ ಮೇಲೆ ಅತ್ತೆ-ಮಾವ ಸಹ ಹಿಂಸೆ ನೀಡಿದ್ದಾರೆ.
ಇದನ್ನು ಸಹಿಸದ ದೀಪಾ ಹೆಗಡೆ ಅವರು ದೂರು ನೀಡುವುದಾಗಿ ಎಚ್ಚರಿಸಿದಾಗ ಒಮ್ಮೆ ಸಮಾಧಾನಗೊಂಡ ಮಾವ ಹಾಗೂ ಅತ್ತೆ ಉಪಾಯವಾಗಿ ದೀಪಾ ಹೆಗಡೆ ಅವರ ಬಳಿಯಿದ್ದ ಚಿನ್ನಾಭರಣಗಳನ್ನು ತಮ್ಮ ವಶಕ್ಕೆಪಡೆದಿದ್ದಾರೆ. ಅದಾದ ನಂತರ ದೀಪಾ ಹೆಗಡೆ ಅವರನ್ನು ಶಿರಸಿ ಪೇಟೆಗೆ ಕರೆತಂದ ಮಾವ ವೀರಭದ್ರ ಹೆಗಡೆ, ಅವರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ದಿಕ್ಕು ತೋಚದ ಹಾಗಾದ ದೀಪಾ ಹೆಗಡೆ ಅವರು ಯಲ್ಲಾಪುರ ಬಸ್ ಹತ್ತಿ ತವರಿಗೆ ಬಂದಿದ್ದು, ಅದಾದ ನಂತರ ಪತಿ ಮನೆಯವರು ಸಂಪರ್ಕವನ್ನೇ ಮಾಡಿಲ್ಲ. ಅದಾಗಿಯೂ ಪೆಬ್ರವರಿ 9ರಂದು ದೀಪಾ ಹೆಗಡೆ ಅವರು ಪತಿ ಮನೆಯಾದ ಕೇರೆಕೊಪ್ಪಕ್ಕೆ ಹೋದಾಗ ಅತ್ತೆ-ಮಾವ ಅವರನ್ನು ಮನೆ ಒಳಗೆ ಸೇರಿಸಿಕೊಂಡಿಲ್ಲ.`30 ಲಕ್ಷ ರೂ ತಂದರೆ ಮಾತ್ರ ಮನೆಗೆ ಬಾ’ ಎಂದು ವೀರಭದ್ರ ಹೆಗಡೆ ಹಾಗೂ ಅನುಸೂಯಾ ಹೆಗಡೆ ಅವರು ಹೇಳಿದ್ದು, ಪತಿ ಅಮೀತಕುಮಾರ ಹೆಗಡೆ ಅವರ ಕುಟುಂಬದವರಿoದ ಆದ ಅನ್ಯಾಯದ ಬಗ್ಗೆ ದೀಪಾ ಹೆಗಡೆ ಅವರು ಅಳಲು ತೋಡಿಕೊಂಡಿದ್ದಾರೆ.
`ವರದಕ್ಷಿಣೆಪಡೆಯುವುದು ಅಪರಾಧ’