ಭಟ್ಕಳದ ರಘುನಾಥ್ ರಸ್ತೆ ಸಮೀಪ ಚರಂಡಿ ನೀರು ಬಾವಿ ಸೇರುತ್ತಿದೆ. 50ಕ್ಕೂ ಅಧಿಕ ಬಾವಿಗೆ ಕಲುಷಿತ ನೀರು ಸೇರಿದ್ದು, ಜನ ಸಮಸ್ಯೆಗೆ ಸಿಲುಕಿದ್ದಾರೆ.
ಇಲ್ಲಿನ ಮಣ್ಮುಳಿಯ ಪುಷ್ಪಾಂಜಲಿ ಟಾಕೀಸ್ ಬಳಿ ಯುಜಿಡಿ ಚೇಂಬರ್ ಸೋರಿಕೆಯಾಗಿದೆ. ಅಲ್ಲಿನ ಗಲೀಜು ನೀರು ಸುತ್ತಲಿನ ಕುಡಿಯುವ ನೀರಿನ ಬಾವಿಗೆ ಬರುತ್ತಿದೆ. ರಾಘವೇಂದ್ರ ಮಠದ ಸಮೀಪ ಯುಜಿಡಿ ಚೇಂಬರ್ ಬ್ಲಾಕ್ ಆಗಿರುವ ಪರಿಣಾಮ ಮಲಿನ ನೀರು ಹೊರಗೆ ಹೋಗಲು ಜಾಗವಿಲ್ಲ. ಕಳೆದ ಒಂದು ತಿಂಗಳಿನಿಸಿದ ಒಳಚರಂಡಿ ನೀರು ರಸ್ತೆಯ ಗಟಾರಿನಲ್ಲಿ ಹರಿಯುತ್ತಿದ್ದು, ದುರ್ವಾಸನೆಯೂ ಹೆಚ್ಚಾಗಿದೆ.
ಈ ಬಗ್ಗೆ ಜನ ನಗರಸಭೆಗೆ ದೂರು ನೀಡಿದ್ದಾರೆ. ಆದರೆ, ನಗರಸಭೆಯವರು `ನಮ್ಮ ವ್ಯಾಪ್ತಿಗೆ ಈ ಸಮಸ್ಯೆ ಬರಲ್ಲ’ ಎನ್ನುತ್ತ ಸುಮ್ಮನಾಗಿದ್ದಾರೆ. ಅದಾದ ನಂತರ ಹೆದ್ದಾರಿ ಕೆಲಸ ಮಾಡುವ ಐಆರ್ಬಿ ಕಂಪನಿಗೆ ಜನ ದೂರು ನೀಡಿದ್ದಾರೆ. `ಹೊಸ ಲೈನ್ಗೆ ಸಂಪರ್ಕ ಕಲ್ಪಿಸುವ ಮೊದಲು ನಗರಸಭೆಯವರು ಹಳೆಯ ಯುಜಿಡಿ ಸಂಪರ್ಕವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದರಿಂದ ಸಮಸ್ಯೆಯಾಗಿದೆ’ ಎಂದು ಹೇಳಿ ಐಆರ್ಬಿ ಅಧಿಕಾರಿಗಳು ತಪ್ಪಿಸಿಕೊಂಡಿದ್ದಾರೆ.
ರಘುನಾಥ್ ರಸ್ತೆಯ ಮಣ್ಮುಳಿ ಪುಷ್ಪಾಂಜಲಿ ಮಾರ್ಗದಲ್ಲಿ ತ್ಯಾಜ್ಯದ ನೀರು ನಿರಂತರವಾಗಿ ಹರಿಯುತ್ತಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಸಹ ಸಮಸ್ಯೆಗೆ ಸಿಲುಕಿದ್ದಾರೆ. ರೈಲ್ವೆ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಗಟಾರಿನ ನೀರು ಸಮೀಪದ ಬಾವಿಗಳಿಗೆ ಸೇರಿದ್ದರಿಂದ ಜನ ಆರೋಗ್ಯ ಸಮಸ್ಯೆಗೂ ಒಳಗಾಗಿದ್ದಾರೆ.