ಶಾಲೆಗೆ ಹೋಗುವ ಮಕ್ಕಳು ಮಾವಿನ ಹಣ್ಣು ಕೇಳಿದ್ದು, ಅವರು ಶಾಲೆಯಿಂದ ಬರುವುದರೊಳಗೆ ಹಣ್ಣು ತರಲು ಮರ ಏರಿದ್ದ ಬನವಾಸಿ ಬಳಿಯ ವೀರಭದ್ರ ಮಾರಿನಬೀಡ ಅವರು ಮರದಿಂದ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರು ಉನ್ನತ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ.
ಶಿರಸಿ ತಾಲೂಕಿನ ಬನವಾಸಿಯ ಕಡಗೋಡದಲ್ಲಿ ವೀರಭದ್ರ ನಿಂಗಪ್ಪ ಮಾರಿನಬೀಡ (48) ಅವರು ವಾಸವಾಗಿದ್ದರು. ಜೂನ್ 5ರಂದು ಅವರ ಮಕ್ಕಳು `ಮಾವಿನ ಹಣ್ಣು ತಿನ್ನಬೇಕು’ ಎಂದಿದ್ದರು. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ `ಸಂಜೆಯೊಳಗೆ ಹಣ್ಣು ತರುವೆ’ ಎಂದು ವೀರಭದ್ರ ಮಾರಿನಬೀಡ ಅವರು ಸಮಾಧಾನ ಮಾಡಿದ್ದರು. ಮಕ್ಕಳಿಗಿರುವ ಮಾವಿನ ಹಣ್ಣು ತಿನ್ನು ಆಸೆ ತೀರಿಸುವುದಕ್ಕಾಗಿ ಅವರು ಕಡಗೋಡ ಗ್ರಾಮದ ಅಶೋಕ ಗಣಪತಪ್ಪ ಗೌಡರ್ ಅವರ ಮನೆ ಹಿಂದಿನ ಮರ ಹತ್ತಲು ನಿರ್ಧರಿಸಿದ್ದರು.
ಈ ಬಗ್ಗೆ ವೀರಭದ್ರ ಅವರು ಪತ್ನಿ ಗೀತಾ ಮಾರಿನಬೀಡ ಅವರಿಗೆ ಹೇಳಿ ಮಧ್ಯಾಹ್ನ ಮಾವಿನ ಮರದ ಕಡೆ ಹೊರಟರು. ಮೂರು ಗಂಟೆ ಅವಧಿಗೆ ಅವರು ಮರ ಏರಿದ್ದು, ಹಣ್ಣು ಕೀಳುವಾಗ ಕಾಲು ಜಾರಿ ಬಿದ್ದರು. 15 ಅಡಿ ಎತ್ತರದಿಂದ ಬಿದ್ದ ಪರಿಣಾಮ ವೀರಭದ್ರ ಅವರಿಗೆ ಗಾಯವಾಯಿತು. 108 ಆಂಬುಲೆನ್ಸಿನ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವಿಷಯ ಕೇಳಿ ಗೀತಾ ಮಾರಿನಬೀಡ ಅವರ ತಾಯಿ ರತ್ನಮ್ಮ ಮಂಜಪ್ಪ ಕಬ್ಬೇರ್ ಅವರು ಆಸ್ಪತ್ರೆಗೆ ದೌಡಾಯಿಸಿದರು. ರತ್ಮನ್ನ ಅವರು ಮಗಳಿಗೆ ಫೋನು ಮಾಡಿದಾಗ ವೀರಭದ್ರ ಅವರು ಮಾತನಾಡಿದರು. ಆದರೆ, ಅದೇ ಅವರು ಪತ್ನಿ ಜೊತೆ ಆಡಿದ ಕೊನೆಯ ಮಾತುಗಳಾಗಿದ್ದವು.
ಅದಾದ ನಂತರ ವೀರಭದ್ರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ಕರೆದೊಯ್ಯುವ ಪ್ರಯತ್ನ ನಡೆಯಿತು. ಆದರೆ, ಅದು ಪ್ರಯೋಜನಕ್ಕೆ ಬರಲಿಲ್ಲ. ದಾರಿ ಮಧ್ಯೆಯೇ ಅವರು ಸಾವನಪ್ಪಿದರು.