ಮೀನು ಮಾರಾಟಕ್ಕಾಗಿ ಸ್ಕೂಟರ್ ಮೇಲೆ ಹೊರಟಿದ್ದ ದಂಪತಿಗೆ ಗೋಕರ್ಣದ ಬಳಿ ಕಾರು ಗುದ್ದಿದೆ. ಅಂಕೋಲಾ-ಗೋಕರ್ಣ ಸಮೀಪದ ದೇವರಬಾವಿ ಬಳಿ ಕಾರು ಹಾಗೂ ಸ್ಕೂಟರ್ ನಡುವೆ ಸೋಮವಾರ ಈ ಅಪಘಾತ ನಡೆದಿದೆ. ಸ್ಕೂಟರ್ ಸವಾರರಿಬ್ಬರು ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಮೈಸೂರಿನಿoದ ಗೋಕರ್ಣಕ್ಕೆ ಬರುತ್ತಿದ್ದ ಕಾರು ಅಂಕೋಲಾ ಕಡೆ ತೆರಳುತ್ತಿದ್ದ ಸ್ಕೂಟರ್ಗೆ ಡಿಕ್ಕಿಯಾಗಿದೆ. ಪರಿಣಾಮ ಸ್ಕೂಟರಿನಲ್ಲಿದ್ದ ತೊರೆಗಜನಿಯ ದಿನೇಶ ಶಂಕರ ಹರಿಕಂತ್ರ (49) ಸ್ಕೂಟರಿನಲ್ಲಿ ಹಿಂದೆ ಕುಳಿತಿದ್ದ ದೇವಕಿ ದಿನೇಶ ಹರಿಕಂತ್ರ(43) ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಅಪಘಾತ ನೋಡಿದ ಜನ ಆಂಬುಲೆನ್ಸಿಗೆ ಫೋನ್ ಮಾಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ ಜಗದೀಶ ನಾಯ್ಕ ಅವರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಅದಾದ ನಂತರ ಹೆಚ್ಚಿನ ಚಿಕಿತ್ಸೆಗೆ ಅವರಿಬ್ಬರನ್ನು ಕಾರವಾರಕ್ಕೆ ಕಳುಹಿಸಲಾಗಿದೆ. ಶುಶ್ರೂಷಕಿ ಮುಕ್ತಾ ತಲಗೇರಿ, ಸಿಬ್ಬಂದಿ ಅರುಣ ಅವರು ಗಾಯಾಳುವಿನ ಆರೈಕೆ ಮಾಡಿದ್ದಾರೆ. ದಿನೇಶ ಹಾಗೂ ದೇವಕಿ ಅವರು ಮೀನು ಮಾರಾಟಕ್ಕಾಗಿ ಅಂಕೋಲಾಗೆ ಹೋಗುವಾಗ ಈ ಅವಘಡ ನಡೆದಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ಎರಡು ತುಂಡಾಗಿದೆ.