ಶಿರಸಿ ನರೆಬೈಲಿನ ಗಣಪತಿ ಪೂಜಾರಿ ಅವರು ತಳಿ ಅಭಿವೃದ್ಧಿಗಾಗಿ ಉಂಚಳ್ಳಿ ಸೋಮನಳ್ಳಿಯ ಸುಬ್ರಾಯ ಹೆಗಡೆ ಅವರಿಂದ ಹಸುವೊಂದನ್ನುಪಡೆದಿದ್ದು, ಸಾಕಷ್ಟು ಬಾರಿ ಕೇಳಿದರೂ ಆ ಹಸುವನ್ನು ಮಾಲಕರಿಗೆ ಮರಳಿಸುತ್ತಿಲ್ಲ. ಗಣಪತಿ ಪೂಜಾರಿಯವರ ಮೇಲಿನ ನಂಬಿಕೆಯಿoದ 10 ವರ್ಷದ ಹಸು ಕೊಟ್ಟ ಸುಬ್ರಾಯ ಹೆಗಡೆ ಅವರಿಗೆ ಮೋಸವಾಗಿದೆ.
ಶಿರಸಿ ಬನವಾಸಿ ಬಳಿಯ ಸೋಮನಳ್ಳಿಯಲ್ಲಿ ಸುಬ್ರಾಯ ಗಣಪತಿ ಹೆಗಡೆ (65) ಅವರು ವಾಸವಾಗಿದ್ದಾರೆ. ಕೃಷಿಕರಾಗಿರುವ ಸುಬ್ರಾಯ ಹೆಗಡೆ ಅವರು ಹೈನುಗಾರಿಕೆಯನ್ನು ಮಾಡಿಕೊಂಡಿದ್ದು, ಅವರ ಕೊಟ್ಟಿಗೆಯಲ್ಲಿದ್ದ ಬಿಳಿ ಬಣ್ಣದ ಹಸುವಿನ ಮೇಲೆ ಶಿರಸಿ ನರೆಬೈಲಿನ ಗಣಪತಿ ಪೂಜಾರಿ ಅವರು ಕಣ್ಣು ಹಾಕಿದ್ದಾರೆ ಎಚ್ ಎಫ್ ಮಿಶ್ರ ತಳಿಯ ಆ ಹಸುವಿನ ಮೇಲೆ ಗಣಪತಿ ಪೂಜಾರಿ ಅವರಿಗೆ ಆಸೆ ಹುಟ್ಟಿದೆ. `ಆ ಹಸುವಿನ ತಳಿ ಅಭಿವೃದ್ಧಿ ಮಾಡುವೆ’ ಎಂದು ಗಣಪತಿ ಪೂಜಾರಿ ಅವರು ಪುಸಲಾಯಿಸಿದ್ದು, ಅದನ್ನು ನಂಬಿದ ಸುಬ್ರಾಯ ಹೆಗಡೆ ಅವರು 40 ಸಾವಿರ ರೂ ಮೌಲ್ಯದ ಹಸುವನ್ನು ಗಣಪತಿ ಪೂಜಾರಿ ಅವರಿಗೆ ನೀಡಿದ್ದಾರೆ.
`ಮೂರು ವರ್ಷ ಆ ಹಸು ಸಾಕಿ ನಂತರ ಮರಳಿಸಬೇಕು’ ಎಂದು ಸುಬ್ರಾಯ ಹೆಗಡೆ ಅವರು ಷರತ್ತು ಹಾಕಿದ್ದು, ಅದಕ್ಕೆ ಒಪ್ಪಿ ಗಣಪತಿ ಪೂಜಾರಿ ಅವರು ಹಸು ಒಯ್ದಿದ್ದಾರೆ. 2025ರ ಅವಧಿಯಲ್ಲಿ ಗಣಪತಿ ಪೂಜಾರಿ ಅವರ ಕೊಟ್ಟಿಗೆಯಲ್ಲಿ ಬಿಳಿ ಬಣ್ಣದ ಹಸು ಕಾಣಲಿಲ್ಲ. ಹೀಗಾಗಿ ಸುಬ್ರಾಯ ಹೆಗಡೆ ಅವರು `ತಮ್ಮ ಹಸು ಎಲ್ಲಿ?’ ಎಂದು ಗಣಪತಿ ಪೂಜಾರಿ ಅವರನ್ನು ಪ್ರಶ್ನಿಸಿದ್ದಾರೆ. ಪದೇ ಪದೇ ಪ್ರಶ್ನಿಸಿದಾಗಲೂ ಒಂದಿಲ್ಲೊoದು ಕಾರಣ ಹೇಳಿ ಗಣಪತಿ ಪೂಜಾರಿ ಅವರು ತಪ್ಪಿಸಿಕೊಂಡಿದ್ದಾರೆ. ಕೊನೆಗೆ `ತನ್ನ ಹಸು ತನಗೆ ಮರಳಿಸು’ ಎಂದು ಸುಬ್ರಾಯ ಹೆಗಡೆ ಅವರು ದುಂಬಾಲು ಬಿದ್ದಿದ್ದು, ಆಗ ಗಣಪತಿ ಪೂಜಾರಿ ಅವರು ಉಲ್ಟಾ ಹೊಡೆದಿದ್ದಾರೆ.
ಅದಾದ ನಂತರ ಸಾಕಷ್ಟು ಬಾರಿ ಸುಬ್ರಾಯ ಹೆಗಡೆ ಅವರು ಹಸುವಿನ ವಿಚಾರಕ್ಕಾಗಿ ಅಲೆದಾಡಿದ್ದಾರೆ. ಆದರೆ, ಗಣಪತಿ ಪೂಜಾರಿ ಅವರು ಆ ಹಸುವನ್ನು ಮಾತ್ರ ಮರಳಿಸಲು ಸಿದ್ಧವಾಗಿಲ್ಲ. ಗಣಪತಿ ಪೂಜಾರಿ ಅವರು ಫೋನ್ ಮಾಡಿಯೂ ಸುಬ್ರಾಯ ಹೆಗಡೆ ಅವರಿಗೆ ಬೆದರಿಕೆ ಒಡ್ಡಿದ್ದು, ಮತ್ತೆ ಹಸು ಕೇಳಿದರೆ ಕೊಂದು ಬಿಡುವೆ ಎಂದು ಹೆದರಿಸಿದ್ದಾರೆ. ಹಸು ಕಳೆದುಕೊಂಡ ಸುಬ್ರಾಯ ಹೆಗಡೆ ಅವರು ನ್ಯಾಯಕ್ಕಾಗಿ ಬನವಾಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. `ನನ್ನ ಹಸು ನನಗೆ ಕೊಡಿಸಿ’ ಎಂದವರು ಕೋರ್ಟಿನಲ್ಲಿಯೂ ಮನವಿ ಮಾಡಿದ್ದಾರೆ.