ಕುಮಟಾ ಬಾಡದ ಕಾಂಚಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಉದ್ಯಮಿ ವಾಸುದೇವ ಬೈಂದೂರು ಅವರು 2 ಕೋಟಿ ರೂ ಮೌಲ್ಯದ ಭೂಮಿ ನೀಡಿದ್ದಾರೆ. ಉಪನೋಂದಣಾಧಿಕಾರಿ ಕಚೇರಿ ಮೂಲಕ ಈ ಭೂಮಿಯನ್ನು ಅವರು ದಾನ ಮಾಡಿದ್ದಾರೆ.
ಬೈಂದೂರಿನ ಯಡ್ತಾರೆಯಲ್ಲಿ ವಾಸವಾಗಿರುವ ವಾಸುದೇವ ಬೈಂದೂರು ಅವರು 24.8 ಗುಂಟೆ ಭೂಮಿ ಹೊಂದಿದ್ದರು. ಅದನ್ನು ದೇವಿ ಸನ್ನಿಧಿಗೆ ಅರ್ಪಿಸಲು ಅವರು ಆಸಕ್ತರಾಗಿದ್ದರು. ಈ ಬಗ್ಗೆ ಅವರು ಕಾಂಚಿಕಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಎಸ್ ಎಸ್ ಹೆಗಡೆ ಅವರಲ್ಲಿ ಹೇಳಿಕೊಂಡಿದ್ದರು. ಭೂಮಿಯ ಬೆಲೆ 2 ಕೋಟಿ ರೂ ಮೌಲ್ಯದ್ದಾಗಿದ್ದು, ಅದನ್ನು ಸಂಪೂರ್ಣವಾಗಿ ದಾನವಾಗಿ ನೀಡುವ ಬಗ್ಗೆ ಅವರು ಘೋಷಿಸಿದ್ದರು.
ಅದರ ಪ್ರಕಾರ, ಮಂಗಳವಾರ ತಮ್ಮ ಒಡೆತನದ ಭೂಮಿಯನ್ನು ಅವರು ದೇವಿಗೆ ಅರ್ಪಿಸಿದರು. ದೇವಾಲಯದ ಪಶ್ಚಿಮ ದಿಕ್ಕಿನಲ್ಲಿರುವ ಜಾಗವನ್ನು ದೇಗುಲ ಆಡಳಿತ ಮಂಡಳಿಯವರು ಸ್ವೀಕರಿಸಿದರು. ಜಾಗದ ನೋಂದಾಯಿತ ದಾನ ಪತ್ರವನ್ನು ವಾಸುದೇವ ಬೈಂದೂರ್ ಅವರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರಿಗೆ ಹಸ್ತಾಂತರಿಸಿದರು. ದಾನಪತ್ರ ಸ್ವೀಕರಿಸಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ವಾಸುದೇವ ಬೈಂದೂರ ಅವರ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಆಡಳಿತ ಮಂಡಳಿ ಹಾಗೂ ಸಮಸ್ತ ಭಕ್ತರ ಪರವಾಗಿ ಉದ್ಯಮಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.