ಕುಮಟಾದ ಆಕಾಶ ಹರಿಕಂತ್ರ ಅವರಿಗೆ ಜಪಾನ್ ಸರ್ಕಾರ ಆಹ್ವಾನ ನೀಡಿದೆ. ಹೀಗಾಗಿ ಅವರು ವಿಮಾನ ಏರಿ ಜಪಾನ್’ಗೆ ಹೊಗಿ ಬಂದಿದ್ದಾರೆ.
ಕುಮಟಾದ ಕೋಡ್ಕಣಿ ಬಳಿಯ ಆಕಾಶ ಹರಿಕಂತ್ರ ಅವರು ಸದ್ಯ ನೆಲ್ಲಿಕೇರಿ ಸರ್ಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದಾರೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿರುವ ಅವರು 1ರಿಂದ 7ನೇ ತರಗತಿಯವರಿಗೆ ಕೊಡ್ಕಣಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದ್ದಾರೆ. 8ರಿಂದ 10ನೇ ತರಗತಿಯವರೆಗೆ ಬರ್ಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಾಂಗ ಮಾಡಿದ್ದಾರೆ.
8ನೇ ತರಗತಿಯಲ್ಲಿದ್ದಾಗ NMMS ಪರೀಕ್ಷೆ ಎದುರಿಸಿದ್ದ ಆಕಾಶ ಹರಿಕಂತ್ರ ಅವರು SSLCಯಲ್ಲಿಯೂ 621 ಅತ್ಯುತ್ತಮ ಅಂಕಪಡೆದಿದ್ದರು. ಅದರ ಪರಿಣಾಮ ಅವರಿಗೆ ಜಪಾನ್ ದೇಶ ಆಹ್ವಾನ ನೀಡಿದ್ದು, ಸದ್ಯ ಅಲ್ಲಿಗೆ ಭೇಟಿ ನೀಡಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಅನುಭವವನ್ನು ಪಡೆದಿದ್ದಾರೆ. ಪ್ರತಿಭೆ ಹೊಂದಿರುವ ವ್ಯಕ್ತಿಗಳಿಗೆ ಜಾಗತಿಕ ಮನ್ನಣೆ ದೊರೆಯಲಿದೆ ಎನ್ನುವುದಕ್ಕೆ ಗ್ರಾಮೀಣ ಪ್ರದೇಶದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುವ ಆಕಾಶ ಹರಿಕಂತ್ರ ಅವರು ಸಾಕ್ಷಿಯಾಗಿದ್ದಾರೆ. ಶಿಸ್ತು ಮತ್ತು ತಂತ್ರಜ್ಞಾನದ ದೇಶ ಎನಿಸಿರುವ ಜಪಾನ್ ಸರ್ಕಾರವು ತನ್ನ ಪ್ರತಿಷ್ಠಿತ ಸಕುರ ಸ್ಟೂಡೆಂಟ್ ಎಕ್ಸ್ಚೇಂಜ್ ಪ್ರೋಗ್ರಾಂ ಅಡಿಯಲ್ಲಿ ಅವರನ್ನು ಆಹ್ವಾನಿಸಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಅನುಭವವನ್ನು ಕಟ್ಟಿ ಕಳುಹಿಸಿದೆ. ಜಪಾನ್ ದೇಶದ ಶೈಕ್ಷಣಿಕ ವಾತಾವರಣ, ಸಂಶೋಧನಾ ಕೇಂದ್ರಗಳು ಮತ್ತು ಪ್ರಸಿದ್ಧ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡುವ ಅಪರೂಪದ ಅವಕಾಶ ಆಕಾಶ್ ಅವರಿಗೆ ಈ ಕಾರ್ಯಕ್ರಮದ ಮೂಲಕ ದೊರಕಿತ್ತು. ಪ್ರವಾಸದ ಅವಧಿಯಲ್ಲಿ ಅವರು ಜಪಾನಿನ ಸುಧಾರಿತ ವಿಜ್ಞಾನ ಪ್ರಯೋಗಾಲಯಗಳು ಮತ್ತು ಐತಿಹಾಸಿಕ ತಾಣಗಳಿಗೆ ಅವರು ಭೇಟಿ ನೀಡಿದ್ದರು.
ಈ ಪ್ರವಾಸದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದಾಗಿತ್ತು. ಜಪಾನ್ನ ಪ್ರಸಿದ್ಧ ವಿಶ್ವವಿದ್ಯಾಲಯಗಳು ಮತ್ತು ಅತ್ಯಾಧುನಿಕ ಸಂಶೋಧನಾ ಕೇಂದ್ರಗಳಿಗೆ ಭೇಟಿಗೆ ವ್ಯವಸ್ಥೆ ಮಾಡುವು ಮೂಲಕ ಜಪಾನ್ ಹೊಸತನಕ್ಕೆ ಎಷ್ಟ್ಟು ಆದ್ಯತೆ ನೀಡುತ್ತದೆ ಎಂಬುದನ್ನು ತಿಳಿಸಲಾಯಿತು. ವಿದ್ಯಾರ್ಥಿಗಳಿಗೆ ಅಲ್ಲಿನ ಸಂಶೋಧಕರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಭವಿಷ್ಯದ ತಂತ್ರಜ್ಞಾನವಾದ ಕ್ವಾಂಟಮ್ ಕಂಪ್ಯೂಟಿAಗ್ ಕ್ಷೇತ್ರದಲ್ಲಿ ನಡೆಸುತ್ತಿರುವ ಅದ್ಭುತ ಪ್ರಯೋಗಗಳನ್ನು ಕಣ್ಣಾರೆ ವೀಕ್ಷಿಸುವ ಅವಕಾಶ ಸಿಕ್ಕಿತು. ಬಾಹ್ಯಾಕಾಶ ಸಂಶೋಧನೆಯ ಹೆಮ್ಮೆಯ ಸಂಕೇತವಾದ ಸ್ಪೇಸ್ ಸೆಂಟರ್ ಹಾಗೂ ಜಪಾನ್ನ ವಿಶ್ವವಿಖ್ಯಾತ ಸಂಶೋಧನಾ ಸಂಸ್ಥೆಗಳಾದ ರಿಕೆನ್ ಮತ್ತು ಮಿರಾಕನ್ ಗಳಿಗೆ ಭೇಟಿ ನೀಡಲು ವ್ಯವಸ್ಥೆ ಮಾಡಲಾಗಿತ್ತು.
ಕರ್ನಾಟಕ ರಾಜ್ಯದಿಂದ 4 ವಿದ್ಯಾರ್ಥಿಗಳು ಮಾತ್ರ ಈ ಪ್ರವಾಸಕ್ಕೆ ಆಯ್ಕೆಯಾಗಿದ್ದು, ಮೇ 23ರಿಂದ 30ರವರೆಗೆ ನಡೆದ ಈ ಶೈಕ್ಷಣಿಕ ಪ್ರವಾಸಕ್ಕೆ ವಿಶೇಷ ವೀಸಾ ವ್ಯವಸ್ಥೆ ಮತ್ತು ಪ್ರವಾಸದ ಸಂಪೂರ್ಣ ವೆಚ್ಚವನ್ನು ಜಪಾನ್ ಸರ್ಕಾರವೇ ಭರಿಸಿತ್ತು. ವಿದ್ಯಾರ್ಥಿಗಳಿಗೆ ಅತ್ಯುತ್ತಮ ವಸತಿ ವ್ಯವಸ್ಥೆ ಹಾಗೂ ಪ್ರವಾಸದ ಮಾರ್ಗದರ್ಶನಕ್ಕಾಗಿ ಪ್ರತ್ಯೇಕ ಕೋ-ಆರ್ಡಿನೇಟರ್ (ಸಂಯೋಜಕರು) ನೇಮಿಸಲಾಗಿತ್ತು. ಸಾಕುರಾ ಸೈನ್ಸ್ ಎಕ್ಸ್ಚೇಂಜ್ ಪ್ರೋಗ್ರಾಂ ಇದು ಅಂತರರಾಷ್ಟ್ರೀಯ ಯುವ ವಿಜ್ಞಾನ ವಿನಿಮಯ ಕಾರ್ಯಕ್ರಮವಾಗಿದ್ದು, ಪ್ರಪಂಚದ ಪ್ರತಿಭಾವಂತ ಯುವಕರನ್ನು ಅಲ್ಪಾವಧಿಗೆ ಜಪಾನ್ಗೆ ಆಹ್ವಾನಿಸಲಾಗುತ್ತದೆ. ಜಪಾನ್ನ ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹತ್ತಿರದಿಂದ ನೋಡುವುದು ಮತ್ತು ಜಪಾನ್ನ ಯುವಕರೊಂದಿಗೆ ಸಂವಹನವನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಈ ಕಾರ್ಯಕ್ರಮವು ದೇಶ ಮತ್ತು ವಿದೇಶಗಳ ಯುವ ವಿಜ್ಞಾನ ಮತ್ತು ತಂತ್ರಜ್ಞಾನದ ಜನರಿಗೆ ಪರಸ್ಪರ ಅರ್ಥಮಾಡಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಆಕಾಶ್ ಅವರ ಈ ಸಾಧನೆ ಗ್ರಾಮೀಣ ಮತ್ತು ನಗರ ಪ್ರದೇಶದ ಇತರೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ದೊಡ್ಡ ಸ್ಫೂರ್ತಿಯಾಗಿದ್ದು, ಅಂತರರಾಷ್ಟ್ರೀಯ ಮಟ್ಟದ ಇಂತಹ ಎಕ್ಸ್ಚೇಂಜ್ ಕಾರ್ಯಕ್ರಮಗಳು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಜಾಗತಿಕ ದೃಷ್ಟಿಕೋನವನ್ನು ಬೆಳೆಸಲು ಸಹಕಾರಿಯಾಗಿವೆ.