ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸಲು ಸರಕಾರ ನಿರ್ಧರಿಸಿದೆ. ಸೌಲಭ್ಯ ನಿಜವಾದ ಅರ್ಹರಿಗೆ ಮಾತ್ರ ತಲುಪುವಂತೆ ಮಾಡಲು ದಾಖಲೆಗಳು, ಆಧಾರ್ ಕಾರ್ಡ್ ವಿವರ ಜೊತೆಗೆ ಇನ್ನಿತರ ಮಾಹಿತಿಯನ್ನು ಕಲೆಹಾಕಿ ಪರಿಶೀಲಿಸಲಿ ಅಧಿಕಾರಿಗಳು ಮುಂದಾಗಿದ್ದಾರೆ. ಇದರ ನಡುವೆ ಯೋಜನೆ ಪಡೆಯುತ್ತಿದ್ದವರಲ್ಲಿ ಗೊಂದಲವೂ ಸೃಷ್ಠಿಯಾಗಿದ್ದು, ಇಷ್ಟು ದಿನ ಪಡೆದ ಯೋಜನೆಯು ಕೈಬಿಟ್ಟು ಹೋಗುವ ಆತಂಕ ಎದುರಾಗಿದೆ.
ಕೆಲವು ಕಡೆಗಳಲ್ಲಿ ಅನರ್ಹರು ಸೌಲಭ್ಯ ಪಡೆಯುತ್ತಿರುವುದು ಹಾಗೂ ಸತ್ತವರ ಹೆಸರಿಲ್ಲಿಯೂ ಈ ಯೋಜನೆಗಳ ಸೌಲಭ್ಯ ಹೋಗುತ್ತಿದೆ. ಅದನ್ನು ತೆಗೆದುಕೊಂಡವರೂ ಕೂಡ ಸರಕಾರಕ್ಕೆ ನೈಜ ಮಾಹಿತಿ ನೀಡದೇ ಇರುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಮರುಪರಿಶೀಲನೆ ವೇಳೆ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಸರಿಯಾಗಿ ಹೊಂದಿರಬೇಕು. ಕೆಲವು ಸಂದರ್ಭಗಳಲ್ಲಿ ಬಯೋಮೆಟ್ರಿಕ್ ದೃಢೀಕರಣ ಅಥವಾ ದಾಖಲೆ ಪರಿಶೀಲನೆ ಕಡ್ಡಾಯವಾಗುವ ಸಾಧ್ಯತೆಯೂ ಇದೆ.
ಯೋಜನೆಗಳನ್ನು ರದ್ದು ಮಾಡಲ್ಲ: ಕೋಟ್ಯಂತರ ಜನರಿಗೆ ನೆರಳಾದ ಈ ಯೋಜನೆಗಳನ್ನು ರದ್ದು ಮಾಡುವ ಉದ್ದೇಶ ಸರಕಾರಕ್ಕಿಲ್ಲ. ಬದಲಾಗಿ ನೈಜ ಅರ್ಹರನ್ನು ಗುರುತಿಸಿ ಸೌಲಭ್ಯಗಳನ್ನು ಪಾರದರ್ಶಕವಾಗಿ ವಿತರಿಸುವುದಾಗಿದೆ. ಅಧಿಕಾರಿಗಳು ನೀಡುವ ಸೂಚನೆಗಳಿಗೆ ಸ್ಪಂದಿಸಿ ಅಗತ್ಯ ದಾಖಲೆಗಳನ್ನು ನವೀಕರಿಸಿದರೆ ಯೋಜನೆಗಳ ಲಾಭ ಪಡೆಯಲು ಯಾವುದೇ ತೊಂದರೆ ಇರುವುದಿಲ್ಲ. ಅರ್ಹತೆ ಇಲ್ಲದವರು ಅಥವಾ ತಪ್ಪು ಮಾಹಿತಿ ನೀಡಿರುವವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.