ಅಡಿಕೆಗೆ ಒಳ್ಳೆಯ ದರ ಬಂದಿರುವುದನ್ನು ನೋಡಿ ಗದ್ದೆಯನ್ನು ತೋಟ ಮಾಡಿದ್ದ ರೈತರೊಬ್ಬರು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ. ಭವಿಷ್ಯದಲ್ಲಿ ಇನ್ನಷ್ಟು ಆರ್ಥಿಕ ಸಂಕಷ್ಟ ಅನುಭವಿಸುವುದನ್ನು ತಡೆಯುವುದಕ್ಕಾಗಿ ಅವರು ಜೆಸಿಬಿ ಯಂತ್ರಗಳನ್ನು ಬಳಸಿ 800ಕ್ಕೂ ಅಧಿಕ ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾರೆ.
ಶಿರಸಿಯ ದನಗನಗಳ್ಳಿಯಲ್ಲಿ ರಾಕೇಶ್ ಅಗಸರ ಅವರು ವಾಸವಾಗಿದ್ದಾರೆ. ರಾಮಚಂದ್ರ ಅಗಸರ ಅವರ ಮರಣದ ನಂತರ ರಾಕೇಶ್ ಅಗಸರ ಅವರಿಗೆ ಪಿತ್ರಾರ್ಜಿತವಾಗಿ ಬಂದ ಭೂಮಿ ಬಂದಿದ್ದು, ಅಲ್ಲಿ ಅವರು ಅಡಿಕೆ ತೋಟ ಮಾಡಿದ್ದಾರೆ. 22 ವರ್ಷದ ರಾಕೇಶ ಅಗಸರ್ ಅವರು ಕೃಷಿಯಲ್ಲಿಯೇ ಸಾಧನೆ ಮಾಡಬೇಕು ಎಂಬ ಕನಸು ಕಂಡು ಅಡಿಕೆ ಗಿಡಗಳಿಗೆ ಸಾಕಷ್ಟು ಆರೈಕೆ ಮಾಡಿದ್ದಾರೆ. 4 ವರ್ಷದ ಹಿಂದೆ ಅವರು ಬೆಳೆದ ಅಡಿಕೆ ಗಿಡಗಳು ಬೆಳವಣಿಗೆ ಹೊಂದಿಲ್ಲ. ನೀರಿನ ಕೊರತೆಯಿಂದ ಅಡಿಕೆ ಗಿಡಗಳು ಸೊರಗುತ್ತಿದ್ದು. ಅಡಿಕೆ ಗಿಡಗಳಿಗೆ ನೀರುಣಿಸುವುದಕ್ಕಾಗಿ ಆರು ಬೋರ್ ವೆಲ್ ಸಹ ತೆಗೆದಿದ್ದಾರೆ. ಆದರೆ, ಅಗತ್ಯ ಪ್ರಮಾಣದಲ್ಲಿ ನೀರು ಸಿಕ್ಕಿಲ್ಲ.
ಈ ಭೂಮಿಯಲ್ಲಿನ ಐದು ಬೋರ್ ವೆಲ್ ವಿಫಲವಾಗಿದ್ದು, ಕಾಲಕ್ಕೆ ಸರಿಯಾಗಿ ಮಳೆಯೂ ಬಂದಿಲ್ಲ. ಆರನೇ ಬೋರ್ವೆಲ್’ನಲ್ಲಿ ಸಹ ನೀರು ಕಡಿಮೆಯಾದ ಕಾರಣ ಅಡಿಕೆ ಗಿಡಗಳು ಬಾಡಿದೆ. ಅವರು ಬೆಳೆಸಿದ್ದ ಅಡಿಕೆ ಗಿಡ ಒಣಗಲು ಶುರುವಾಗಿರುವುದನ್ನು ನೋಡಿ ಪರ್ಯಾಯ ದಾರಿಯಿಲ್ಲದೇ ಅವರು ತೋಟಕ್ಕೆ ಜೆಸಿಬಿ ನುಗ್ಗಿಸಿದ್ದಾರೆ. ಎರಡು ಎಕರೆ ಭೂಮಿಯಲ್ಲಿ ಬೆಳೆದಿದ್ದ ಸುಮಾರು ಎರಡು ವರ್ಷದ ಅಡಿಕೆ ಗಿಡಗಳನ್ನು ಅವರು ಶನಿವಾರ ನಾಶ ಮಾಡಿದ್ದಾರೆ. 800ಕ್ಕೂ ಅಧಿಕ ಅಡಿಕೆ ಗಿಡಗಳು ನೆಲಕ್ಕೆ ಉರುಳಿವೆ. ಲ
ಕ್ಷಾಂತರ ರೂಪಾಯಿ ಸಾಲ ಮಾಡಿ ಮಾಡಿದ್ದ ತೋಟವನ್ನು ಅವರೇ ಹಾಳು ಮಾಡಿದ್ದು, ಬೇರೆ ಬೆಳೆಯಿಂದಾದರೂ ಆ ಸಾಲ ತೀರಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತಮಗಾದ ನೋವಿನಿಂದಲೇ ಅವರು ತೋಟಕ್ಕೆ ಜೆಸಿಬಿ ನುಗ್ಗಿಸಿದ್ದು, ದಿನವೂ ಆರೈಕೆ ಮಾಡಿದ ಗಿಡಗಳು ನೆಲಕ್ಕೆ ಬೀಳುವುದನ್ನು ನೋಡಿ ರಾಕೇಶ್ ಅಗಸರ ಅವರ ಜೊತೆ ಕುಟುಂಬದವರು ಕಣ್ಣೀರು ಹಾಕಿದ್ದಾರೆ. `ಅಂತರ್ಜಲ ಕುಸಿದ ಕಾರಣ ಆರನೇ ಬೋರ್ವೆಲ್ ಸಹ ಕೈ ಕೊಟ್ಟಿತು. ಮುಂಗಾರು ಸಹ ಸರಿಯಾದ ಸಮಯಕ್ಕೆ ಬರಲಿಲ್ಲ. ತೋಟಕ್ಕೆ ನೀರು ಹರಿಸಲು ಸಾಧ್ಯವಾಗದೇ ಮುಂದೆ ತೋಟವನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ನಿರ್ಣಯಿಸಿ ಕಠಿಣ ನಿರ್ಧಾರ ಮಾಡಿದೆ’ ಎಂದು ಮಾಧ್ಯಮದ ಮುಂದೆ ರಾಕೇಶ್ ಅಗಸರ ಅವರು ಅಳಲು ತೋಡಿಕೊಂಡಿದ್ದಾರೆ. `ಈ ತೋಟ ನಂಬಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದೆ. ಈಗ ಸಾಲಗಾರರ ಕಾಟಕ್ಕೆ ಹೆದರುವ ಹಾಗಾಗಿದೆ’ ಎಂದು ಸಹ ಅವರು ಹೇಳಿದ್ದಾರೆ.