ಕಾರವಾರದ ಚೆಂಡಿಯಾದಲ್ಲಿ ರುಕ್ಕಾಂಗದ ನಾಯ್ಕ ಅವರು ಸಾರ್ವಜನಿಕ ರಸ್ತೆಗೆ ತಡೆಗೋಡೆ ನಿರ್ಮಿಸಿದ್ದು, ಸರ್ಕಾರಿ ಅಧಿಕಾರಿಗಳು ಆ ತಡೆಗೋಡೆ ತೆರವು ಮಾಡಿದ್ದಾರೆ. ಜನ ನೀಡಿದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ರಸ್ತೆ ಓಡಾಟಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ.
ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಿಂದ ಐಸ್ ಫ್ಯಾಕ್ಟರಿಯವರಗೆ ಅನಾಧಿಕಾಲದಿಂದಲೂ ರಸ್ತೆ ಸಂಪರ್ಕವಿದೆ. ಆ ರಸ್ತೆ ಕಾಲ ಕಾಲಕ್ಕೆ ಸುಧಾರಣೆಯಾಗುತ್ತ ಬಂದಿದ್ದು, ಸದ್ಯ ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗಿದೆ. ಆದರೆ, ಈಚೆಗೆ ಚೆಂಡಿಯಾ ಗ್ರಾಮದ ರುಕ್ಕಾಂಗದ ನಾಯ್ಕ ಅವರು ಆ ರಸ್ತೆಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿದ್ದಾರೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗಿದ್ದು, ಜನ ಗ್ರಾಮ ಪಂಚಾಯತಗೆ ದೂರು ನೀಡಿದ್ದಾರೆ. ರುಕ್ಕಾಂಗದ ನಾಯ್ಕ ಅವರು ಆ ಮಾರ್ಗವಾಗಿ ಓಡಾಡುವ ಜನರಿಗೆ ಅನಗತ್ಯ ತೊಂದರೆ ಮಾಡುತ್ತಿರುವ ಬಗ್ಗೆಯೂ ಅಲ್ಲಿನವರು ದೂರಿದ್ದಾರೆ.
ಈ ದೂರು ಆಲಿಸಿದ ಚೆಂಡಿಯಾ ಗ್ರಾಮ ಪಂಚಾಯತ್ ನ ಆಡಳಿತಾಧಿಕಾರಿ ಪ್ರಶಾಂತ್ ಎಚ್ ಎಸ್ ಅವರು ಭೂದಾಖಲೆಗಳ ಸಹಾಯಕ ನಿರ್ದೇಶಕರು, ಬಾಡ ಉಪತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಕಾನೂನು ಸಲಹೆಗಾರರ ಜೊತೆ ಚರ್ಚಿಸಿದ್ದಾರೆ. ಸಾಕಷ್ಟು ಪತ್ರ ವ್ಯವಹಾರದ ನಂತರ ಆ ರಸ್ತೆಗೆ ಅಡ್ಡಲಾಗಿದ್ದ ತಡೆಗೋಡೆ ಒಡೆಯುವ ನಿರ್ಣಯ ಮಾಡಿದ್ದಾರೆ. ಅದರಂತೆ, ಶುಕ್ರವಾರ ಪೊಲೀಸರ ಜೊತೆ ಸ್ಥಳಕ್ಕೆ ಹೋದ ಅವರು ಕಂದಾಯ ಅಧಿಕಾರಿಗಳ ಸಹಾಯಪಡೆದು ರಸ್ತೆಗೆ ಅಡ್ಡಲಾಗಿದ್ದ ತಡೆಗೋಡೆಯನ್ನು ತೆಗೆದಿದ್ದಾರೆ. ಜೊತೆಗೆ ಸಾರ್ವಜನಿಕರು ಮುಕ್ತವಾಗಿ ಆ ರಸ್ತೆಯಲ್ಲಿ ಓಡಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ.