ಕಾರವಾರದ ಚೆಂಡಿಯಾದಲ್ಲಿ ರುಕ್ಕಾಂಗದ ನಾಯ್ಕ ಅವರು ಸಾರ್ವಜನಿಕ ರಸ್ತೆಗೆ ತಡೆಗೋಡೆ ನಿರ್ಮಿಸಿದ್ದು, ಸರ್ಕಾರಿ ಅಧಿಕಾರಿಗಳು ಆ ತಡೆಗೋಡೆ ತೆರವು ಮಾಡಿದ್ದಾರೆ. ಜನ ನೀಡಿದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ರಸ್ತೆ ಓಡಾಟಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ.
Advertisement. Scroll to continue reading.
ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಿಂದ ಐಸ್ ಫ್ಯಾಕ್ಟರಿಯವರಗೆ ಅನಾಧಿಕಾಲದಿಂದಲೂ ರಸ್ತೆ ಸಂಪರ್ಕವಿದೆ. ಆ ರಸ್ತೆ ಕಾಲ ಕಾಲಕ್ಕೆ ಸುಧಾರಣೆಯಾಗುತ್ತ ಬಂದಿದ್ದು, ಸದ್ಯ ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗಿದೆ. ಆದರೆ, ಈಚೆಗೆ ಚೆಂಡಿಯಾ ಗ್ರಾಮದ ರುಕ್ಕಾಂಗದ ನಾಯ್ಕ ಅವರು ಆ ರಸ್ತೆಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿದ್ದಾರೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗಿದ್ದು, ಜನ ಗ್ರಾಮ ಪಂಚಾಯತಗೆ ದೂರು ನೀಡಿದ್ದಾರೆ. ರುಕ್ಕಾಂಗದ ನಾಯ್ಕ ಅವರು ಆ ಮಾರ್ಗವಾಗಿ ಓಡಾಡುವ ಜನರಿಗೆ ಅನಗತ್ಯ ತೊಂದರೆ ಮಾಡುತ್ತಿರುವ ಬಗ್ಗೆಯೂ ಅಲ್ಲಿನವರು ದೂರಿದ್ದಾರೆ.
ಈ ದೂರು ಆಲಿಸಿದ ಚೆಂಡಿಯಾ ಗ್ರಾಮ ಪಂಚಾಯತ್ ನ ಆಡಳಿತಾಧಿಕಾರಿ ಪ್ರಶಾಂತ್ ಎಚ್ ಎಸ್ ಅವರು ಭೂದಾಖಲೆಗಳ ಸಹಾಯಕ ನಿರ್ದೇಶಕರು, ಬಾಡ ಉಪತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಕಾನೂನು ಸಲಹೆಗಾರರ ಜೊತೆ ಚರ್ಚಿಸಿದ್ದಾರೆ. ಸಾಕಷ್ಟು ಪತ್ರ ವ್ಯವಹಾರದ ನಂತರ ಆ ರಸ್ತೆಗೆ ಅಡ್ಡಲಾಗಿದ್ದ ತಡೆಗೋಡೆ ಒಡೆಯುವ ನಿರ್ಣಯ ಮಾಡಿದ್ದಾರೆ. ಅದರಂತೆ, ಶುಕ್ರವಾರ ಪೊಲೀಸರ ಜೊತೆ ಸ್ಥಳಕ್ಕೆ ಹೋದ ಅವರು ಕಂದಾಯ ಅಧಿಕಾರಿಗಳ ಸಹಾಯಪಡೆದು ರಸ್ತೆಗೆ ಅಡ್ಡಲಾಗಿದ್ದ ತಡೆಗೋಡೆಯನ್ನು ತೆಗೆದಿದ್ದಾರೆ. ಜೊತೆಗೆ ಸಾರ್ವಜನಿಕರು ಮುಕ್ತವಾಗಿ ಆ ರಸ್ತೆಯಲ್ಲಿ ಓಡಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ.