ಉತ್ತರ ಕನ್ನಡದ ಪ್ರವಾಸಿ ತಾಣಗಳಿಗೆ ನಿತ್ಯ ಸಾವಿರಾರು ಜನ ಬರುತ್ತಿದ್ದು, ಮೋಜು ಮಸ್ತಿಯಲ್ಲಿ ಮೈ ಮರೆಯುತ್ತಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಸೆಲ್ಪಿ-ರೀಲ್ಸ್ ಮೋಹಕ್ಕೆ ಸಿಲುಕಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಮೊಬೈಲ್ ಮಾಯೆಯೊಳಗೆ ಮುಳುಗಿದ್ದ ಪ್ರವಾಸಿಗರೊಬ್ಬರು ಕುಮಟಾದಲ್ಲಿ ಈ ದಿನ ನೀರು ಪಾಲಾಗಿದ್ದಾರೆ.
ಕುಮಟಾದ ಕಡ್ಲೆ ಕಡಲತೀರದಲ್ಲಿ ರೀಲ್ಸ್ ಮಾಡುತ್ತಿದ್ದ ಜೀವನ ಭಟ್ಟಾರಾಯ್ (26) ಅವರು ಅದೇ ಸಮುದ್ರದಲ್ಲಿ ಮುಳುಗಿದ್ದಾರೆ. ಮಹಾರಾಷ್ಟçದ ಪೂಣೆಯ ಜೀವನ ಅವರು ತಮ್ಮ ಐವರು ಸ್ನೇಹಿತರ ಜೊತೆ ಕುಮಟಾಗೆ ಬಂದಿದ್ದರು. ಐಟಿ ಕಂಪನಿಯ ಉದ್ಯೋಗಿಯಾಗಿದ್ದ ಅವರೆಲ್ಲರೂ ಇಲ್ಲಿನ ಬ್ಲೂ ವೆಸ್ ರೆಸಾರ್ಟಿನಲ್ಲಿ ತಂಗಿದ್ದರು. ಸೋಮವಾರ ಬೆಳಗ್ಗೆ ರೂಮು ಖಾಲಿ ಮಾಡುವುದಾಗಿ ಅವರು ಹೇಳಿದ್ದರು. ಊರಿಗೆ ಹೋಗುವ ಮುನ್ನ ಕೊನೆಯದಾಗಿ ಸಮುದ್ರದಲ್ಲಿ ಆಟವಾಡಲು ಅವರೆಲ್ಲರೂ ತೆರಳಿದ್ದು, ಜೀವನ ಭಟ್ಟಾರಾಯ್ ಅವರು ಈ ವೇಳೆ ರೀಲ್ಸ್ ಮಾಡಲು ಮೊಬೈಲ್ ತೆಗೆದರು. ಸ್ನೇಹಿತರೆಲ್ಲರೂ ಸೇರಿ ಸಮುದ್ರದ ಬಳಿ ಕೆಲ ಫೋಟೋ ತೆಗೆದುಕೊಂಡಿದ್ದು, ಅದಾದ ನಂತರ ಜೀವನ ಅವರು ಅಪಾಯಕಾರಿ ಸ್ಥಳಕ್ಕೆ ಹೋಗಿ ವಿಡಿಯೋ ಮಾಡಲು ಶುರು ಮಾಡಿದ್ದರು.
ಈ ವೇಳೆ ಏಕಾಏಕಿ ಅಲೆಗಳ ಅಬ್ಬರ ಜೋರಾಗಿದ್ದು, ಮೊಬೈಲಿನಲ್ಲಿ ಮುಳುಗಿದ್ದ ಜೀವನ ಅವರಿಗೂ ಅಲೆಯೊಂದು ಬಡಿಯಿತು. ಆ ರಭಸಕ್ಕೆ ಅವರು ಸಮುದ್ರದಲ್ಲಿ ಕೊಚ್ಚಿ ಹೋದರು. ಜೀವನ ಅವರ ಜೊತೆ ಮತ್ತೊಬ್ಬರು ನೀರು ಪಾಲಾಗಿದ್ದು, ಅವರು ಈಜಿ ದಡ ಸೇರಿದರು. ಆದರೆ, ಜೀವನ ಭಟ್ಟಾರಾಯಿ ಅವರು ಮಾತ್ರ ಈವರೆಗೂ ಸಿಗಲಿಲ್ಲ. ಸದ್ಯ ಕಡ್ಲೆ ಕಡಲತೀರದಲ್ಲಿ ಅವರ ಶೋಧ ಮುಂದುವರೆದಿದೆ. ಸಾಕಷ್ಟು ಆಳ ಹಾಗೂ ದೂರದವರೆಗೆ ಹುಡುಕಿದರೂ ಜೀವನ ಅವರು ಕಾಣಿಸಿಲ್ಲ. ಕರಾವಳಿ ಕಾವಲು ಪಡೆ, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಜೊತೆ ಸ್ಥಳೀಯರು ಸಹ ಜೀವನ ಅವರ ಹುಡುಕಾಟ ನಡೆಸಿದ್ದಾರೆ.