ಭಟ್ಕಳದ ಗುರು ಸುಧೀಂದ್ರ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಗಾಯತ್ರಿ ನಾಯ್ಕ ಅವರು ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಕಾಲೇಜು ಶುಲ್ಕ ಪಾವತಿ ಸಾಧ್ಯವಾಗದೇ ಅವರು ದುಡುಕು ನಿರ್ಧಾರ ಮಾಡಿದ್ದು, ಬೆಳಕೆ ಕಂಚಿಕೇರಿ ಬಳಿಯ ಬಾವಿಯಲ್ಲಿ ಗಾಯತ್ರಿ ನಾಯ್ಕ ಅವರ ಶವ ಸಿಕ್ಕಿದೆ.
ಭಟ್ಕಳ ಬೆಳಕೆಯ ಕಂಚಿಕೇರಿಯಲ್ಲಿ ಗಾಯಿತ್ರಿ ನಾಗರಾಜ ನಾಯ್ಕ ಅವರು ವಾಸವಾಗಿದ್ದರು. 19 ವರ್ಷದ ಅವರು ಭಟ್ಕಳದ ಗುರುಸುಧೀಂದ್ರ ಕಾಲೇಜಿನಲ್ಲಿ ಓದುತ್ತಿದ್ದರು. ಬಿಸಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದ ಅವರು ಗುರುವಾರವೇ ಕಾಣೆಯಾಗಿದ್ದರು. ಗಾಯತ್ರಿ ನಾಯ್ಕ ಅವರಿಗಾಗಿ ಎಲ್ಲಡೆ ಶೋಧ ನಡೆದಿದ್ದು, ಅವರು ಸಿಗದ ಕಾರಣ ಪಾಲಕರು ಪೊಲೀಸರ ಮೊರೆ ಹೋಗಿದ್ದರು.
ಶೋಧ ಕಾರ್ಯಾಚರಣೆ ವೇಳೆ ಬಳಿಯ ಬಾವಿಯಲ್ಲಿ ಯುವತಿಯ ಶವ ಸಿಕ್ಕಿದ್ದು, ಅದನ್ನು ಹೊರ ತೆಗೆದಾಗ ಗಾಯತ್ರಿ ನಾಯ್ಕ ಅವರು ಸಾವನಪ್ಪಿರುವುದು ಗೊತ್ತಾಯಿತು. ಕಾಲೇಜಿನ ಶುಲ್ಕ ಪಾವತಿಗೆ ಸಾಧ್ಯವಾಗದೇ ಮನನೊಂದು ವಿದ್ಯಾರ್ಥಿನಿ ಸಾವನಪ್ಪಿದ ಬಗ್ಗೆ ಮಾಹಿತಿಯಿದೆ. ಮನೆಯವರು ಕಾಲೇಜು ಶಿಕ್ಷಣಕ್ಕಾಗಿ ನೀಡಿದ ಹಣವನ್ನು ಗಾಯತ್ರಿ ನಾಯ್ಕ ಅವರು ಪರಿಚಿತ ಯುವಕರೊಬ್ಬರಿಗೆ ನೀಡಿದ್ದು, ಆ ಯುವಕ ಹಣ ಮರಳಿಸದ ಕಾರಣ ಕಾಲೇಜು ಶುಲ್ಕ ಪಾವತಿ ಆಗಿರಲಿಲ್ಲ. ಹೀಗಾಗಿ ಗಾಯತ್ರಿ ನಾಯ್ಕ ಅವರಿಗೆ ಪರೀಕ್ಷೆಯ ಪ್ರವೇಶ ಪತ್ರ ಸಿಕ್ಕಿರಲಿಲ್ಲ.
ಅದೇ ನೋವಿನಲ್ಲಿ ಗಾಯತ್ರಿ ನಾಯ್ಕ ಅವರು ದುಡುಕು ನಿರ್ಧಾರಕ್ಕೆ ಒಳಗಾದ ಬಗ್ಗೆ ಮಾತುಗಳಿವೆ. ಆದರೆ, ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಆಗಿಲ್ಲ. ಸಾವಿನ ಬಗ್ಗೆ ಜನ ಸಾಕಷ್ಟು ಅನುಮಾನವ್ಯಕ್ತಪಡಿಸಿದ್ದು, ಪೊಲೀಸ್ ತನಿಖೆಯಿಂದ ಸತ್ಯ ಹೊರಬರಬೇಕಿದೆ.