ಗೃಹಲಕ್ಷ್ಮೀ ಯೋಜನೆ ಅಡಿ ಫಲಾನುಭವಿ ಖಾತೆಗೆ ಜಮಾ ಆಗಬೇಕಿದ್ದ ಹಣ ಉಳಿಸುವುದಕ್ಕಾಗಿ ಸರ್ಕಾರ ಇದೀಗ ಹೊಸ ಐಡಿಯಾ ಮಾಡಿದೆ. ಬದುಕಿರುವವರನ್ನು ಸಹ ದಾಖಲೆಗಳ ಪ್ರಕಾರ ಸಾಯಿಸಿ, ಅವರ ಖಾತೆಗೆ ಬರಬೇಕಿದ್ದ ಹಣವನ್ನು ಉಳಿಸುತ್ತಿದೆ!
ಕುಮಟಾದ ರಾಧಾ ಹೆಗಡೆ ಅವರು ಬದುಕಿದ್ದರೂ ಸರ್ಕಾರ ದಾಖಲೆಗಳ ಪ್ರಕಾರ ಅವರನ್ನು ಸಾಯಿಸಿದೆ. ಆ ಮೂಲಕ ಅವರ ಖಾತೆಗೆ ಜಮಾ ಆಗಬೇಕಿದ್ದ ಗೃಹಲಕ್ಷ್ಮೀ ಹಣವನ್ನು ಉಳಿಸಿಕೊಂಡಿದೆ. ಕುಮಟಾ ಚಿತ್ರಗಿಯ ರಾಧಾ ವಿಷ್ಣು ಹೆಗಡೆ ಹೆಗಡೆ ಅವರು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಆಗಿದ್ದರು. ಎಲ್ಲರ ಹಾಗೇ ಅವರಿಗೂ ಮಾಸಿಕ 2 ಸಾವಿರ ರೂ ಬರುತ್ತಿತ್ತು. ಆದರೆ, ಕಳೆದ ಐದು ತಿಂಗಳಿನಿoದ ಅವರ ಖಾತೆಗೆ ಹಣ ಜಮಾ ಆಗಿರಲಿಲ್ಲ. ಈ ಬಗ್ಗೆ ಅವರು ಅಲ್ಲಲ್ಲಿ ವಿಚಾರಿಸಿದಾಗ ಅವರ ಸಾವಿನ ಸಂಗತಿ ಅವರ ಗಮನಕ್ಕೆ ಬಂದಿತು. ನುಡಿದಂತೆ ನಡೆಯುವುದಾಗಿ ಹೇಳಿದ ಸರ್ಕಾರ 2 ಸಾವಿರ ರೂ ಹಣ ಉಳಿಸುವುದಕ್ಕಾಗಿ ಜೀವಂತವಾಗಿರುವವರನ್ನೇ ಸಾಯಿಸಿರುವುದನ್ನು ನೋಡಿ ರಾಧಾ ಹೆಗಡೆ ಅವರು ಆಘಾತಕ್ಕೆ ಒಳಗಾದರು. `ತಾನೂ ಇನ್ನು ಬದುಕಿದ್ದೇನೆ’ ಎಂದು ಸಾಭೀತು ಮಾಡುವುದಕ್ಕಾಗಿ ಅವರು ಇದೀಗ ಹೋರಾಟ ಶುರು ಮಾಡಿದ್ದಾರೆ. ಶಾಸಕ ದಿನಕರ ಶೆಟ್ಟಿ ಅವರನ್ನು ಭೇಟಿಯಾಗಿ ತಾನೂ ಬದುಕಿರುವ ಬಗ್ಗೆ ಪ್ರಮಾಣ ಮಾಡಿದ್ದಾರೆ!
ಸರ್ಕಾರ ತನ್ನನ್ನು ಸಾಯಿಸಿರುವ ಬಗ್ಗೆ ರಾಧಾ ಹೆಗಡೆ ಅವರು ಮೊದಲು ಪುರಸಭೆ ಮಾಜಿ ಅಧ್ಯಕ್ಷ ಸಂತೋಷ ನಾಯ್ಕ ಅವರ ಬಳಿ ಹೇಳಿದರು. ಈ ವಿಷಯದಿಂದ ಆಘಾತಕ್ಕೆ ಒಳಗಾದ ಸಂತೋಷ ನಾಯ್ಕ ಅವರು ರಾಧಾ ಹೆಗಡೆ ಅವರನ್ನು ಶಾಸಕರ ಮುಂದೆ ಕರೆದೊಯ್ದರು. ಶಾಸಕರು ಸಹ ಸರ್ಕಾರದ ವಿಚಿತ್ರ ನಡೆಯನ್ನು ನೋಡಿ ಗಲಿಬಿಲಿಗೊಂಡರು. ದಿನಕರ ಶೆಟ್ಟಿ ಅವರೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಫೋನ್ ಮಾಡಿ ರಾಧಾ ಹೆಗಡೆ ಅವರ ಬಗ್ಗೆ ವಿಚಾರಿಸಿದಾಗ ಅಲ್ಲಿನ ಅಧಿಕಾರಿಯವರು ರಾಧಾ ಹೆಗಡೆ ಅವರು ಸಾವನಪ್ಪಿರುವ ವಿಷಯ ತಿಳಿಸಿದರು. ಕಣ್ಣ ಮುಂದೆಯೇ ರಾಧಾ ಹೆಗಡೆ ಅವರು ನಿಂತಿರುವಾಗ ಅವರು ಸಾವನಪ್ಪಿರುವ ಬಗ್ಗೆ ಅಧಿಕಾರಿಗಳು ಆಡಿದ ಮಾತು ಕೇಳಿ ಶಾಸಕರು ಸಹ ತಬ್ಬಿಬ್ಬಾದರು.
`ನಾನು ಬಡವೆ. ನನಗೆ ಹಣ ಬರವಂತೆ ಮಾಡಿಕೊಡಿ’ ಎಂದು ರಾಧಾ ಹೆಗಡೆ ಅವರು ಶಾಸಕರಲ್ಲಿ ವಿನಂತಿಸಿದ್ದು, ಮತ್ತೆ ಅಧಿಕಾರಿಗಳನ್ನು ಸಂಪರ್ಕಿಸಿದ ದಿನಕರ ಶೆಟ್ಟಿ ಅವರು `ರಾಧಾ ಹೆಗಡೆ ಅವರು ಸತ್ತಿಲ್ಲ. ಅವರ ಖಾತೆಗೆ ಹಣ ಬಿಡುಗಡೆ ಮಾಡಿ’ ಎಂದು ಸೂಚಿಸಿದರು. `ಬದುಕಿದ್ದರೂ ಸಾವನಪ್ಪಿದ ಬಗ್ಗೆ ದಾಖಲಿಸಿದವರಿಗೆ ಶಿಕ್ಷೆಯಾಗಬೇಕು’ ಎಂದು ರಾಧಾ ಹೆಗಡೆ ಅವರು ಆಗ್ರಹಿಸಿದರು.