ಸಿದ್ದಾಪುರ ಕಾನಸೂರಿನ ಇಂದಿರಾಗಾoಧಿ ವಸತಿ ಶಾಲೆಯ ವಿದ್ಯಾರ್ಥಿ ಗೋಕುಲ ಗೌಡ ಅವರ ಸಾವಿನ ಪ್ರಕರಣ ಇದೀಗ ಮತ್ತೊಂದು ಸ್ವರೂಪಪಡೆದಿದೆ. ಆ ಶಾಲೆಯ ಶಿಕ್ಷಕರೊಬ್ಬರು ವಿದ್ಯಾರ್ಥಿನಿ ಜೊತೆ ಶೌಚಾಲಯದ ಬಳಿ ಅಸಭ್ಯವಾಗಿ ವರ್ತಿಸಿದನ್ನು ಗೋಕುಲ ಗೌಡ ಅವರು ನೋಡಿದ್ದು, ಅದನ್ನು ತಾಯಿ ಬಳಿ ಹೇಳಿದ್ದೇ ಸಾವಿಗೆ ಕಾರಣ ಎಂಬ ಅನುಮಾನ ಶುರುವಾಗಿದೆ. ಗೋಕುಲ ಗೌಡ ಅವರ ಸಾವಿನ ಸಮಯದಲ್ಲಿ ಇಡೀ ಊರಿನಲ್ಲಿ ಕರೆಂಟ್ ಇದ್ದರೂ ಹಾಸ್ಟೇಲಿನಲ್ಲಿ ಮಾತ್ರ ಬೆಳಕು ಕಾಣದಿರುವುದು ಇನ್ನಷ್ಟು ಶಂಕೆಗೆ ಕಾರಣವಾಗಿದೆ.
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಬಳಿಯ ಹುತಗಾರದಲ್ಲಿ ಕೃಷ್ಣ ಗೌಡ ಅವರು ವಾಸವಾಗಿದ್ದು, ಅವರು ತಮ್ಮ ಪುತ್ರ ಗೋಕುಲ ಗೌಡ ಅವರನ್ನು ಹಾಸ್ಟೇಲಿಗೆ ಹಾಕಿದ್ದರು. 15 ವರ್ಷದ ಗೋಕುಲ ಗೌಡ ಅವರು ಕಾನಸೂರಿನ ಇಂದಿರಾಗಾoಧಿ ವಸತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದರು. ಎಲ್ಲರ ಜೊತೆ ಅನ್ಯೋನ್ಯವಾಗಿಯೇ ಇದ್ದ ಗೋಕುಲ ಗೌಡ ಅವರು 2026ರ ಜೂನ್ 9ರಂದು ಸಂಜೆ ಶಾಲಾ ಆವರಣದಲ್ಲಿನ ಬಟ್ಟೆ ಒಣಗಿಸುವ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಗೋಕುಲ ಗೌಡ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಯಾವ ಸಮಸ್ಯೆಯೂ ಅವರಿಗಿರಲಿಲ್ಲ. ಮಾನಸಿಕವಾಗಿ ಅತ್ಯಂತ ದೃಢವಾಗಿದ್ದ ಗೋಕುಲ ಗೌಡ ಅವರ ಸಾವು ಎಲ್ಲರಿಗೂ ಆಘಾತ ತಂದಿತ್ತು. ಸಾವಿನ ಬಗ್ಗೆ ಸಂಶಯವ್ಯಕ್ತವಾದಾಗ ಶಿಕ್ಷಕರೊಬ್ಬರ ಕಾಮ ಪುರಾಣ ಹೊರ ಬಂದಿತ್ತು!
ಗೋಕುಲ ಗೌಡ ಅವರು ಸಿದ್ದಾಪುರದ ಕಾನಸೂರಿನಲ್ಲಿರುವ ಇಂದಿರಾಗಾAಧಿ ವಸತಿ ಶಾಲೆಯಲ್ಲಿ ಕಳೆದ 2 ವರ್ಷದಿಂದ ವ್ಯಾಸಂಗ ಮಾಡುತ್ತಿದ್ದರು. ಜಯಶ್ರೀ ಗೌಡ ಅವರು ಆಗಾಗ ಮಗನನ್ನು ನೋಡಲು ಹಾಸ್ಟೇಲಿಗೆ ಭೇಟಿ ನೀಡುತ್ತಿದ್ದರು. ಕಳೆದ ಬಾರಿ ಜಯಶ್ರೀ ಗೌಡ ಅವರು ಹಾಸ್ಟೇಲಿಗೆ ಹೋದಾಗ ಗೋಕುಲ ಗೌಡ ಅವರ ಕುತ್ತಿಗೆ ಉಬ್ಬಿತ್ತು. ಆಗಲೇ ಜಯಶ್ರೀ ಗೌಡ ಅವರು ಈ ಬಗ್ಗೆ ಪ್ರಶ್ನಿಸಿದ್ದರು. ಆಗ, ಗೋಕುಲ ಗೌಡ ಅವರು ಏನೂ ಹೇಳಿರಲಿಲ್ಲ. ಮತ್ತೊಮ್ಮೆ ಪ್ರಶ್ನಿಸಿದಾಗ `ಅಬ್ಬು ಸರ್ ಕುತ್ತಿಗೆ ಹಿಡಿದು ಎತ್ತಿದ್ದಾರೆ. ಮನೆಗೆ ಬಂದಾಗ ಎಲ್ಲಾ ವಿಷಯ ತಿಳಿಸುವೆ’ ಎಂದು ಗೋಕುಲ ಗೌಡ ಅವರು ಹೇಳಿದ್ದರು. ಏಪ್ರಿಲ್ ರಜೆಗೆ ಗೋಕುಲ ಗೌಡ ಅವರು ಮನೆಗೆ ಬಂದಿದ್ದರು. ಈ ವೇಳೆ ಹಾಸ್ಟೇಲಿನಲ್ಲಿ ನಡೆಯುವ ಅನೇಕ ವಿಚಾರಗಳ ಬಗ್ಗೆ ತಾಯಿ ಬಳಿ ಮಾತನಾಡಿದ್ದರು. `ಹಿಂದಿ ಪಾಠ ಮಾಡುವ ಅಬ್ಬು ಸರ್ 9ನೇ ತರಗತಿ ಹುಡುಗಿ ಜೊತೆ ಬಾತ್ ರೂಮಿನ ಸಮೀಪ ಅಸಭ್ಯ ವರ್ತನೆ ಮಾಡಿದ್ದಾರೆ. ಅದನ್ನು ತಾನು ನೋಡಿದ್ದು, ಈ ವಿಚಾರ ಯಾರಿಗೂ ಹೇಳಬೇಡ. ಹೇಳಿದರೆ ಸಾಯಿಸುವೆ ಎಂದು ಕುತ್ತಿಗೆ ಹಿಡಿದು ಎತ್ತಿದ್ದಾರೆ’ ಎಂಬ ವಿಷಯವನ್ನು ಬಾಯ್ಬಿಟ್ಟಿದ್ದರು.
ಇದರಿಂದ ಆತಂಕಕ್ಕೆ ಒಳಗಾದ ಜಯಶ್ರೀ ಗೌಡ ಅವರು ಈ ಎಲ್ಲಾ ವಿಷಯವನ್ನು ದೊಡ್ಡ ಮಗನ ಬಳಿ ಹೇಳಿದ್ದರು. `ಅಬ್ಬು ಸರ್ ಮೊದಲು ಹಾರ್ಸಿಕಟ್ಟಾ ಮುರಾರ್ಜಿ ಶಾಲೆಯಲ್ಲಿದ್ದರು. ಅಲ್ಲಿಯೂ ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿದ ಕಾರಣ ವರ್ಗಾವಣೆ ಆಗಿದ್ದಾರೆ’ ಎಂದು ಈ ವೇಳೆ ದೊಡ್ಡ ಮಗ ಸಹ ಹೇಳಿದ್ದರು. ಈ ಎಲ್ಲದರ ನಡುವೆ ಗೋಕುಲ ಗೌಡ ಅವರು ಮತ್ತೆ ಅದೇ ಹಾಸ್ಟೇಲ್ ಸೇರಿದರು. ಜೂನ್ 9ರಂದು ಇಂದಿರಾಗಾAಧಿ ವಸತಿ ಶಾಲೆಯ ನವೀನ್ ಅವರು ಕೃಷ್ಣ ಗೌಡ ಅವರಿಗೆ ಫೋನ್ ಮಾಡಿ, `ಸಿರಿಯಸ್ ಇದೆ. ಜಯಶ್ರೀ ಅವರನ್ನು ಕರೆದುಕೊಂಡು ಬನ್ನಿ’ ಎಂದು ಸೂಚಿಸಿದರು. ಕೂಡಲೇ ಜಯಶ್ರೀ ಗೌಡ ಅವರು ಅಡುಗೆ ಸಿಬ್ಬಂದಿಗೆ ಫೋನ್ ಮಾಡಿದ್ದು, `ಮಗನಿಗೆ ಪೆಟ್ಟಾಗಿದೆ’ ಎಂಬ ಮಾಹಿತಿ ಸಿಕ್ಕಿತು. ಕೃಷ್ಣ ಗೌಡ ಹಾಗೂ ಜಯಶ್ರೀ ಗೌಡ ಅವರು ಶಿರಸಿ ಆಸ್ಪತ್ರೆಗೆ ಹೋದಾಗ ಅಲ್ಲಿದ್ದ ಮತ್ತೊಬ್ಬ ಶಿಕ್ಷಕರು `ಗೋಕುಲ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದರು. `ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ’ ಎಂದು ಜಯಶ್ರೀ ಗೌಡ ಅವರು ಜೋರಾಗಿ ಹೇಳಿದರೂ ಸಹ ಅದನ್ನು ಕೇಳುವವರಿರಲಿಲ್ಲ.
ಅದಾದ ನಂತರ ಜಯಶ್ರೀ ಗೌಡ ಅವರಿಗೆ ಹಳೆಯದೆಲ್ಲವೂ ನೆನಪಾಯಿತು. ಅಬ್ಬು ಸರ್ ಅಸಭ್ಯವಾಗಿ ವರ್ತಿಸಿದನ್ನು ಗೋಕುಲ ಗೌಡ ಅವರು ನೋಡಿದ್ದು, ಗೋಕಲ ಗೌಡ ಅವರನ್ನು ಬೆದರಿಸಿ ಕುತ್ತಿಗೆ ಹಿಡಿದು ಎತ್ತಿದ್ದು, ಬಿಸ್ಕತ್ ತಿಂದ ಎಂಬ ಸಣ್ಣ ಕಾರಣಕ್ಕೆ ಅಬ್ಬು ಸರ್ ಗೋಕುಲ ಗೌಡ ಅವರಿಗೆ ಥಳಿಸಿದ್ದು ಹಾಗೂ ಮುಖ್ಯವಾಗಿ ಗೋಕುಲ ಗೌಡ ಅವರು ಸಾವನಪ್ಪುವ ವೇಳೆ ಹಾಸ್ಟೇಲ್ ಕರೆಂಟ್ ಕಡಿತವಾಗಿದ್ದು ಜಯಶ್ರೀ ಅವರ ಅನುಮಾನ ಹೆಚ್ಚಿಸಿತು. ಊರಿನ ಎಲ್ಲಡೆ ಕರೆಂಟ್ ಇದ್ದರೂ ಆ ವೇಳೆ ಹಾಸ್ಟೇಲಿನಲ್ಲಿ ಮಾತ್ರ ಕರೆಂಟ್ ಇಲ್ಲದಿರುವುದು ಅಚ್ಚರಿಯನ್ನು ಮೂಡಿಸಿತು. `ಅಬ್ಬು ಸರ್ ಅಸಭ್ಯವಾಗಿ ವರ್ತಿಸಿದನ್ನು ನೋಡಿದ್ದು, ಅದನ್ನು ಯಾರಿಗಾದರೂ ಹೇಳಿದರೆ ಎಂಬ ಭಯದಿಂದ ಗೋಕುಲ ಗೌಡ ಅವರ ಸಾವಾಗಿರುವ ಸಾಧ್ಯತೆಯಿದೆ’ ಎಂದು ಜಯಶ್ರೀ ಗೌಡ ಅವರು ದೂರು ನೀಡದರು. `ಇದು ಆತ್ಮಹತ್ಯೆ ಅಲ್ಲ. ಕೊಲೆ’ ಎಂದು ಜಯಶ್ರೀ ಗೌಡ ಅವರು ದೂರಿದ್ದು, ಸಮಗ್ರ ತನಿಖೆಗಾಗಿ ಜೂನ್ 23ರಂದು ಪೊಲೀಸ್ ಪ್ರಕರಣ ದಾಖಲಿಸಿದರು.