`ಕೌಶಲ್ಯಾಧಾರಿತ ವ್ಯಕ್ತಿತ್ವವನ್ನು ರೂಪಿಸುವುದರಿಂದ ಸದೃಢ ಭಾರತದ ಸ್ಕಿಲ್ ಇಂಡಿಯಾ ಕನಸು ನನಸಾಗಿಸಲು ಸಾಧ್ಯ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಸ್ಕೊಡ್ವೆಸ್ ಸಂಸ್ಥೆ, ಗುಜರಾತ್ನ ದೇಸಾಯಿ ಫೌಂಡೇಶನ್ ಹಾಗೂ ಸೆಜಿಲಿಟಿ ಸಂಸ್ಥೆಗಳ ಸಹಯೋಗದಲ್ಲಿ ಬ್ಯೂಟಿಷಿಯನ್ ತರಬೇತಿ ಪಡೆದ 75 ಯುವತಿಯರಿಗೆ ಸ್ವಯಂ ಉದ್ಯೋಗ ಆರಂಭಿಸಲು ಬೇಕಾಗುವ ಸೌಂದರ್ಯ ಸಲಕರಣೆಗಳ ಕಿಟ್ ವಿತರಿಸಿ ಅವರು ಮಾತನಾಡಿದ್ದಾರೆ.
ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಆತಂಕವ್ಯಕ್ತಪಡಿಸಿದ ಕಾಗೇರಿಯವರು `ಕೌಶಲ್ಯತೆಯ ಕೊರತೆಯಿಂದ ಆಧುನಿಕತೆಯ ಪೈಪೋಟಿ ಭರಾಟೆಯಲ್ಲಿ ಉತ್ತಮ ಉದ್ಯೋಗ ಹೊಂದಲು ಹರ ಸಾಹಸ ಪಡುವಹಾಗಾಗಿದೆ. ಸರ್ಕಾರಿ ನೌಕರಿಯೇ ಬೇಕೆಂದು ಸಮಯ ವ್ಯರ್ಥ ಮಾಡುವ ಬದಲು ಒಪ್ಪಿತ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು ಬದುಕಬೇಕು. ಸರ್ಕಾರದ ಹಲವಾರು ಯೋಜನೆಗಳ ಉಪಯೋಗ ಪಡೆದು ಆದಾಯದ ಮೂಲವನ್ನು ವೃದ್ಧಿಸಿಕೊಳ್ಳುವ ಮೂಲಕ ಔದ್ಯೋಗಿಕ ಭದ್ರತೆ ಹೊಂದಬೇಕು. ಸ್ವತಂತ್ರ ಉದ್ಯಮ ಆರಂಭಿಸುವುದರ ಮೂಲಕ ಸ್ವಾವಲಂಬಿ ಬದುಕಿಗೆ ಆದ್ಯತೆ ನೀಡಿ’ ಎಂದು ಕರೆ ನೀಡಿದ್ದಾರೆ.
ಸ್ಕೊಡ್ವೆಸ್ ಸಂಸ್ಥೆಯ ಕಾರ್ಯಗಳನ್ನು ಪ್ರಶಂಶಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿಯವರು, 21ನೇ ಶತಮಾನದ ವೃತ್ತಿಪರ ಕೌಶಲ್ಯಗಳನ್ನು ಪರಿಚಯಿಸುವಂತೆ ಸಂಸ್ಥೆಯ ಮುಖ್ಯಸ್ಥರಿಗೆ ಕೋರಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ಕೊಡ್ವೆಸ್ ಸಂಸ್ಥೆಯ ಸಹಕಾರ್ಯದರ್ಶಿ ಕೆ ಎನ್ ಹೊಸಮನಿ ಅವರು ಮಾತನಾಡಿ `ಸಂಸ್ಥೆಯ 09 ವಿಭಾಗದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವೂ ಒಂದಾಗಿದ್ದು ಯುವಕರ ಬೇಡಿಕೆ ಮತ್ತು ಅವಶ್ಯಕತೆಗಳನ್ನು ಆಧರಿಸಿ ತರಬೇತಿಗಳನ್ನು ನೀಡಲಾಗುತ್ತಿದೆ. ಉನ್ನತ ಮಟ್ಟದ ತರಬೇತಿಗಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಸಂಶೋಧನಾ ಕೇಂದ್ರವನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ’ ಎಂದರು.
ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು ಮಾತನಾಡಿ ಸಂಸ್ಥೆಯ ಕೌಶಲ್ಯ ತರಬೇತಿ ಕ್ಷೇತ್ರದಲ್ಲಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. `ಕಳೆದ 20 ವರ್ಷಗಳಲ್ಲಿ 16,500 ಕ್ಕೂ ಅಧಿಕ ಜನರಿಗೆ ಕೌಶಲ್ಯ ತರಬೇತಿ ನೀಡಿದ್ದು, ಶೇ 78ರಷ್ಟು ಜನರು ಉದ್ಯೋಗ ಹಾಗೂ ಸ್ವಯಂ ಉದ್ಯೋಗ ಹೊಂದಲು ಸಾಧ್ಯವಾಗಿದೆ’ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಮತ್ತು ಮುಖ್ಯ ಹಣಕಾಸು ಮತ್ತು ಆಡಳಿತಾಧಿಕಾರಿ ಸರಸ್ವತಿ ಎನ್ ರವಿ, ಖಜಾಂಚಿ ವಸಂತ ಹಾದಿಮನೆ ಉಪಸ್ಥಿತರಿದ್ದರು. ಸ್ಕೊಡ್ವೆಸ್ ಸಂಸ್ಥೆಯ ಕಾರ್ಯಕ್ರಮಗಳ ಮುಖ್ಯಸ್ಥ ನಾರಾಯಣ ಹೆಗಡೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.