ಅರಬ್ಬಿ ಸಮುದ್ರದಲ್ಲಿ ಸ್ವಚ್ಛಂದ ಬದುಕು ಕಟ್ಟಿಕೊಂಡಿದ್ದ ಕಡಲ ಆಮೆಗಳ ಬದುಕಿಗೆ ಮೀನು ಹಿಡಿಯುವ ಗಾಳ ಮಾರಕವಾಗಿದೆ. ಮೀನಿನ ಗಾಳ ಗಂಟಲಲ್ಲಿ ಸಿಕ್ಕಿಸಿಕೊಂಡ ಆಮೆಯೊಂದ ಸೋಮವಾರ ದಡಕ್ಕೆ ಬಂದಿದ್ದು, ನಿತ್ರಾಣಗೊಂಡಿದ್ದ ಆ ಆಮೆಯನ್ನು ಗೋಕರ್ಣದ ದೇವಸಮುದ್ರ ರೆಸಾರ್ಟ ಸಿಬ್ಬಂದಿ ಬದುಕಿಸಿದ್ದಾರೆ.
ಮೀನು ಹಿಡಿಯುವ ಗಾಳ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇನ್ನಿತರ ವಸ್ತುಗಳು ಜಲಚರ ಜೀವಿಗಳಿಗೆ ಅಪಾಯ ಸೃಷ್ಠಿಸಿದೆ. ಸೋಮವಾರ ಗೋಕರ್ಣದ ಕರಿಯಪ್ಪನ ಕಟ್ಟೆಯ ಬಳಿ ಆಗಮಿಸಿದ್ದ ಆಮೆಯ ಗಂಟಲಿನಲ್ಲಿ ಮೀನು ಹಿಡಿಯಲು ಬಳಸುವ ಗಾಳ ಕಾಣಿಸಿದೆ. ಅದರಿಂದ ಅಸ್ವಸ್ಥಗೊಂಡಿದ್ದ ಆಮೆಯನ್ನು ರೆಸಾರ್ಟ ಸಿಬ್ಬಂದಿ ರವಿ ಮಡಿವಾಳ, ದೀಪಕ ಮಡಿವಾಳ,ಪುಟ್ಟಯ್ಯ ಗೌಡ ಹಾಗೂ ಅನುಪ್ ಗುನಗಾ ರಕ್ಷಿಸಿದ್ದಾರೆ. ಅದಾದ ನಂತರ ಆಮೆಯನ್ನು ಸಮುದ್ರಕ್ಕೆ ಬಿಟ್ಟರೂ ಅದು ಮತ್ತೆ ದಡಕ್ಕೆ ಮರಳಿದೆ.
ಹೀಗಾಗಿ ಆ ರೆಸಾರ್ಟ ಸಿಬ್ಬಂದಿ ಅರಣ್ಯ ಅಧಿಕಾರಿಗಳಿಗೆ ಫೋನ್ ಮಾಡಿದ್ದಾರೆ. ಅರಣ್ಯ ಇಲಾಖೆಯವರು ಆಗಮಿಸಿ ಆಮೆಗೆ ಇನ್ನಷ್ಟು ಚಿಕಿತ್ಸೆ ಮಾಡಿದ್ದಾರೆ. ನಂತರ ಗಂಗಾವಳಿಯ ಆಮೆ ಸಂರಕ್ಷಣಾ ಕೇಂದ್ರಕ್ಕೆ ಅದನ್ನು ಒಯ್ದು ಆರೈಕೆ ಮಾಡಿದ್ದಾರೆ. ಸಮುದ್ರದ ಅಬ್ಬರ ಕಡಿಮೆಯಾದ ನಂತರ ಆ ಆಮೆಯನ್ನು ಮತ್ತೆ ಕಡಲಿಗೆ ಬಿಡಲಾಗಿದೆ.
ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ಅರಣ್ಯ ರಕ್ಷಕ ಪ್ರಶಾಂತ ಗೌಡ, ಕಾವಲುಗಾರ ವೆಂಕಟ್ರಮಣ ಆಗೇರ ಅವರು ಆಮೆಗೆ ಆರೈಕೆ ಮಾಡಿದ್ದಾರೆ. ಭಾನುವಾರ ಸಹ ಮುಖ್ಯ ಕಡಲತೀರಕ್ಕೆ ಎರಡು ಆಮೆ ಬಂದಿದ್ದು, ಆ ಆಮೆಗೆ ದೋಣಿಯ ಇಂಜಿನ್ ಫ್ಯಾನ್ ಬಡಿದು ಗಾಯವಾಗಿರುವುದು ಗಮನಕ್ಕೆ ಬಂದಿತ್ತು. ಆ ಎರಡು ಆಮೆಯನ್ನು ಕುಂದಾಪುರದ ರೀಫ್ ವಾಚ್ ತಂಡದ ತಜ್ಞರು ಚಿಕಿತ್ಸೆಗೆ ಒಯ್ದಿದ್ದಾರೆ. ಗಾಯಗೊಂಡ ಆಮೆಗಳು ಕಡಲ ಬುಡದಲ್ಲಿ ಕಾಣಿಸಿದರೆ ತಕ್ಷಣ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
`ಪ್ಲಾಸ್ಟಿಕ್ ತ್ಯಜಿಸಿ.. ಜೀವ ಸಂಕುಲ ರಕ್ಷಿಸಿ’