ಭಟ್ಕಳದ ಮಾನಸಾ ಮೊಗೇರ್ ಅವರಿಗೆ ಅವರ ಗಂಡನ ಮನೆಯವರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾರೆ. ಇಷ್ಟು ದಿನ ಸಹಿಸಿಕೊಂಡ ಮಾನಸಾ ಮೊಗೇರ್ ಅವರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಭಟ್ಕಳದ ಗೊರಟೆಯ ಜಾಣನಮನೆಯಲ್ಲಿ ಮಾನಸಾ (ಕಾವ್ಯ) ಮೊಗೇರ್ ಅವರು ವಾಸವಾಗಿದ್ದಾರೆ. ಅವರು ಶ್ರೀಧರ ಮೊಗೇರ್ ಅವರನ್ನು ಮದುವೆಯಾಗಿದ್ದಾರೆ. ಶ್ರೀಧರ ಮೊಗೇರ್ ಅವರ ಜೊತೆ ಅವರ ತಂದೆ ಪರಮೇಶ್ವರ ಶನಿಯಾರ ಮೊಗೇರ್, ತಾಯಿ ಪದ್ಮಾವತಿ ಪರಮೇಶ್ವರ ಮೊಗೇರ್ ಹಾಗೂ ಪತಿಯ ಸಹೋದರರಾದ ಯೊಗೇಶ್ವರ ಪರಮೇಶ್ವರ ಮೊಗೇರ್, ಆನಂದ ಪರಮೇಶ್ವರ ಮೊಗೇರ್ ಅವರು ಮಾನಸಾ ಮೊಗೇರ್ ಅವರಿಗೆ ಹಿಂಸೆ ನೀಡುತ್ತಿದ್ದಾರೆ.
2016ರಲ್ಲಿ ಮಾನಸಾ ಮೊಗೇರ್ ಅವರು ಶ್ರೀಧರ್ ಮೊಗೇರ್ ಅವರನ್ನು ಮದುವೆ ಆಗಿದ್ದು, ಅಲ್ಲಿಂದ ಇಲ್ಲಿಯವರೆಗೂ ಅವರ ಕಾಟ ಸಹಿಸಿಕೊಂಡಿದ್ದಾರೆ. ಆದರೆ, ಇನ್ಮುಂದೆ ಆ ಹಿಂಸೆ ಸಹಿಸಲಾಗುವುದಿಲ್ಲ ಎಂದು ಭಾವಿಸಿ ಅವರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಗಂಡನ ಮನೆಯವರು ವರದಕ್ಷಿಣೆ ತರುವಂತೆ ಮಾನಸಾ ಅವರನ್ನು ಪೀಡಿಸುತ್ತಿದ್ದು, ತವರು ಮನೆಯಿಂದ ಹಣ ತರದ ಕಾರಣ ದೈಹಿಕವಾಗಿಯೂ ಹಿಂಸಿಸಿದ್ದಾರೆ. 2024ರ ಅವಧಿಯಲ್ಲಿ ಮಾನಸಾ ಅವರನ್ನು ಮನೆಯಿಂದ ಹೊರ ಹಾಕಿ ನೋವು ಮಾಡಿದ್ದಾರೆ.
ಪತಿ ಹಾಗೂ ಅವರ ಮನೆಯವರಲ್ಲಿ ಸುಧಾರಣೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಮಾನಸಾ ಮೊಗೇರ್ ಅವರು ಮೌನವಾಗಿದ್ದು, ಯಾವುದೇ ಸುಧಾರಣೆ ಕಾಣದ ಕಾರಣ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.