ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿ ವಿಕೋಪದ ಉಸ್ತುವಾರಿಯೂ ಆಗಿರುವ ಆರೋಗ್ಯ ಸಚಿವ ಯು ಟಿ ಖಾದರ್ ಅವರ ಭದ್ರತೆಗೆ ನಿಯೋಜನೆಯಾಗಿದ್ದ ಜೀಪು ಅಪಘಾತಕ್ಕೀಡಾಗಿದೆ. ಅಂಕೋಲಾದ ವರದರಾಜ ಹೊಟೇಲ್ ಬಳಿ ಪೊಲೀಸ್ ಜೀಪು ಸ್ಕೂಟಿಗೆ ಗುದ್ದಿದ್ದು, ಅಲಗೇರಿಯ ಸಂದೀಪ್ ನಾಯಕ ಅವರು ಗಾಯಗೊಂಡಿದ್ದಾರೆ. ಅಪಘಾತ ನೋಡಿದ ಯು ಟಿ ಖಾದರ್ ಅವರು ತಕ್ಷಣ ತಮ್ಮ ಕಾರು ನಿಲ್ಲಿಸಿ, ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.
ಶನಿವಾರ ಯು ಟಿ ಖಾದರ್ ಅವರು ಕಾರವಾರಕ್ಕೆ ಆಗಮಿಸಿ ಅಧಿಕಾರಿಗಳ ಸಭೆ ನಡೆಸಿದ್ದರು. ಸಭೆ ಮುಗಿದ ನಂತರ ಅವರು ತಮ್ಮ ಕ್ಷೇತ್ರದ ಕಡೆ ಕಾರಿನಲ್ಲಿ ಹೊರಟರು. ಸಂಜೆ ವೇಳೆ ಅವರ ಕಾರು ಅಂಕೋಲಾಗೆ ತಲುಪಿದ್ದು, ಸಚಿವರ ಭದ್ರತೆಗೆ ನಿಯೋಜನೆಯಾಗಿದ್ದ ಪೊಲೀಸ್ ಜೀಪು ವರದರಾಜ ಹೊಟೇಲ್ ಬಳಿ ಸ್ಕೂಟಿಗೆ ಡಿಕ್ಕಿಯಾಯಿತು. ನಂತರ ಆ ಜೀಪು ರಸ್ತೆ ಬಿಟ್ಟು ಪಕ್ಕದ ಪೊದೆ ಸೇರಿತು. ಅಪಘಾತದ ರಭಸಕ್ಕೆ ಸ್ಕೂಟಿಯಲ್ಲಿದ್ದ ಸಂದೀಪ್ ನಾಯಕ ಅವರು ಬಿದ್ದು ಗಾಯಗೊಂಡರು.
ಅಪಘಾತವನ್ನು ಕಣ್ಣಾರೆ ನೋಡಿದ ಸಚಿವರು ಕಾರು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದರು. ಕಾರಿನಿಂದ ಇಳಿದು ಬಂದು ಗಾಯಾಳುವಿನ ಆರೋಗ್ಯ ವಿಚಾರಿಸಿದರು. ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸಿ ಅಗತ್ಯ ಚಿಕಿತ್ಸೆಗೆ ಸೂಚನೆ ನೀಡಿದರು. ಅದಾದ ನಂತರ ಸಚಿವರು ತಮ್ಮ ಪ್ರಯಾಣ ಮುಂದುವರೆಸಿದರು. ಅಪಘಾತದ ಕಾರಣಗಳ ಬಗ್ಗೆ ತನಿಖೆ ಮುಂದುವರೆದಿದೆ.