ಹೊನ್ನಾವರದ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ ಜಿ ಶಂಕರ್ ಹಾಗೂ ಆ ಸೊಸೈಟಿಯ ಹಿರಿಯ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಹಳದಿಪುರ ಅವರ ನಡುವೆ ವೈಮನಸ್ಸು ಉಂಟಾಗಿದೆ. ಹೀಗಾಗಿ ಅಧ್ಯಕ್ಷರ ವಿರುದ್ಧ ರವಿಚಂದ್ರ ಹಳದಿಪುರ ಅವರು ಸಿಡಿದೆದ್ದಿದ್ದು, ಸಿಬ್ಬಂದಿ ಮೂಲಕ ಅವರ ವಿರುದ್ಧ ಪತ್ರ ಬರೆಯಿಸುವ ಪ್ರಯತ್ನ ಮಾಡಿಸಿದ್ದಾರೆ. ಆದರೆ, ಅಧ್ಯಕ್ಷ ಜಿ ಜಿ ಶಂಕರ್ ಅವರಿಗೆ ಬೆಂಬಲ ನೀಡಿದ ಸೊಸೈಟಿ ಸಿಬ್ಬಂದಿ ಆ ಸೊಸೈಟಿಯ ಹಿರಿಯ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಹಳದಿಪುರ ಅವರ ವಿರುದ್ಧವೇ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ಹೊನ್ನಾವರದಲ್ಲಿ ಪ್ರಧಾನ ಶಾಖೆ ಹೊಂದಿದೆ. ಬಿಜೆಪಿ ಮುಖಂಡರೂ ಆಗಿರುವ ಜಿ ಜಿ ಶಂಕರ್ ಅವರು ಈ ಸೊಸೈಟಿಯ ಅಧ್ಯಕ್ಷರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೊತೆ ನೆರೆ ಜಿಲ್ಲೆಯಲ್ಲಿಯೂ ಈ ಸೊಸೈಟಿ ಶಾಖೆ ಹೊಂದಿದೆ. ವರ್ಷಕ್ಕೆ ಐದಾರು ಬಾರಿಯಾದರೂ ಒಂದಿಲ್ಲೊoದು ವಿಷಯಗಳಿಂದ ಸೊಸೈಟಿ ಸುದ್ದಿಯಾಗುತ್ತಿದ್ದು, ಸದ್ಯ ಇದಕ್ಕೆ ಮತ್ತೊಂದು ಸಂಗತಿ ಸೇರ್ಪಡೆಯಾಗಿದೆ. ಹೊನ್ನಾವರದ ಗಾಂಧೀನಗರದಲ್ಲಿ ವಾಸವಾಗಿರುವ ರವಿಚಂದ್ರ ಕೇಶವ ಹಳದಿಪುರ ಅವರು ಈ ಸೊಸೈಟಿಯಲ್ಲಿ `ಹಿರಿಯ ಅಭಿವೃದ್ಧಿ ಅಧಿಕಾರಿ’ ಎಂಬ ಹುದ್ದೆಯಲ್ಲಿದ್ದಾರೆ. ಅವರೇ ಇದೀಗ ಸೊಸೈಟಿ ಅಧ್ಯಕ್ಷ ಜಿ ಜಿ ಶಂಕರ್ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಧ್ಯಕ್ಷರ ವಿರುದ್ಧ ಅಪಪ್ರಚಾರ ಮಾಡುವುದಕ್ಕಾಗಿ ರವಿಚಂದ್ರ ಹಳದಿಪುರ ಅವರು ನಾನಾ ಪ್ರಯತ್ನ ಮಾಡಿದ್ದು, ಅದೆಲ್ಲವೂ ಅವರಿಗೆ ತಿರುಗು ಬಾಣವಾಗಿದೆ.
ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ಸಹಾಯಕ ವ್ಯವಸ್ಥಾಪಕರಾಗಿ ಸಂದೀಪ ಪರಮೇಶ್ವರ ನಾಯ್ಕ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿAದ ಸಂದೀಪ ನಾಯ್ಕ ಅವರು ಸೊಸೈಟಿ ಕೆಲಸಗಳ ಜೊತೆಯೇ ರವಿಚಂದ್ರ ಹಳದಿಪುರ ಅವರ ವೈಯಕ್ತಿಕ ಕೆಲಸ ಮಾಡಿಕೊಡುತ್ತಿದ್ದಾರೆ. ಹೀಗಾಗಿ, ಜಿ ಜಿ ಶಂಕರ್ ಅವರ ತೇಜೋವಧೆಗಾಗಿ ರವಿಚಂದ್ರ ಹಳದಿಪುರ ಅವರು ಸಂದೀಪ ನಾಯ್ಕ ಅವರ ಸಹಾಯ ಯಾಚಿಸಿದ್ದಾರೆ. ಆದರೆ, `ಅನ್ನ ಕೊಟ್ಟ ಸಂಸ್ಥೆಗೆ ದ್ರೋಹ ಬಗೆಯಲಾರೆ’ ಎಂದು ಸಂದೀಪ ನಾಯ್ಕ ಅವರು ಹೇಳಿದ್ದು, ಇದನ್ನು ಸಹಿಸದ ರವಿಚಂದ್ರ ಹಳದಿಪುರ ಅವರು ಸಂದೀಪ ನಾಯ್ಕ ಅವರನ್ನು ನಿಂದಿಸಿದ್ದಾರೆ. ಸೊಸೈಟಿ ಹಾಗೂ ಅಧ್ಯಕ್ಷರ ವಿರುದ್ಧ ಅಪಪ್ರಚಾರದ ಪತ್ರ ಬರೆದ ರವಿಚಂದ್ರ ಹಳದಿಪುರ ಅವರು ಅದರ ಮೇಲೆ ಸಹಿ ಮಾಡುವಂತೆ ಸಂದೀಪ ನಾಯ್ಕ ಅವರಿಗೆ ಪೀಡಿಸಿದ್ದಾರೆ. ಅದಕ್ಕೆ ಒಪ್ಪದ ಸಂದೀಪ ನಾಯ್ಕ ಅವರು ತಮ್ಮ ಹಿರಿಯ ಅಧಿಕಾರಿಯೂ ಆಗಿರುವ ಸೊಸೈಟಿ ವ್ಯವಸ್ಥಾಪಕ ನಾಗರಾಜ ಶ್ರೀಧರ ನಾಯ್ಕ ಅವರಲ್ಲಿ ಸಮಸ್ಯೆ ಹೇಳಿದ್ದಾರೆ.
`ಅಧ್ಯಕ್ಷರ ಬಳಿ ಮಾತನಾಡಿ ಸಮಸ್ಯೆ ಬಗೆಹರಿಸೋಣ’ ಎಂದು ನಾಗರಾಜ ನಾಯ್ಕ ಅವರು ಹೇಳಿ ಸುಮ್ಮನಾಗಿದ್ದಾರೆ. ಜುಲೈ 2ರಂದು ಕಚೇರಿ ಬಳಿ ಸಿಬ್ಬಂದಿ ಅಂಕಿತ ಕೃಷ್ಣ ಶೆಟ್ಟಿ, ರವೀಶ ಮಂಜು ಗೌಡ ಅವರ ಬಳಿ ಸಂದೀಪ ನಾಯ್ಕ ಅವರು ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ರವಿಚಂದ್ರ ಹಳದಿಪುರ ಅವರು ಕೆಟ್ಟದಾಗಿ ಬೈದಿದ್ದಾರೆ. ಅಧ್ಯಕ್ಷರ ವಿರುದ್ಧ ಬರೆದ ಪತ್ರಕ್ಕೆ ಸಹಿ ಹಾಕದ ಕಾರಣ ಕೇಸು ಹಾಕಿ ಕೋರ್ಟಿಗೆ ಅಲೆದಾಡುವ ಹಾಗೇ ಮಾಡುವುದಾಗಿ ಹೆದರಿಸಿದ್ದಾರೆ. 7 ತಿಂಗಳ ಹಿಂದೆ ಮದುವೆ ಸಂದೀಪ ನಾಯ್ಕ ಅವರ ಮದುವೆ ಆಗಿದ್ದು, ಸದ್ಯ ಅವರ ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಜಾತಿ ನಿಂದನೆ ಕೇಸು ದಾಖಲಾದರೆ ಸಮಸ್ಯೆ ಎಂದು ಹೆದರಿದ ಸಂದೀಪ ನಾಯ್ಕ ಅವರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಭಟ್ಕಳ ಹರಾಡಿಯ ಕಾಯ್ಕಿಣಿ ಮೂಲದ ಜನಾರ್ಧನ ಮಾಸ್ತಿ ನಾಯ್ಕ ಅವರು ಸಹ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ಉದ್ಯೋಗಿಯಾಗಿದ್ದಾರೆ. ಜನಾರ್ಧನ ನಾಯ್ಕ ಅವರು ಮಹಿಳಾ ಸಾಲ ವಿಭಾಗದ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ರವಿಚಂದ್ರ ಹಳದಿಪುರ ಅವರು ಜನಾರ್ಧನ ನಾಯ್ಕ ಅವರಿಗೂ ಕಳೆದ ಆರು ತಿಂಗಳಿನಿAದ ಹಿಂಸೆ ನೀಡುತ್ತಿದ್ದಾರೆ. ಜುಲೈ 3ರಂದು ಅಧ್ಯಕ್ಷರ ವಿರುದ್ಧ ಅಪಪ್ರಚಾರ ಮಾಡುವ ಪತ್ರಕ್ಕೆ ಸಹಿ ಹಾಕುವಂತೆ ಅವರನ್ನು ಕಾಡಿಸಿದ್ದಾರೆ. ಒಪ್ಪದ ಕಾರಣ ಕಚೇರಿಯ ಐಟಿ ವಿಭಾಗದ ಮ್ಯಾನೇಜರ್ ವಿಘ್ನೇಶ್ವರ ಹೆಗಡೆ ಹಾಗೂ ಜೀವನ ಮೌಲ್ಯ ವಿಭಾಗದ ಅಧಿಕಾರಿ ಜಗದೀಶ ಕೃಷ್ಣ ವೈದ್ಯ ಅವರ ಮುಂದೆಯೇ ರವಿಚಂದ್ರ ಹಳದಿಪುರ ಅವರು ಜನಾರ್ಧನ ನಾಯ್ಕ ಅವರಿಗೆ ಬೆದರಿಕೆ ಹಾಕಿದ್ದಾರೆ. ಸುಳ್ಳು ಕೇಸು ಹಾಕಿ ಜೈಲಿಗೆ ಕಳುಹಿಸುವುದಾಗಿಯೂ ರವಿಚಂದ್ರ ಹಳದಿಪುರ ಅವರು ಹೆದರಿಸಿದ್ದಾರೆ. `ಹೆಂಡತಿ ಹಾಗೂ ಸಣ್ಣ ಮಕ್ಕಳ ಜೊತೆ ಜೀವನ ನಡೆಸುತ್ತಿರುವ ತನಗೆ ಈ ಸಂಸ್ಥೆಯೇ ಆಧಾರ. ಹೀಗಾಗಿ ಸಂಸ್ಥೆ ಜೊತೆ ತಮ್ಮನ್ನು ರಕ್ಷಿಸಿ’ ಎಂದು ಜನಾರ್ಧನ ನಾಯ್ಕ ಅವರು ಪೊಲೀಸರ ಮುಂದೆ ಬೇಡಿದ್ದಾರೆ.
ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದಲ್ಲಿ ಮಾವಿನಕೂರ್ವಾ ಹೊಳಕೇರಿಯ ನಾಗರಾಜ ಶ್ರೀಧರ ನಾಯ್ಕ ಅವರು ಆರು ವರ್ಷಗಳಿಂದ ವ್ಯವಸ್ಥಾಪಕರಾಗಿದ್ದಾರೆ. ಕಳೆದ ಒಂದು ವರ್ಷದಿಂದ ಅವರಿಗೂ ಅದೇ ಸೊಸೈಟಿಯ ಉದ್ಯೋಗಿ ರವಿಚಂದ್ರ ಹಳದಿಪುರ ಅವರು ಕಾಡಿಸುತ್ತಿದ್ದಾರೆ. `ತಾನು ಹೇಳಿದ ಹಾಗೇ ಮಾಡದಿದ್ದರೆ ಹುದ್ದೆಯಿಂದ ವಜಾ ಮಾಡುವೆ’ ಎಂದು ನಾಗರಾಜ ನಾಯ್ಕ ಅವರನ್ನು ಹೆದರಿಸುತ್ತಿದ್ದಾರೆ. ನಾಗರಾಜ ನಾಯ್ಕ ಅವರಿಗೂ ರವಿಚಂದ್ರ ಹಳದಿಪುರ ಅವರು ಅಧ್ಯಕ್ಷರ ವಿರುದ್ಧ ಅಪಪ್ರಚಾರ ಮಾಡುವ ಪತ್ರಕ್ಕೆ ಸಹಿ ಹಾಕುವಂತೆ ಒತ್ತಡ ಹಾಕಿದ್ದಾರೆ. `ತಮಗೆ ಸೊಸೈಟಿಯಲ್ಲಿ ಬಡ್ತಿ ನೀಡಿಲ್ಲ. ವೇತನ ಹೆಚ್ಚಿಸಿಲ್ಲ’ ಎಂಬ ಕಾರಣಕ್ಕೆ ರವಿಚಂದ್ರ ಹಳದಿಪುರ ಅವರು ಸಿಟ್ಟಾಗಿರುವುದನ್ನು ನಾಗರಾಜ ನಾಯ್ಕ ಅವರು ಅರಿತು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ, ನಾಗರಾಜ ನಾಯ್ಕ ಅವರ ವಿರುದ್ಧವೂ ಜಾತಿ ನಿಂದನೆ ಕೇಸು ಹಾಕಿ ಜೈಲಿಗೆ ಕಳುಹಿಸುವುದಾಗಿ ರವಿಚಂದ್ರ ಹಳದಿಪುರ ಅವರು ಹೇಳಿದ್ದಾರೆ. `ತಾನು ಜೈಲಿಗೆ ಹೋದರೆ ತಾಯಿಗೆ ಯಾರು ದಿಕ್ಕು?’ ಎಂದು ಯೋಚಿಸಿದ ನಾಗರಾಜ ನಾಯ್ಕ ಅವರು ರಕ್ಷಣೆ ಕೋರಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಹೊನ್ನಾವರ ಪೊಲೀಸರು ರವಿಚಂದ್ರ ಹಳದಿಪುರ ಅವರ ವಿರುದ್ಧ ಬಂದ ಮೂರು ಕೇಸುಗಳನ್ನು ದಾಖಲಿಸಿದ್ದು, ಅವರು ಹೇಳಿದ ವಿಷಯದಲ್ಲಿನ ಸತ್ಯಾಸತ್ಯತೆಯ ಬಗ್ಗೆ ಶೋಧ ನಡೆಸಿದ್ದಾರೆ.