ಕಳೆದ ಆರು ತಿಂಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 419 ಜನರಿಗೆ ಹಾವು ಕಚ್ಚಿದ್ದು, ಅದರಲ್ಲಿ ಐದು ಜನ ಸಾವನಪ್ಪಿದ್ದಾರೆ. ಕಳೆದ ನಾಲ್ಕು ವರ್ಷದ ಅವಧಿಯಲ್ಲಿ 2552 ಜನರಿಗೆ ಹಾವು ಕಡಿತಕ್ಕೆ ಒಳಗಾಗಿದ್ದಾರೆ.
ಸಿದ್ದಾಪುರ, ಯಲ್ಲಾಪುರ, ಹಳಿಯಾಳ, ಮುಂಡಗೋಡು ಹಾಗೂ ಜೋಯಿಡಾ ಭಾಗದಲ್ಲಿ ಹೆಚ್ಚಿನ ಜನ ಹಾವಿನಿಂದ ಕಚ್ಚಿಸಿಕೊಂಡಿದ್ದಾರೆ. ಅರಣ್ಯ ಅಂಚಿನ ಕೃಷಿ ಭೂಮಿಗೆ ಕೆಲಸಕ್ಕೆ ಹೋದ ಅವಧಿಯಲ್ಲಿ ವಿಷ ಜಂತುವಿನ ದಾಳಿಗೆ ಒಳಗಾದವರ ಸಂಖ್ಯೆ ಹೆಚ್ಚಿದೆ. ಮಳೆಗಾಲದಲ್ಲಿ ಹಳ್ಳ-ಕೊಳ್ಳಗಳು ತುಂಬುವುದರಿoದ ಹಾವುಗಳು ತಮ್ಮ ವಾಸಸ್ಥಳದಿಂದ ಹೊರಬರುತ್ತಿದ್ದು, ಆಹಾರ ಮತ್ತು ಸುರಕ್ಷಿತ ಆಶ್ರಯಕ್ಕಾಗಿ ಜನ ವಸತಿಯಿರುವ ಮನೆಗಳತ್ತ ಆಗಮಿಸುತ್ತಿವೆ. ಅಂಥ ಅವಧಿಯಲ್ಲಿ ಮನೆಯಲ್ಲಿದ್ದವರು ಆಕಸ್ಮಿಕವಾಗಿ ಹಾವನ್ನು ತುಳಿದು ಅಪಾಯ ಆಹ್ವಾನಿಸಿಕೊಳ್ಳುತ್ತಿದ್ದಾರೆ.
ದಾಖಲೆಗಳ ಪ್ರಕಾರ 2025ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 691 ಜನರಿಗೆ ಹಾವು ಕಚ್ಚಿದ್ದು, ಆ ಪೈಕಿ ಅಂಕೋಲಾ, ಹಳಿಯಾಳ ಹಾಗೂ ಯಲ್ಲಾಪುರದಲ್ಲಿ ಒಬ್ಬರು ಸಾವನಪ್ಪಿದ್ದರು. ಕೆಲ ವರ್ಷಗಳ ಹಿಂದೆ ಸರ್ಕಾರ ಹಾವು ಕಡಿತ ಪ್ರಕರಣವನ್ನು ಕಡ್ಡಾಯವಾಗಿ ದಾಖಲು ಮಾಡಬೇಕು ಎಂದು ಸೂಚಿಸಿದ ಹಿನ್ನಲೆ ಸದ್ಯ ಹಾವು ಕಡಿತದ ವಿಷಯಗಳು ಸರ್ಕಾರವನ್ನು ತಲುಪುತ್ತಿದೆ. ಅದರಿಂದ ಅಂಥ ವಿಷಯಗಳು ಗಂಭೀರವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಹಾವು ಕಚ್ಚಿದ ತಕ್ಷಣ ವೈದ್ಯಕೀಯ ನೆರವು ನೀಡುವ ತಯಾರಿ ನಡೆದಿದೆ.
`ಹಾವು ಕಡಿತದ ಸಂದರ್ಭದಲ್ಲಿ ಜೀವ ಉಳಿಸಲು ಸಮಯ ಪ್ರಜ್ಞೆ ಮತ್ತು ವೈಜ್ಞಾನಿಕ ಚಿಕಿತ್ಸೆ ಅತ್ಯಗತ್ಯ’ ಎಂದು ವೈದ್ಯರು ಹೇಳುತ್ತಾರೆ. ಹೊಲ-ಗದ್ದೆ ಅಥವಾ ಪೊದೆಗಳಿರುವ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಕಡ್ಡಾಯವಾಗಿ ಗಮ್ಬೂಟ್ ಧರಿಸಬೇಕು. ರಾತ್ರಿ ವೇಳೆ ಸಂಚರಿಸುವಾಗ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಮನೆಯ ಸುತ್ತಮುತ್ತ ಕಸ-ಕಡ್ಡಿ ಇಲ್ಲದಂತೆ ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ’ ಎಂಬುದು ಅವರ ಮಾತು. ಅದಾಗಿಯೂ, `ಹಾವು ಕಚ್ಚಿದರೆ ಯಾವುದೇ ಮಂತ್ರ-ತAತ್ರ, ಮನೆಮದ್ದು ಅಥವಾ ಮೂಢನಂಬಿಕೆಗಳ ಮೊರೆ ಹೋಗದೇ ಆಸ್ಪತ್ರೆಗೆ ಬರಬೇಕು. ಗಾಯದ ಭಾಗವನ್ನು ಕತ್ತರಿಸುವ ಅಥವಾ ಬಿಗಿಯಾಗಿ ಕಟ್ಟುವಂತಹುದು ದೊಡ್ಡ ತಪ್ಪು’ ಎಂಬುದು ಅಧಿಕಾರಿಗಳ ಮಾತು.