26 ವರ್ಷಗಳ ಕಾಲ ದೇಶ ಸೇವೆ ಮಾಡಿದ ಕೃಷ್ಣ ನಾಯ್ಕ ಅವರ ಜೊತೆ ಅವರ ಕುಟುಂಬದ ಅಡಿಕೆ ತೋಟವನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಆಸಕ್ತಿವಹಿಸಿದೆ. ಸ್ವಂತ ಖರ್ಚಿನಲ್ಲಿ ಅಡಿಕೆ ತೋಟ ತೆಗೆದು ಆ ಜಾಗವನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂದು ಕೃಷ್ಣ ನಾಯ್ಕ ಅವರಿಗೆ ನೋಟಿಸ್ ಸಹ ಜಾರಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹೊಸೂರು ಗ್ರಾಮದಲ್ಲಿ ಕೃಷ್ಣ ದ್ಯಾವ ನಾಯ್ಕ ಹಲಗೇರಿ ಅವರು ವಾಸವಾಗಿದ್ದಾರೆ. ದೇಶಕ್ಕಾಗಿ ಏನಾದರೂ ಮಾಡಬೇಕು ಎಂದು ಕನಸು ಕಂಡಿದ್ದ ಅವರು ಸೈನಿಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದು, 26 ವರ್ಷಗಳ ಕಾಲ ಅವರು ಸೈನಿಕರಾಗಿ ಸೇವೆ ಸಲ್ಲಿಸಿದ್ದಾರೆ. ಸೈನಿಕರಾಗುವ ಮುನ್ನ ಅವರು ಉತ್ತಮ ಕೃಷಿಕರಾಗಿದ್ದು, ಅನಾಧಿಕಾಲದಿಂದಲೂ ತಮಗೆ ಬಂದ ಭೂಮಿಯಲ್ಲಿ ಭತ್ತ ಬೆಳೆದಿದ್ದಾರೆ. ನಿವೃತ್ತಿ ನಂತರ ಆ ಕ್ಷೇತ್ರದಲ್ಲಿ ಅವರು ಅಡಿಕೆ ಬೆಳೆದಿದ್ದು, ಆ ಅಡಿಕೆ ಕ್ಷೇತ್ರವೇ ಇದೀಗ ಅಪಾಯಕ್ಕೆ ಸಿಲುಕಿದೆ. ಸೊಂಪಾಗಿ ಬೆಳೆದು ನಿಂತ ಅಡಿಕೆ ಮರಗಳನ್ನು ನಾಶ ಮಾಡಲು ಅರಣ್ಯ ಅಧಿಕಾರಿಗಳು ಆಸಕ್ತರಾಗಿದ್ದಾರೆ. ಹೀಗಾಗಿ ಅಡಿಕೆ ಫಸಲಿಗಾಗಿ ಇಷ್ಟು ವರ್ಷ ಕಾದ ಸೈನಿಕ ಕುಟುಂಬದವರು ಅತಂತ್ರರಾಗಿದ್ದಾರೆ.
ಆ ಅಡಿಕೆ ಗಿಡ ನಾಟಿ ಮಾಡಲಾದ ಕ್ಷೇತ್ರಕ್ಕೆ ಜಿಪಿಎಸ್ ಆಗಿದೆ. ಸ್ಥಳ ಪರಿಶೀಲನಾ ಸಮಿತಿಯೂ ಜಿಪಿಎಸ್ ನಕಾಶೆಗೆ ಇದೇ ಸರ್ವೆ ನಂಬರದಲ್ಲಿ ಸಾಗುವಳಿ ಕ್ಷೇತ್ರವೆಂದು ಸಹ ಗುರುತಿಸಿದೆ. ಆ ನಕಾಶೆಗೆ ವಲಯ ಅರಣ್ಯ ಅಧಿಕಾರಿ, ಉಪವಲಯ ಅಧಿಕಾರಿ, ಕಂದಾಯ ಇಲಾಖೆ, ಗ್ರಾಮ ಅರಣ್ಯ ಹಕ್ಕು ಸಮಿತಿಯವರ ಸಹಿ ಸಹ ಇದೆ. ಅದಾಗಿಯೂ, ಆ ಕ್ಷೇತ್ರವನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಬೇಕು ಎಂದು ಅರಣ್ಯ ಅಧಿಕಾರಿಗಳು ಸೂಚಿಸಿದ್ದಾರೆ. 9 ಎಕರೆ ಕ್ಷೇತ್ರವನ್ನು ಸ್ವಂತ ಖರ್ಚಿನಲ್ಲಿ ತೆರವು ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಬೇಕು ಎಂದು ಜುಲೈ 17ರಂದು ಆದೇಶಹೊರಡಿಸಲಾಗಿದೆ.
`ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಅರಣ್ಯವಾಸಿಯ ಸಾಗುವಳಿ ಕ್ಷೇತ್ರ ದೃಢಪಡಿಸಿಕೊಳ್ಳದೇ ಈ ಆದೇಶ ಹೊರಡಿಸಿದ್ದಾರೆ. ಅರಣ್ಯ ಹಕ್ಕು ಕಾಯಿದೆಯ ಅರ್ಜಿಯಲ್ಲಿ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸದೇ, ಜಿಪಿಎಸ್ ಮೇಲ್ಮನವಿ ದಾಖಲಿಸುವ ಕುರಿತು ಅರ್ಜಿ ಪರಿಶೀಲಿಸದೇ, ರಾಜ್ಯ ಸರ್ಕಾರ 1915ರ ನಂತರದ ಅತಿಕ್ರಮಣ ಕ್ಷೇತ್ರ ಒಕ್ಕಲೆಬಿಸದಂತೆ ಆದೇಶ ಅನುಸರಿಸದೇ ಒಕ್ಕಲೆಬ್ಬಿಸುವ ಆದೇಶ ಮಾಡಿರುವುದು ಸರಿಯಲ್ಲ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ. `ನಿವೃತ್ತ ಸೈನಿಕ ಸಲ್ಲಿಸಿದ ಅರ್ಜಿಗೆ ಅರಣ್ಯ ಇಲಾಖೆಯು ಗುರುತಿಸಿದ ಸರ್ವೆ ನಂಬರ ಮತ್ತು ಜಿಪಿಎಸ್ ನಕಾಶೆಯಲ್ಲಿರುವ ಸರ್ವೆ ನಂಬರ 210 ಎಂದು ಗುರುತಿಸಿ, ಒಕ್ಕಲೆಬ್ಬಿಸುವ ಪ್ರಕ್ರಿಯೆ ನ್ಯಾಯಾಲಯದಲ್ಲಿ ದಾಖಲಿಸಿರುವ ಸರ್ವೆ 151 ಎಂದು ಉಲ್ಲೇಖಿಸಿರುವುದರಲ್ಲಿ ವ್ಯತ್ಯಾಸಗಳಿವೆ. ಸಾಗುವಳಿ ಕ್ಷೇತ್ರಕ್ಕೆ ಈ ಗೊಂದಲವನ್ನು ಸ್ಪಷ್ಟಪಡಿಸಲು ಹೋರಾಟಗಾರರ ಪ್ರಮುಖರು ಸಾಗುವಳಿ ಕ್ಷೇತ್ರದಲ್ಲಿ ದಿಶಾಂಕ ತಂತ್ರಜ್ಞಾನದ ಮೂಲಕ ಪರಿಶೀಲಿಸಿದ್ದಾರೆ. ಕಂದಾಯ ದಾಖಲೆಯಲ್ಲಿ ಸಾಗುವಳಿ ಕ್ಷೇತ್ರದಲ್ಲಿಯೂ ದಿಶಾಂಕ ನಕಾಶೆಯಲ್ಲಿ ಗೋಚರಿಸಿದ ಸರ್ವೆ ನಂಬರ್ 159 ನಿಕ್ಕಿ ಜಲಪಾತದ ಹಿನ್ನೀರು ಸಂಬAಧಿಸಿದ ಲೋಕೋಪಯೋಗಿ ಇಲಾಖೆಗೆ ಸಂಬAಧಿಸಿದ ಕ್ಷೇತ್ರವು ಅಕ್ರಮಣ ಕ್ಷೇತ್ರವೆಂದು ಕಂದಾಯ ದಾಖಲೆಯಲ್ಲಿ ಕಂಡುಬರುತ್ತದೆ’ ಎಂದವರು ವಿವರಿಸಿದ್ದಾರೆ.
`ಈ ಎಲ್ಲಾ ಹಿನ್ನಲೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಈ ಸಮಸ್ಯೆ ಬಗೆಹರಿಸಬೇಕು. ಅದಾಗಿಯೂ ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದಲ್ಲಿ ತೀವ್ರ ತರದ ಹೋರಾಟ ಅನಿವಾರ್ಯ’ ಎಂದು ಎಚ್ಚರಿಸಿದ್ದಾರೆ.