ವಂದಿಗೆಯ ಹೊನ್ನಪ್ಪ ನಾಯಕ ಅವರ ಮನೆಗೆ ನೆಂಟರು ಬಂದಿದ್ದು, ಅಪರೂಪಕ್ಕೆ ಬಂದ ಸಂಬoಧಿಕರಿಗೆ ಕುಟುಂಬದವರು ಹೊಟ್ಟೆತುಂಬ ಊಟ ಹಾಕಿದ್ದಾರೆ. ಹೊನ್ನಪ್ಪ ನಾಯಕ ಅವರ ಮನೆಯ ಆತಿಥ್ಯ ಸ್ವೀಕರಿಸಿದ ಸಂಬoಧಿಕರು ಆ ಮನೆಯಲ್ಲಿದ್ದ ಒಡವೆ ಕದ್ದು ಪರಾರಿಯಾಗಿದ್ದಾರೆ!
ಅಂಕೋಲಾದ ವಂದಿಗೆಯಲ್ಲಿ ಹೊನ್ನಪ್ಪಾ ಬೊಮ್ಮಯ್ಯ ನಾಯಕ ಅವರು ವಾಸವಾಗಿದ್ದಾರೆ. 77 ವರ್ಷದ ಅವರು ಕೃಷಿ ಕೆಲಸ ಮಾಡಿಕೊಂಡಿದ್ದು, 8 ವರ್ಷದ ಹಿಂದೆ ತಮ್ಮ ಮಗನಿಗೆ ಮದುವೆ ಮಾಡಿದ್ದಾರೆ. ಹೊನ್ನಪ್ಪ ನಾಯಕ ಅವರ ಮಗ-ಸೊಸೆ ಉಡುಪಿಯಲ್ಲಿ ವಾಸವಾಗಿದ್ದು, ಆಗಾಗ ಊರಿಗೆ ಬರುತ್ತಾರೆ. ಮೇ 11ರಂದು ಪಕ್ಕದಮನೆಯಲ್ಲಿ ಗೃಹಪ್ರವೇಶವಿದ್ದ ಕಾರಣ ಹೊನ್ನಪ್ಪ ನಾಯಕ ಅವರ ಸೊಸೆ ಶ್ರೀದೇವಿ ಅವರು ಊರಿಗೆ ಬಂದಿದ್ದರು. ಮೈತುಂಬ ಒಡವೆ ಧರಿಸಿ ಬಂದಿದ್ದ ಅವರು ಗೃಹಪ್ರವೇಶ ಮುಗಿದ ನಂತರ ಆ ಒಡವೆಗಳನ್ನು ಮನೆಯಲ್ಲಿದ್ದ ಕಪಾಟಿನಲ್ಲಿರಿಸಿದ್ದರು.
ಅದಾದ ನಂತರ ಅವರು ಮತ್ತೆ ಉಡುಪಿಗೆ ಹೋಗಿದ್ದರು. ಶ್ರೀದೇವಿ ಅವರು ಉಡುಪಿಗೆ ಹೋದ ನಂತರ ಶ್ರೀದೇವಿ ಅವರ ತಂಗಿ ಎಚ್ ಪ್ರಭಾವತಿ ಹಾಗೂ ಆಕೆಯ ಪತಿ ರಾಘವೇಂದ್ರ ಅವರು ಹೊನ್ನಪ್ಪ ನಾಯಕ ಅವರ ಮನೆಗೆ ಆಗಮಿಸಿದ್ದರು. ಶ್ರೀದೇವಿ ಅವರ ಸ್ನೇಹಿತೆ ವಿನ್ನಿಭಾಯಿ ಅವರು ಸಹ ಜೊತೆಯಿದ್ದರು. ಈ ಮೂವರು ಹೊನ್ನಪ್ಪ ನಾಯಕ ಅವರ ಮನೆಯಲ್ಲಿಯೇ ಉಳಿದು ಆತಿಥ್ಯ ಸ್ವೀಕರಿಸಿದ್ದರು. ಅದಾಗಿ ಕೆಲ ದಿನದ ನಂತರ ಶ್ರೀದೇವಿ ಅವರು ಅಂಕೋಲಾಗೆ ಆಗಮಿಸಿ, ವಾರಗಳ ಕಾಲ ಇಲ್ಲಿಯೇ ಇದ್ದರು. ಮತ್ತೆ ಉಡುಪಿಗೆ ಮರಳುವಾಗ ಕಪಾಟಿನಲ್ಲಿದ್ದ ಒಡವೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರು. ಆದರೆ, ಕಪಾಟು ತೆಗೆದು ನೋಡಿದಾಗ ಅಲ್ಲಿ ಆಭರಣಗಳು ಕಾಣಲಿಲ್ಲ.
ಮೂರು ಚೈನು, ಎರಡು ಬಳೆ, ಒಂದು ಉಂಗುರ, ಬ್ರೇಸ್ಲೈಟ್, ಕಿವಿಯೋಲೆ ಸೇರಿ ಚಿನ್ನದ ಆಭರಣಗಳು ಕಾಣೆಯಾಗಿದ್ದರು. 4.5 ಲಕ್ಷ ರೂ ಮೌಲ್ಯದ ಚಿನ್ನ ಅಲ್ಲಿಂದ ನಾಪತ್ತೆಯಾಗಿರುವ ಬಗ್ಗೆ ಶ್ರೀದೇವಿ ಅವರು ತಮ್ಮ ಮಾವ ಹೊನ್ನಪ್ಪ ನಾಯಕ ಅವರ ಬಳಿ ಹೇಳಿದರು. ಆಘಾತಗೊಂಡ ಹೊನ್ನಪ್ಪ ನಾಯಕ ಅವರು ಈ ಎಲ್ಲಾ ಒಡೆವೆಯನ್ನು ಉಡುಪಿಯಿಂದ ಬಂದಿದ್ದ ರಾಘವೇಂದ್ರ ಬಿ ಅವರೇ ಕದ್ದಿರುವ ಬಗ್ಗೆ ಅನುಮಾನವ್ಯಕ್ತಪಡಿಸಿದರು. ಕಾಣೆಯಾದ ಒಡವೆ ಹುಡುಕಿಕೊಡುವಂತೆ ಅವರು ಅಂಕೋಲಾ ಪೊಲೀಸರಲ್ಲಿ ದೂರು ನೀಡಿದ್ದು, ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.