ಬ್ರಾಹ್ಮಣಗಲ್ಲಿ ರಸ್ತೆ ಅಂಚಿನಲ್ಲಿ ವಿನಾಯಕ ನಾಯ್ಕ ಅವರು ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿದ್ದ ಬೈಕನ್ನು ಕಳ್ಳರು ಕದ್ದಿದ್ದಾರೆ. ಎಲ್ಲಾ ಕಡೆ ಹುಡುಕಿದರೂ ಬೈಕ್ ಸಿಗದ ಕಾರಣ ಅವರು ಪೊಲೀಸರ ಸಹಾಯ ಕೇಳಿದ್ದಾರೆ.
ಕುಮಟಾದ ನೆಲ್ಲಿಕೇರಿ ಬಳಿಯ ಕೊಪ್ಪಳಕರವಾಡದಲ್ಲಿ ವಿನಾಯಕ ಮಹಾದೇವ ನಾಯ್ಕ ಅವರು ವಾಸವಾಗಿದ್ದಾರೆ. ಸರ್ಕಾರಿ ನೌಕರರಾಗಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಕಾರವಾರದಲ್ಲಿ ಓಡಾಡಲು ಅವರು ಪ್ಯಾಶನ್ ಪ್ರೋ ಬೈಕು ಹೊಂದಿದ್ದು, ಅದೇ ಬೈಕು ಇದೀಗ ಕಳ್ಳರ ಪಾಲಾಗಿದೆ. ಅಗಸ್ಟ 19ರ ಸಂಜೆಯವರಗೂ ವಿನಾಯಕ ನಾಯ್ಕ ಅವರ ಬಳಿಯಿದ್ದ ಆ ಬೈಕು ನಂತರ ಕಳ್ಳರ ಸ್ವತ್ತಾಗಿದೆ.
ಅಗಸ್ಟ 19ರಂದು ಸಂಜೆ 7 ಗಂಟೆಯ ಸುಮಾರಿಗೆ ವಿನಾಯಕ ನಾಯ್ಕ ಅವರು ಕಾರವಾರ ಬಸ್ ನಿಲ್ದಾಣದ ಬಳಿ ಬಂದಿದ್ದಾರೆ. ಬ್ರಾಹ್ಮಣಗಲ್ಲಿಗೆ ಹೋಗುವ ರಸ್ತೆ ಅಂಚಿನಲ್ಲಿ ಅವರು ತಮ್ಮ ಬೈಕ್ ನಿಲ್ಲಿಸಿದ್ದಾರೆ. ಮರುದಿನ ಬೆಳಗ್ಗೆ 9.30ಕ್ಕೆ ಅಲ್ಲಿ ಹೋಗಿ ನೋಡಿದಾಗ ಅವರ ಬೈಕ್ ಕಾಣಿಸಿಲ್ಲ. ಈ ಬಗ್ಗೆ ಅವರು ಹುಡುಕಾಟ ನಡೆಸಿ, ಅಲ್ಲಿ – ಇಲ್ಲಿ ವಿಚಾರಿಸಿದ್ದಾರೆ. ಗೊತ್ತಿಲ್ಲದೇ ಯಾರಾದರೂ ಕೊಂಡೊಯ್ದಿರಬಹುದು ಎಂದು ಅವರು ಕಾದಿದ್ದಾರೆ. ಆದರೆ, ಎಲ್ಲಿಯೂ ಬೈಕ್ ಸಿಗದ ಕಾರಣ ಪೊಲೀಸ್ ದೂರು ನೀಡಿದ್ದಾರೆ. ಹ್ಯಾಂಡಲ್ ಲಾಕ್ ಮಾಡಿದ ಬೈಕನ್ನು ಕಳ್ಳರು ದೋಚಿದ್ದು, ಅದನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ.