ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಭಾರೀ ಪ್ರಮಾಣದ ಪೈಪೋಟಿ ನಡೆಯುತ್ತಿದೆ. ಈವರೆಗೆ 36ಕ್ಕೂ ಅಧಿಕ ಜನ ಅಧ್ಯಕ್ಷ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರ್ಜಿ ಸಲ್ಲಿಸಿದ ಅನೇಕರು ಕಾಂಗ್ರೆಸ್’ನ ಪ್ರಾಥಮಿಕ ಸದಸ್ಯತ್ವವನ್ನೇ ಪಡೆದಿಲ್ಲ!
ಮೊದಲಿನಿಂದಲೂ ಕಾಂಗ್ರೆಸ್ ಪಕ್ಷ ಆಗಾಗ ಸದಸ್ಯತ್ವ ಅಭಿಯಾನ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷದ ಸದಸ್ಯರಾಗಬಯಸುವವರು 5 ರೂ ಪಾವತಿಸಿ, ಅಧಿಕೃತ ರಸೀದಿಪಡೆಯಬೇಕಿದೆ. ಅದಾದ ನಂತರ ಅವರು ಪಕ್ಷದ ಪ್ರಾಥಮಿಕ ಸದಸ್ಯರಾಗಲಿದ್ದು ಹಂತ ಹಂತವಾಗಿ ವಿವಿಧ ಹುದ್ದೆಪಡೆಯುವ ಅರ್ಹತೆಹೊಂದುತ್ತಾರೆ. ಅವರವರ ಶಕ್ತಿ-ಸಾಮರ್ಥ್ಯ, ಸಂಘಟನೆ ಹಾಗೂ ಪ್ರಭಾವ ಆಧರಿಸಿ ಕಾಂಗ್ರೆಸ್ ವಿವಿಧ ಜವಾಬ್ದಾರಿಗಳನ್ನು ನೀಡುತ್ತದೆ. ಸದ್ಯ, ಅಂಥಹುದೇ ಮಾನದಂಡದ ಆಧಾರದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸುತ್ತಿದ್ದು ಈ ವೇಳೆ ಅರ್ಜಿ ಸಲ್ಲಿಸಿದ ಅನೇಕರು ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಸಹ ಪಡೆದಿಲ್ಲ ಎಂಬ ಅಂಶ ಹೊರಬಿದ್ದಿದೆ.
ಕಾಂಗ್ರೆಸ್ ಅನೇಕ ಬಾರಿ ಮಿಸ್ ಕಾಲ್ ಮೂಲಕ ಸದಸ್ಯತ್ವ ಪಡೆಯುವ ಅವಕಾಶವನ್ನು ಕಲ್ಪಿಸಿತ್ತು. ಆದರೆ, ಸದ್ಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿದ ಕೆಲವರಿಗೆ ಆ ವೇಳೆ ಮಿಸ್ ಕಾಲ್ ಕೊಟ್ಟು ಸದಸ್ಯತ್ವಪಡೆಯಲು ಸಹ ಪುರಸೋತು ಸಿಕ್ಕಿರಲಿಲ್ಲ. ಇನ್ನೂ ಅನೇಕರಿಗೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಪಡೆಯುವುದು ಹೇಗೆ? ಎಂಬ ವಿಷಯವೂ ಗೊತ್ತಿರಲಿಲ್ಲ. ಸಾಮಾನ್ಯ ಜನ 5ರೂ ಪಾವತಿಸಿ ಅಥವಾ ಮಿಸ್ ಕಾಲ್ ಕೊಡುವ ಮೂಲಕ ಕಾಂಗ್ರೆಸ್ ಸದಸ್ಯತ್ವಪಡೆದಿದ್ದು, ದೊಡ್ಡ ದೊಡ್ಡ ನಾಯಕರಾಗಿ ಗುರುತಿಸಿಕೊಂಡವರೇ ಪ್ರಾಥಮಿಕ ಸದಸ್ಯತ್ವಪಡೆಯುವ ವಿಷಯದಲ್ಲಿ ಹಿಂದಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಕಾAಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹುದ್ದೆಗೆ ಯೋಗ್ಯರನ್ನು ಆಯ್ಕೆ ಮಾಡುವುದಕ್ಕಾಗಿ ಎಐಸಿಸಿ ವೀಕ್ಷಕಿ ರೋಸೆಲೀನಾ ಟಿರ್ಕೆ ಅವರು ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದಾರೆ. ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ನಾಯಕ-ಶಾಸಕರವರೆಗೆ ಅವರು ಮಾತನಾಡಿಸಿದ್ದಾರೆ. ಕಾರ್ಯಕರ್ತರನ್ನು ಒಗ್ಗೂಡಿಸುವ ಹಾಗೂ ರಾಜಕೀಯ ಹೊರತಾಗಿಯೂ ಜನ ಮನ್ನಣೆಗಳಿಸಿರುವ ವ್ಯಕ್ತಿಗಳ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಅದರೊಂದಿಗೆ, ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಅಭ್ಯರ್ಥಿಯನ್ನು ಪ್ರತ್ಯೇಕವಾಗಿ ಕರೆದು ಸಂದರ್ಶನದ ರೀತಿ ಮಾತನಾಡಿಸಿದ್ದಾರೆ.
ಪ್ರತಿ ಅಭ್ಯರ್ಥಿಯ ವೈಯಕ್ತಿಕ ಹಿನ್ನಲೆ, ಪಕ್ಷಕ್ಕಾಗಿ ಮಾಡಿದ ತ್ಯಾಗ, ಸಂಘಟನಾ ಶಕ್ತಿಯ ಬಗ್ಗೆ ಅವರು ಗಮನಿಸಿ ಹೈಕಮಾಂಡಿಗೆ ವರದಿ ಸಲ್ಲಿಸುವ ಸಿದ್ಧತೆಯಲ್ಲಿದ್ದಾರೆ. ಶಿರಸಿಯ ರವಿಂದ್ರ ನಾಯ್ಕ, ನಾಗರಾಜ ನಾರ್ವೇಕರ್, ದೀಪಕ ಹೆಗಡೆ, ಸಂತೋಷ ಶೆಟ್ಟಿ, ಸತೀಶ ನಾಯ್ಕ, ನಾಗರಾಜ ಮಡಿವಾಳ, ಜ್ಯೋತಿ ಪಾಟೀಲ, ಪ್ರವೀಣ ಗೌಡ, ಸಿದ್ದಾಪುರದ ವಸಂತ ನಾಯ್ಕ, ವಿ ಎನ್ ನಾಯ್ಕ, ಕುಮಟಾದ ಭಾಸ್ಕರ ಪಟಗಾರ, ಅಂಕೋಲಾದ ಸಾಯಿ ಗಾಂವ್ಕರ್, ಮುಂಡಗೋಡಿನ ಜ್ಞಾನೇಶ ಗುಡಿಯಾಳ, ಸಲ್ಮಾನ್, ದಂಡೇಲಿಯ ಆರ್ ಪಿ ನಾಯ್ಕ, ಕಾರವಾರದ ಜಿ ಟಿ ನಾಯ್ಕ, ಭಟ್ಕಳದ ಮಜೀದ್ ಶೇಖ್ ಮೊದಲಾದವರು ಜಿಲ್ಲಾಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ. ಅವರ ಜೊತೆ ಇನ್ನಿತರರು ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ಆಸೆ ಪಟ್ಟು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಪ್ರಾಥಮಿಕ ಸದಸ್ಯತ್ವಪಡೆದವರು ಯಾರು? ಪ್ರಾಥಮಿಕ ಸದಸ್ಯತ್ವಪಡೆಯದೇ ಅರ್ಜಿ ಸಲ್ಲಿಸಿದವರು ಯಾರೂ? ಎಂಬುದನ್ನು ಗಮನಿಸಿದ್ದಾರೆ. ಈ ವಿಷಯವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸುವ ಸಾಧ್ಯತೆಗಳಿವೆ.