ಕಳಚೆಯ ರಾಜೇಶ ಹೆಗಡೆ ಅವರು ನಾಗರ ಪಂಚಮಿ ಪೂಜೆ ನಡೆಯುವ ಸ್ಥಳಕ್ಕೆ ಬೂಟು ಧರಿಸಿ ಹೋಗಿದ್ದು, ಅದನ್ನು ಪ್ರಶ್ನಿಸಿದ ಕಾರಣ ಉಮಾಕಾಂತ ಕಳಸ್ ಅವರಿಗೆ ರಾಜೇಶ ಹೆಗಡೆ ಹಾಗೂ ಅನಂತ ಹೆಗಡೆ ಸೇರಿ ಕತ್ತಿಯಿಂದ ಹೊಡೆದಿದ್ದಾರೆ. ಉಮಾಕಾಂತ ಕಳಸ್ ಅವರ ಪುತ್ರಿ ಆಶಾ ಕಳಸ್ ಅವರ ಬೆರಳಿಗೂ ಕತ್ತಿ ತಾಗಿ ರಕ್ತ ಬಂದಿದ್ದು, ಈ ವೇಳೆ ಕಾಶಿನಾಥ ಕಳಸ ಹಾಗೂ ಶ್ರೀನಾಥ ಕಳಸ್ ಅವರು ಅಲ್ಲಿಗೆ ಆಗಮಿಸುವುದನ್ನು ನೋಡಿ ಅವರಿಬ್ಬರು ಪರಾರಿಯಾಗಿದ್ದಾರೆ.
ಯಲ್ಲಾಪುರದ ಕಳಚೆಯ ಸುಣಜೋಗಕೇರಿಯಲ್ಲಿ ಉಮಾಕಾಂತ ಬಾಬು ಕಳಸ್ ಅವರು ವಾಸವಾಗಿದ್ದಾರೆ. 55 ವರ್ಷದ ಅವರು ನಾಗರ ಪಂಚಮಿ ದಿನ ತಮ್ಮ ಮನೆ ಬಳಿ ಭಕ್ತಿಯಿಂದ ಪೂಜೆ ಮಾಡಿದ್ದಾರೆ. ಈ ಪೂಜೆ ನಡೆಯುವ ವೇಳೆ ಅದೇ ಭಾಗದ ರಾಜೇಶ ಅನಂತ ಹೆಗಡೆ (30) ಅವರು ಅಲ್ಲಿಗೆ ಹೋಗಿದ್ದಾರೆ. ಪೂಜೆ ನಡೆಯುವ ಸ್ಥಳದವರೆಗೂ ರಾಜೇಶ ಹೆಗಡೆ ಅವರು ಬೂಟು ಧರಿಸಿ ಹೋಗಿದ್ದಾರೆ. ಇದನ್ನು ನೋಡಿದ ಉಮಾಕಾಂತ ಕಳಸ್ ಅವರು ಬೂಟು ತೆಗೆದು ಬರುವಂತೆ ಮನವಿ ಮಾಡಿದ್ದಾರೆ.
ಆ ವೇಳೆ ಅಲ್ಲಿಂದ ಸುಮ್ಮನೆ ಹೋದ ರಾಜೇಶ ಹೆಗಡೆ ಅವರು ನಂತರ ತಮ್ಮ ತಂದೆ ಅನಂತ ಹೆಗಡೆ ಅವರನ್ನು ಕರೆದುಕೊಂಡು ಉಮಾಕಾಂತ ಕಳಸ್ ಅವರ ಮನೆ ಬಳಿ ಬಂದಿದ್ದಾರೆ. `ನಾಗರ ಪಂಚಮಿ ದಿನ ನನ್ನ ಮಗನಿಗೆ ಏನು ಹೇಳಿದೆ?’ ಎಂದು ಅನಂತ ಹೆಗಡೆ ಅವರು ಜೋರಾಗಿ ಪ್ರಶ್ನಿಸಿದ್ದಾರೆ. `ಬೂಟು ತೆಗೆದು ಬಾ’ ಎಂದಿರುವುದಾಗಿ ಉಮಾಕಾಂತ ಕಳಸ ಅವರು ಹೇಳಿದ್ದಾರೆ. ಇದರಿಂದ ಸಿಟ್ಟಾದ ರಾಜೇಶ ಹೆಗಡೆ ಅವರು `ನನ್ನ ಬೂಟು ಕಳಚಿಸಲು ನೀನು ಯಾರು?’ ಎಂದು ಜೋರಾಗಿ ಬೊಬ್ಬೆ ಹೊಡೆದಿದ್ದಾರೆ. ತಮ್ಮ ಕೈಯಲ್ಲಿದ್ದ ಕತ್ತಿಯಿಂದ ಉಮಾಕಾಂತ ಕಳಸ ಅವರ ಮೇಲೆ ಆಕ್ರಮಣ ನಡೆಸಿದ್ದಾರೆ.
ಈ ವೇಳೆ ಉಮಾಕಾಂತ ಕಳಸ್ ಅವರು ಎರಡು ಕೈಯಿಂದ ಕತ್ತಿ ಅಡ್ಡಹಿಡಿದು, ಅಲ್ಲಿಯೇ ಇದ್ದ ಅನಂತ ಹೆಗಡೆ ಅವರು ಇನ್ನೊಂದು ಕತ್ತಿ ಬೀಸಿದ್ದಾರೆ. ಆ ಕತ್ತಿ ಉಮಾಕಾಂತ ಕಳಸ ಅವರ ಕೈಗೆ ತಾಗಿದೆ. ಈ ವೇಳೆ ಅಲ್ಲಿಗೆ ಉಮಾಕಾಂತ ಕಳಸ್ ಅವರ ಪುತ್ರಿ ಆಶಾ ಕಳಸ್ ಅವರು ಆಗಮಿಸಿದ್ದು, ಅವರ ಮೇಲೆಯೂ ಈ ಅಪ್ಪ-ಮಗ ದಾಳಿ ಮಾಡಿದ್ದಾರೆ. ಆಶಾ ಕಳಸ್ ಅವರ ಕೈ ಬೆರಳಿಗೆ ಕತ್ತಿ ತಾಗಿ ರಕ್ತ ಬಂದಿದೆ. ಅದಾದ ನಂತರ ಅಲ್ಲಿನ ಗಲಾಟೆ ಕೇಳಿ ಕಾಶಿನಾಥ ಬಾಬು ಕಳಸ ಹಾಗೂ ಶ್ರೀನಾಥ ಶ್ರೀಕಾಂತ ಕಳಸ ಅವರು ಆಗಮಿಸಿದ್ದಾರೆ. ಆಗ, ರಾಜೇಶ ಹೆಗಡೆ ಹಾಗೂ ಅನಂತ ಹೆಗಡೆ ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ.
ಗಾಯಗೊಂಡವರಿಬ್ಬರು ಆಸ್ಪತ್ರೆ ಸೇರಿದ್ದು, ಚೇತರಿಸಿಕೊಂಡ ನಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಅನಂತ ಹೆಗಡೆ ಹಾಗೂ ರಾಜೇಶ ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ. ಪಿಸೈ ಮಹಾವೀರ ಕಾಂಬಳೆ ಅವರು ಕೇಸು ದಾಖಲಿಸಿಕೊಂಡು, ತನಿಖೆ ಶುರು ಮಾಡಿದ್ದಾರೆ.