ಸರ್ಕಾರಿ ಬಸ್ಸನ್ನು ಓವರ್ಟೆಕ್ ಮಾಡುವ ವಿಚಾರದಲ್ಲಿ ಚಾಲಕನ ಜೊತೆ ಜಗಳ ಮಾಡಿದ್ದ ಲಾರಿ ಚಾಲಕ 25 ವರ್ಷ ಅಡಗಿಕೊಂಡಿದ್ದು, ಸದ್ಯ ಯಲ್ಲಾಪುರ ಪೊಲೀಸರು ಆ ಚಾಲಕನನ್ನು ಬಂಧಿಸಿದ್ದಾರೆ. ಅನಗತ್ಯವಾಗಿ ಜಗಳ ಮಾಡಿದ ತಪ್ಪಿಗೆ ಗುಜರಾತಿನ ಕೇಸುಬಾಯಿ ಸಿಸೋಡಿಯಾ ಇದೀಗ ಜೈಲು ಸೇರಿದ್ದಾರೆ.
2001ರ ಮೇ 5ರಂದು ಯಲ್ಲಾಪುರದ ಜೋಗಿಕೊಪ್ಪ ತಿರುವಿನ ಬಳಿ ಚಾಲಕರಿಬ್ಬರ ನಡುವೆ ಜಗಳ ನಡೆದಿತ್ತು. ಆ ದಿನ ಕೆಎಸ್ಆರ್ಟಿಸಿ ಬಸ್ಸಿನ ಚಾಲಕರೊಬ್ಬರಿಗೆ ಲಾರಿ ಚಾಲಕನೊಬ್ಬ ನಿಂದಿಸಿದ್ದರು. ಅವರಿಬ್ಬರ ನಡುವಿನ ಗಲಾಟೆಯಿಂದ ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿತ್ತು. ಬಸ್ಸನ್ನು ಓವರ್ಟೆಕ್ ಮಾಡುವ ವಿಚಾರವಾಗಿ ಲಾರಿ ಚಾಲಕ ಗಲಾಟೆ ಮಾಡಿದ್ದು, ಅದು ವಿಕೋಪಕ್ಕೆ ತೆರಳಿತ್ತು. ಸರ್ಕಾರಿ ನೌಕರಿಗೆ ಅಡ್ಡಿಪಡಿಸಿದ ಲಾರಿ ಚಾಲಕನ ವಿರುದ್ಧ ಬಸ್ಸಿನ ಚಾಲಕ ಪೊಲೀಸ್ ದೂರು ನೀಡಿದ್ದರು. ಆ ದೂರಿನ ಅನ್ವಯ ಯಲ್ಲಾಪುರ ಪೊಲೀಸರು ಲಾರಿ ಚಾಲಕನಾಗಿದ್ದ ಗುಜರಾತಿನ ಮುಂಡವಾಡದ ಕೇಸುಬಾಯಿ ಮಿನಂದಬಾಯಿ ಸಿಸೋಡಿಯಾ (58) ಅವರನ್ನು ವಶಕ್ಕೆಪಡೆದಿದ್ದರು.
ಅದಾದ ನಂತರ ಆರೋಪಿ ಲಾರಿ ಚಾಲಕನ ವಿರುದ್ಧ ಪೊಲೀಸರು ದೋಷಾರೋಪಣ ಪಟ್ಟಿ ಸಿದ್ಧಪಡಿಸಿದ್ದರು. ದೋಷಾರೋಪಣಪಟ್ಟಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈ ವೇಳೆ ಲಾರಿ ಚಾಲಕ ಕೇಸುಬಾಯಿ ಸಿಸೋಡಿಯಾ ಅವರು `ನನ್ನದೇನು ತಪ್ಪಿಲ್ಲ’ ಎಂದು ವಾದಿಸಿದ್ದರು. ಜಾಮೀನು ನೀಡುವಂತೆ ಅವರು ಮನವಿ ಮಾಡಿದ್ದು, ಕೆಲ ಷರತ್ತುವಿಧಿಸಿ ನ್ಯಾಯಾಲಯ ಜಾಮೀನು ಮಂಜೂರಿ ಮಾಡಿತ್ತು. 2010ರವರೆಗೂ ಆಗಾಗ ನ್ಯಾಯಾಲಯಕ್ಕೆ ಬರುತ್ತಿದ್ದ ಲಾರಿ ಚಾಲಕ ಕೇಸುಬಾಯಿ ಸಿಸೋಡಿಯಾ ಅವರು ನಂತರ ಯಲ್ಲಾಪುರದ ಕಡೆ ಮುಖವನ್ನು ಹಾಕಲಿಲ್ಲ. ನ್ಯಾಯಾಲಯ ವಾರೆಂಟ್ ಜಾರಿ ಮಾಡಿದರೂ ಕೇಸುಬಾಯಿ ಸಿಸೋಡಿಯಾ ಅವರು ಹಾಜರಾಗಲಿಲ್ಲ.
ಸಾಕಷ್ಟು ಬಾರಿ ಪೊಲೀಸರು ಕೇಸುಬಾಯಿ ಸಿಸೋಡಿಯಾ ಅವರನ್ನು ಹುಡುಕಿ ಗುಜರಾತಿಗೆ ಹೋಗಿದ್ದರು. ಆದರೆ, ಅಲ್ಲಿಯೂ ಆರೋಪಿ ಸಿಕ್ಕಿರಲಿಲ್ಲ. 2010ರಿಂದ ತಪ್ಪಿಸಿಕೊಂಡಿದ್ದ ಆರೋಪಿ ಹುಡುಕುವಂತೆ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಇದಕ್ಕಾಗಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಯಲ್ಲಾಪುರದ ಪ್ರಭಾರಿ ಪಿಐ ರಮೇಶ ಹಾನಾಪುರ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಯಲ್ಲಾಪುರ ಪಿಸೈ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ ಸೇರಿ ವಿವಿಧ ಆಯಾಮಗಳಲ್ಲಿ ತನಿಖೆಗಿಳಿದರು. ಪೊಲೀಸ್ ಸಿಬ್ಬಂದಿ ರಾಘವೇಂದ್ರ ಮೂಳೆ ಹಾಗೂ ಮಾರುತಿ ಅವರು ಮತ್ತೆ ಗುಜರಾತಿಗೆ ಹೋಗಿ ಬಂದರು. ಪೊಲೀಸ್ ಸಿಬ್ಬಂದಿ ಸಂತೋಷ ಬಾಳೇರ, ಬಸವರಾಜ ಡಿಕೆ, ಪರಮೇಶ್ವರ ಎಸ್ ಕೆ, ರೇಖಾ ಎಂ ಎಸ್, ಅಂಕೋಲಾದ ಮಹಮದ್ ಶಫಿ ಅವರ ಜೊತೆ ಕಾರವಾರ ಟೆಕ್ನಿಕಲ್ ವಿಭಾಗದ ಉದಯ ಗುನಗಾ, ಬಬನ ಕದಂ, ಮಹಾಲಿಂಗ ಸಾವಳಗಿ ಸೇರಿ ಆರೋಪಿಯ ಅಡಗುತಾಣ ಪತ್ತೆ ಮಾಡಿದರು.
ಒಟ್ಟಿನಲ್ಲಿ ಈ ಎಲ್ಲಾ ಪೊಲೀಸರು ಸೇರಿ ಜಗಳವಾಡಿ ಪರಾರಿಯಾಗಿದ್ದ ಕೇಸುಬಾಯಿ ಸಿಸೋಡಿಯಾ ಅವರನ್ನು ಮತ್ತೆ ಬಂಧಿಸಿದರು. ಸದ್ಯ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.