ಹೊನ್ನಾವರ ಹಳದಿಪುರದ ಅಪ್ಪೇಕೇರಿಯ ಅಶೋಕ ದೇಶಭಂಡಾರಿ ಅವರಿಗೆ ಐದು ಜನ ಸೇರಿ ಥಳಿಸಿದ್ದಾರೆ. ಧರಣೇಂದ್ರ ಇಂದ್ರ, ರಾಜೇಂದ್ರ ಇಂದ್ರ, ಅಂಬಾಬಾಯಿ ಇಂದ್ರ ಅವರ ಜೊತೆ ವೀಣಾ ಹೆಗಡೆ, ಸುಮನಾ ಹೆಗಡೆ ಅವರು ಸೇರಿ ಅಶೋಕ ದೇಶಭಂಡಾರಿ ಅವರಿಗೆ ಹಿಗ್ಗಾಮುಗ್ಗ ಹೊಡೆದಿದ್ದಾರೆ.
ಹೊನ್ನಾವರ ಹಳದಿಪುರದ ಅಪ್ಪೇಕೇರಿಯಲ್ಲಿ ಅಶೋಕ ವಾಸುದೇವ ದೇಶಭಂಡಾರಿ ಅವರು ವಾಸವಾಗಿದ್ದಾರೆ. ಟೇಲರಿಂಗ್ ಕೆಲಸ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಅಶೋಕ ದೇಶಭಂಡಾರಿ ಅವರ ದುಡಿಮೆಯಿಂದಲೇ ಅವರ ಅಣ್ಣ ಚಂದ್ರಕಾoತ ದೇಶಭಂಡಾರಿ ಹಾಗೂ ಅಕ್ಕ ಮಂಗಲಾ ಭಂಡಾರಿ ಅವರು ಬದುಕುತ್ತಿದ್ದಾರೆ. ಅಶೋಕ ದೇಶಭಂಡಾರಿ ಅವರ ಮನೆ ಅಂಚಿನಲ್ಲಿ ಧರಣೇಂದ್ರ ಮಂಜಯ್ಯ ಇಂದ್ರ ಅವರು ವಾಸವಾಗಿದ್ದಾರೆ. ಧರಣೇಂದ್ರ ಇಂದ್ರ ಅವರು ವೈದಿಕರಾಗಿದ್ದಾರೆ. ಧರಣೇಂದ್ರ ಇಂದ್ರ ಹಾಗೂ ಅಶೋಕ ದೇಶಭಂಡಾರಿ ಅವರ ನಡುವೆ ಜಾಗದ ವಿಷಯವಾಗಿ ವೈಮನಸ್ಸಿದ್ದು, ಅದೇ ಹೊಡೆದಾಟಕ್ಕೆ ಕಾರಣವಾಗಿದೆ.
ಜುಲೈ 2ರಂದು ಸಾಲಕೇರಿ ಕಡೆಯಿಂದ ಅಪ್ಪೇಕೇರಿ ಮಾರ್ಗವಾಗಿ ಮೂಡಗಣಪತಿ ಕಡೆ ಅಶೋಕ ದೇಶಭಂಡಾರಿ ಅವರು ನಡೆದು ಹೋಗುತ್ತಿದ್ದರು. ಆಗ ಅಲ್ಲಿಗೆ ಬಂದ ಧರಣೇಂದ್ರ ಇಂದ್ರ ಅವರು ಅಶೋಕ ದೇಶಭಂಡಾರಿ ಅವರನ್ನು ಅಡ್ಡಗಟ್ಟಿದರು. ಧರಣೇಂದ್ರ ಇಂದ್ರ ಅವರ ಜೊತೆ ರಾಜೇಂದ್ರ ಇಂದ್ರ, ಅಂಬಾಬಾಯಿ ಇಂದ್ರ, ವೀಣಾ ಮಹಾಬಲೇಶ್ವರ ಹೆಗಡೆ, ಸುಮನಾ ಮಹಾಬಲೇಶ್ವರ ಹೆಗಡೆ ಸಹ ಇದ್ದರು. ಅವರೆಲ್ಲರೂ ಸೇರಿ ಅಶೋಕ ದೇಶಭಂಡಾರಿ ಅವರನ್ನು ಬಡಿಗೆಯಿಂದ ಬಡಿದರು. ಆ ಐದು ಜನರ ಏಟು ಸಹಿಸಲಾಗದ ಅಶೋಕ ದೇಶಭಂಡಾರಿ ಅವರು ಜೋರಾಗಿ ಕೂಗಿದ್ದು, ಆಗ ಅವರ ಅಣ್ಣ ಚಂದ್ರಕಾoತ ದೇಶಭಂಡಾರಿ ಹಾಗೂ ಮಂಗಲಾ ಭಂಡಾರಿ ಆಗಮಿಸಿ ಹೊಡೆದಾಟ ತಪ್ಪಿಸಿದರು.
ಗಾಯಗೊಂಡ ಅಶೋಕ ದೇಶಭಂಡಾರಿ ಅವರು 108ಗೆ ಫೋನ್ ಮಾಡಿದ್ದು, ಆಂಬುಲೆನ್ಸ ಸಹಾಯದಿಂದ ಆಸ್ಪತ್ರೆ ಸೇರಿದರು. ಚಿಕಿತ್ಸೆಪಡೆದ ನಂತರ ಅವರು ತಮಗಾದ ನೋವಿನ ಬಗ್ಗೆ ಪೊಲೀಸ್ ದೂರು ನೀಡಿದರು.