ಕುಮಟಾದಲ್ಲಿ ರಿಕ್ಷಾ ಓಡಿಸಿ ಬದುಕು ಕಟ್ಟಿಕೊಂಡಿರುವವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ರಿಕ್ಷಾ ಚಾಲಕರ ನಡುವೆ ಎರಡು ಗುಂಪುಗಳಾಗಿದ್ದು, ಆ ಗುಂಪುಗಳಲ್ಲಿನ ವೈಮನಸ್ಸು ಹೊಡೆದಾಟದ ಸ್ವರೂಪಪಡೆದಿದೆ.
ಕುಮಟಾ ಊರಕೇರಿಯ ಪ್ರಸನ್ನ ಮುಕ್ರಿ ಅವರು ರಿಕ್ಷಾ ಓಡಿಸಿಕೊಂಡು ಬದುಕು ನಡೆಸುತ್ತಿದ್ದು, `ಮುಕ್ರಿ ಸಮುದಾಯದವರು ಇಲ್ಲಿ ರಿಕ್ಷಾ ನಿಲ್ಲಿಸುವ ಹಾಗಿಲ್ಲ’ ಎಂದು ಸಿದ್ದನಬಾವಿಯ ಶಂಕರ್ ಉಪ್ಪಾರ್, ಗಣಪತಿ ಉಪ್ಪಾರ್ ಹಾಗೂ ರಾಜೇಶ ಉಪ್ಪಾರ್ ಅವರು ತಾಕೀತು ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮಹೇಶ ಮಾಧವ ನಾಯ್ಕ, ರಾಘವೇಂದ್ರ ಮಾಧವ ಗೌಡ, ಸಂದೀಪ ಶ್ರೀಧರ ಪಟಗಾರ, ತುಳಸು ಗೌಡ, ಗೋವಿಂದ ಬೀರಾ ಗೌಡ, ಗಣೇಶ ನಾರಾಯಣ ಗೌಡ, ಪ್ರಸನ್ನ ಜಟ್ಟಿ ಮುಕ್ರಿ, ಭರತ ಗೌಡ, ಮನೋಜ ಮೋಹನ ನಾಯ್ಕ ಅವರು ಸೇರಿ ಶಂಕರ್ ದಾಮು ಉಪ್ಪಾರ್ ಹಾಗೂ ರಾಜೇಶ ಸೋಮಾ ಉಪ್ಪಾರ್ ಅವರ ಮೇಲೆ ದಾಳಿ ಮಾಡಿದ್ದಾರೆ.
ಕುಮಟಾ ಬಸ್ ನಿಲ್ದಾಣದ ಹೊರಗೆ `ಜೈ ಭಗೀರಥ’ ಎಂಬ ಹೆಸರಿನಲ್ಲಿ ಆಟೋ ನಿಲ್ದಾಣವಿದೆ. ಬಸ್ ನಿಲ್ದಾಣದ ಒಳ ಪ್ರದೇಶದಲ್ಲಿ ಮತ್ತೊಂದು ಆಟೋ ನಿಲ್ದಾಣವಿದೆ. ಈ ಎರಡು ನಿಲ್ದಾಣದ ಆಟೋ ಚಾಲಕರ ನಡುವೆ ವೈಮನಸ್ಸು ಶುರುವಾಗಿದೆ. ರಿಕ್ಷಾ ಪಾಳಿ ಹಚ್ಚುವ ವಿಚಾರದಲ್ಲಿ ಶುರುವಾದ ಅವರಲ್ಲಿನ ಜಗಳ ಸದ್ಯ ಹೊಡೆದಾಟಕ್ಕೆ ಕಾರಣವಾಗಿದ್ದು, ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಜೂನ್ 19ರಂದು ಸಂಜೆ ಕುಮಟಾ ಹೊಸ ಬಸ್ ನಿಲ್ದಾಣ ಬಳಿ ಈ ಚಾಲಕರ ನಡುವೆ ಜಗಳ ಶುರುವಾಗಿದೆ. ಪ್ರಯಾಣಿಕರೊಬ್ಬರನ್ನು ಬಿಡುವ ವಿಚಾರದಲ್ಲಿ ಶುರುವಾದ ಜಗಳ ತಾರಕಕ್ಕೇರಿದೆ. ಪ್ರಸನ್ನ ಮುಕ್ರಿ ಅವರ ದೂರಿನ ಪ್ರಕಾರ ಶಂಕರ್ ಉಪ್ಪಾರ್, ಗಣಪತಿ ಉಪ್ಪಾರ್ ಹಾಗೂ ರಾಜೇಶ ಉಪ್ಪಾರ್ ಅವರು ಮೊದಲು ಜಗಳ ಶುರು ಮಾಡಿದ್ದಾರೆ. ಆದರೆ, ಶಂಕರ್ ಉಪ್ಪಾರ್ ಅವರ ಪ್ರಕಾರ ಮಹೇಶ ನಾಯ್ಕ ಹಾಗೂ ಅವರ ತಂಡದವರು ಮೊದಲು ಆಕ್ರಮಣ ಮಾಡಿದ್ದಾರೆ. ಈ ಬಗ್ಗೆ ಎರಡು ಗುಂಪಿನವರು ಪೊಲೀಸ್ ಠಾಣೆಯ ಮೆಟ್ಟಿಲೇರಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಶುರು ಮಾಡಿದ್ದಾರೆ.