ನಿವೃತ್ತ ಸೈನಿಕ ಕೃಷ್ಣ ನಾಯ್ಕ ಅವರ ತೋಟಕ್ಕೆ ನುಗ್ಗಿದ ಅರಣ್ಯಾಧಿಕಾರಿಗಳು JCB ಬಳಸಿ ಅಡಿಕೆ ಮರ ನಾಶ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಜಮಾಯಿಸಿದ ಜನ ಅಧಿಕಾರಿಗಳ ವಿರುದ್ಧ ಭಾರೀ ಪ್ರಮಾಣದಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಸಿದ್ದಾಪುರದ ಹೊಸೂರು ಗ್ರಾಮದಲ್ಲಿ ಕೃಷ್ಣ ದ್ಯಾವ ನಾಯ್ಕ ಅವರು ವಾಸವಾಗಿದ್ದು, ಅವರು 26 ವರ್ಷಗಳ ಕಾಲ ಸೈನಿಕರಾಗಿ ದೇಶ ಸೇವೆ ಮಾಡಿದ್ದಾರೆ. ಅವರ ಅಧೀನದಲ್ಲಿ 9 ಎಕರೆ ಅರಣ್ಯ ಅತಿಕ್ರಮಣ ಭೂಮಿಯಿದ್ದು, ಅದಕ್ಕೆ ಜಿಪಿಎಸ್ ಪ್ರಕ್ರಿಯೆ ನಡೆದಿದೆ. ಅದಾಗಿಯೂ ಅರಣ್ಯ ಅಧಿಕಾರಿಗಳು ಆ ಕ್ಷೇತ್ರವನ್ನು ತೊರೆಯುವಂತೆ ನೋಟಿಸ್ ನೀಡಿದ್ದು, ಕ್ಷೇತ್ರ ತೊರೆಯದ ಕಾರಣ ಬುರ್ಡೋಜರ್ ಕಾರ್ಯಾಚರಣೆ ಶುರು ಮಾಡಿದ್ದಾರೆ.
150ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಅರಣ್ಯಾಧಿಕಾರಿಗಳು ನಿವೃತ್ತ ಯೋಧನ ಕುಟುಂಬವನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಿದ್ದಾರೆ. ಆಗ, ಸುತ್ತಲಿನ ಜನ ಹಾಗೂ ಇನ್ನಿತರ ಅರಣ್ಯ ಅತಿಕ್ರಮಣದಾರರ ಜೊತೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಸ್ಥಳಕ್ಕೆ ದೌಡಾಯಿಸಿ ಆಕ್ಷೇಪವ್ಯಕ್ತಪಡಿಸಿದ್ದಾರೆ. `ಕಾನೂನಿಗೆ ವಿರುದ್ಧವಾಗಿ ಈ ಪ್ರಕ್ರಿಯೆ ನಡೆಸಲಾಗಿದೆ’ ಎಂದು ಅಲ್ಲಿದ್ದವರು ಹೇಳಿದ್ದಾರೆ.
ಪ್ರಮುಖರಾದ ಮಹಾಭಲೇಶ್ವರ ನಾಯ್ಕ, ಸಂಕೇತ ನಾಯ್ಕ, ಮಂಜುನಾಥ ನಾಯ್ಕ ಸುಂಕತ್ತಿ, ಕಾರ್ಲುಯಿಸ್ ಮಾವಿನಗುಂಡಿ, ರವಿ ನಾಯ್ಕ ಹಲಗೇರಿ, ಪ್ರಕಾಶ ನಾಯ್ಕ ಹೊಸೂರು, ರಾಜು ಹೊಸೂರು, ದಯಾನಂದ ಹೊಸೂರು ಇನ್ನಿತರರು ಅಧಿಕಾರಿಗಳ ಕ್ರಮ ಖಂಡಿಸಿದ್ದಾರೆ. ಡಿ ವೈ ಎಸ್ ಪಿ ಗೀತಾ ಪಾಟೀಲ್ ಸ್ಥಳ ಪರಿಶೀಲನೆ ಮಾಡಿದ್ದು, ಶಿರಸಿ ಎ ಸಿ ಎಫ್ ಅಮಿತ್, ಆರ್ ಎಫ್ ಓ ಉಷಾ ಕಬ್ಬೇರ, ಸಿಪಿಐ ಸೀತಾರಾಮ , ಪಿ ಎಸ್ ಐ ಶಾಂತಿನಾಥ, ನಾಗಪ್ಪ ಭೋವಿ, ಉಪತಹಶೀಲ್ದಾರ ಡಿ ಎಮ್ ನಾಯ್ಕ ಸರ್ವೆ ಇಲಾಖೆಯ ಗಣೇಶ ಅವರು ಪರಿಸ್ಥಿತಿ ಗಮನಿಸಿದ್ದಾರೆ. ಪೊಲೀಸರ ಸಲಹೆ ನಂತರ ಅಲ್ಲಿನ ವಾತಾವರಣ ತಿಳಿಯಾಗಿದ್ದು, ಅತಿಕ್ರಮಣ ಕ್ಷೇತ್ರದ ಬೇಲಿ ಗಿಡ ಮರ ಕಡಿಯದೇ ಸಾಗುವಳಿ ಕ್ಷೇತ್ರದ ಹೊರ ಪ್ರದೇಶದ ಕ್ಷೇತ್ರದಲ್ಲಿ ಅಗಳ ಹೊಡೆಯುವ ಮೂಲಕ ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆದಿದೆ.