ಅಪ್ಪಟ್ಟ ಬಿಜೆಪಿ ಕಾರ್ಯಕರ್ತ, ಬಿಜೆಪಿಗಾಗಿ ಹಗಲು-ರಾತ್ರಿ ಶ್ರಮಿಸಿದವ, ಗ್ರಾಮ ಪಂಚಾಯತ ಸದಸ್ಯರಾಗಿಯೂ ಬಿಜೆಪಿಗೆ ಸಾಕಷ್ಟು ಕೊಡುಗೆ ನೀಡಿದ ಕೃಷ್ಣಮೂರ್ತಿ ಹೆಗಡೆ ಅವರ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ ಅವರು 10 ಸಾವಿರ ರೂ ಸಹಾಯ ಮಾಡಿದ್ದಾರೆ. ಒಂದು ತಿಂಗಳ ಹಿಂದೆ ಇಲ್ಲಿ ಭೇಟಿ ನೀಡಿದ್ದ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಪಕ್ಷದ ಕಟ್ಟಾ ಅಭಿಮಾನಿ ಮನೆಯಲ್ಲಿ ನಡೆದ ಹಾನಿ ನೋಡಿಯೂ ಯಾವುದೇ ಆರ್ಥಿಕ ನೆರವು ನೀಡಿಲ್ಲ.
ಸಿದ್ದಾಪುರದ ಶೇಡಿದಂಡ್ಕಲಿನಲ್ಲಿ ವಿನಾಯಕ ಹೆಗಡೆ ಅವರು ವಾಸವಾಗಿದ್ದಾರೆ. ವಿನಾಯಕ ಹೆಗಡೆ ಅವರದ್ದು ಅವಿಭಕ್ತ ಕುಟುಂಬವಾಗಿದ್ದು, ಕುಟುಂಬದ ಸದಸ್ಯರೆಲ್ಲರೂ ಸೇರಿ ತೋಟ ನಿರ್ವಹಣೆ ಮಾಡಿಕೊಂಡಿದ್ದಾರೆ. ವಿನಾಯಕ ಹೆಗಡೆ ಅವರ ಚಿಕ್ಕಪ್ಪನ ಮಗ ಕೃಷ್ಣಮೂರ್ತಿ ಹೆಗಡೆ ಅವರು ಅಪ್ಪಟ್ಟ ಬಿಜೆಪಿ ಅಭಿಮಾನಿ. ದಶಕಗಳಿಂದ ಅವರು ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡಿಕೊಂಡಿದ್ದು, ಬೇರೆ ಬೇರೆ ಪಕ್ಷದವರು ಕೈಬೀಸಿ ಕರೆದರೂ ಅವರ ಕರೆಗೆ ಕೃಷ್ಣಮೂರ್ತಿ ಹೆಗಡೆ ಅವರು ತಲೆಕೆಡಿಸಿಕೊಂಡವರಲ್ಲ. ಪಕ್ಷ-ಸಿದ್ಧಾಂತ-ಸoಘಟನೆ ಎಂಬ ತತ್ವದ ಅಡಿಯಲ್ಲಿಯೇ ಕೃಷ್ಣಮೂರ್ತಿ ಹೆಗಡೆ ಅವರು ಜೀವನ ನಡೆಸುತ್ತಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಾನಸೂರು ಗ್ರಾಮ ಪಂಚಾಯತ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಹೀಗಿರುವಾಗ ಜೂನ್ 27ರಂದು ಕೃಷ್ಣಮೂರ್ತಿ ಹೆಗಡೆ ಅವರ ಮನೆ ಅಂಚಿನ ಗೋದಾಮಿಗೆ ಬೆಂಕಿ ಬಿದ್ದಿದೆ. 4 ಲಕ್ಷ ರೂ ಮೌಲ್ಯದ ಅಡಿಕೆ ಸುಟ್ಟು ಕರಕಲಾಗಿದೆ. ಈ ವಿಷಯ ಅರಿತ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಮರುದಿನವೇ ಅಲ್ಲಿ ಧಾವಿಸಿದ್ದಾರೆ. ಸುಟ್ಟ ಅಡಿಕೆಗಳನ್ನು ಕೈಯಲ್ಲಿ ಹಿಡಿದು ಪರಿಶೀಲಿಸಿದ್ದಾರೆ. ಅದಾದ ನಂತರ `ಈಗಾಗಲೇ ಎಲೆಚುಕ್ಕಿ ರೋಗದಿಂದ ಬಹುತೇಕ ಅಡಿಕೆ ತೊಟ ಹಾಳಾಗಿದೆ. ಕೊಳೆ ರೋಗದಿಂದ ಶೇ 60ರಷ್ಟು ಇಳುವರಿ ಕಡಿಮೆಯಾಗಿದೆ. ಬೆಳೆಗಾರರು ಕಷ್ಟದಲ್ಲಿದ್ದು, ಬೆಂಕಿ ಅವಘಡದಿಂದ 70ಚೀಲ ಅಡಿಕೆ ಸುಟ್ಟಿದ್ದರಿಂದ ಸರ್ಕಾರ ಪರಿಹಾರ ಕೊಡಬೇಕು’ ಎಂದು ಅವರು ಈ ವೇಳೆ ಭಾಷಣ ಮಾಡಿದ್ದಾರೆ.
ಸಾಮಾನ್ಯವಾಗಿ ಶಿರಸಿ-ಸಿದ್ದಾಪುರ ಭಾಗದಲ್ಲಿ ಎಲ್ಲಿ ಯಾವುದೇ ಅನಾಹುತನಡೆದರೂ ಅನಂತಮೂರ್ತಿ ಹೆಗಡೆ ಅವರು ಮೊದಲು ಅಲ್ಲಿ ಹಾಜರಾಗುತ್ತಾರೆ. ಆಗಾಗ ಅವರು ನೊಂದವರಿಗೆ ನೆರವು ನೀಡುತ್ತಾರೆ. ಕಷ್ಟದಲ್ಲಿದ್ದವರಿಗೆ ಸಾಂತ್ವಾನ ಹೇಳುತ್ತಾರೆ. ಹೀಗಾಗಿ, ಅಪ್ಪಟ್ಟ ಬಿಜೆಪಿ ಕಾರ್ಯಕರ್ತ ಕೃಷ್ಣಮೂರ್ತಿ ಹೆಗಡೆ ಅವರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾಗ ರೈತಮೋರ್ಚಾ ಅಧ್ಯಕ್ಷರು ಅವರ ಮನೆಗೆ ಬಂದು ಸಾಂತ್ವಾನ ಹೇಳಿದ್ದು, ಕುಟುಂಬದವರಿಗೆ ಸಮಾಧಾನ ತಂದಿದೆ. ಹೀಗಾಗಿ ಆ ಕುಟುಂಬದವರು ಕಷ್ಟದ ನಡುವೆಯೂ ಬಿಸಿ ಬಿಸಿ ಚಹಾ ಮಾಡಿಕೊಟ್ಟು ಆತಿಥ್ಯ ನೀಡಿದ್ದಾರೆ. ಆದರೆ, ಎಲ್ಲಾ ಕಡೆ ಸಹಾಯ ಮಾಡುವ ಅನಂತಮೂರ್ತಿ ಹೆಗಡೆ ಅವರು ಇಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತನ ಸಂಕಷ್ಟಕ್ಕೆ ಧ್ವನಿ ಆಗಿಲ್ಲ. ಆ ಬಗ್ಗೆ ಬೇಸರವಿದ್ದರೂ ಬಿಜೆಪಿ ಮೇಲಿನ ಅಭಿಮಾನದಿಂದಾಗಿ ಕುಟುಂಬದವರು ಅದನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಳ್ಳಲಿಲ್ಲ.
ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಅಗ್ನಿ ಅವಘಡ ನಡೆದ ಬಗ್ಗೆ ಶಾಸಕ ಭೀಮಣ್ಣ ನಾಯ್ಕ ಅವರಿಗೂ ಅದೇ ದಿನ ವಿಷಯ ಗೊತ್ತಾಗಿದೆ. ಆದರೆ, `ಅನಂತಮೂರ್ತಿ ಹೆಗಡೆ ಹೋದ ಪ್ರದೇಶಕ್ಕೆ ತಕ್ಷಣ ತಾವು ಹೋಗುವುದು ಸರಿಯಲ್ಲ’ ಎಂದು ಭಾವಿಸಿ ಭೀಮಣ್ಣ ನಾಯ್ಕ ಅವರು ಒಂದು ತಿಂಗಳ ಕಾಲ ಸುಮ್ಮನಿದ್ದಾರೆ. ತಿಂಗಳು ಕಳೆದರೂ ಸಂತ್ರಸ್ತ ಕುಟುಂಬಕ್ಕೆ ಯಾವುದೇ ಸಹಾಯ ಸಿಕ್ಕಿಲ್ಲ ಎಂಬುದನ್ನು ಅರಿತು ಈ ವೇಳೆ ಭೀಮಣ್ಣ ನಾಯ್ಕ ಅವರು ಭೇಟಿ ನೀಡಿದ್ದಾರೆ. ಆಗ, ಬಿಜೆಪಿ ಕಾರ್ಯಕರ್ತ ಕೃಷ್ಣಮೂರ್ತಿ ಹೆಗಡೆ ಅವರು ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ ಅವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಷ್ಟದ ಕಾಲದಲ್ಲಿ ಕೈ ಹಿಡಿಯುವಂತೆ ಮನವಿ ಮಾಡಿದ್ದಾರೆ. ಕುಟುಂಬದವರ ಕಷ್ಟಕ್ಕೆ ಕರಗಿದ ಭೀಮಣ್ಣ ನಾಯ್ಕ ಅವರು ತಕ್ಷಣ ತಮ್ಮ ಕಿಸೆಯಿಂದ 10 ಸಾವಿರ ರೂ ತೆಗೆದುಕೊಟ್ಟಿದ್ದಾರೆ. ಸರ್ಕಾರದಿಂದಲೂ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. `15 ವರ್ಷಗಳಿಂದ ಬಿಜೆಪಿಯಲ್ಲಿದ್ದರೂ ಕಷ್ಟದಲ್ಲಿರುವಾಗ 10ರೂಪಾಯಿ ಸಿಕ್ಕಿಲ್ಲ. ಎದುರಾಳಿ ಪಕ್ಷದಲ್ಲಿದ್ದರೂ ಕಾಂಗ್ರೆಸ್ ಶಾಸಕ ವೈಯಕ್ತಿಕವಾಗಿ 10 ಸಾವಿರ ರೂ ಕೊಟ್ಟರಲ್ಲ’ ಎಂದು ಅಲ್ಲಿದ್ದ ಜನ ಮಾತನಾಡಿದ್ದಾರೆ.