`ಅಂಕೋಲಾದ ಪುರಲಕ್ಕಿ-ಬೇಣದಲ್ಲಿನ ನಮ್ಮ ಕ್ಲಿನಿಕ್ ಒಳಗೆ ಆರೋಗ್ಯ ಸೇವೆಗಳು ಹದಗೆಡುತ್ತಿದ್ದು, ಅದಕ್ಕೆ ಅಲ್ಲಿನ ಸಿಬ್ಬಂದಿಯೊಬ್ಬರ ವರ್ತನೆ ಪ್ರಮುಖ ಕಾರಣ’ ಎಂದು ಜನ ದೂರಿದ್ದಾರೆ. `ಇಲ್ಲಿ ಕೆಲಸ ಮಾಡುವ ಶುಶ್ರೂಷಕಿ ರೇಖಾ ಬೂದಿಹಾಳ ಅವರನ್ನು ಬೇರೆಡೆ ವರ್ಗಾಯಿಸಬೇಕು’ ಎಂದು 30ಕ್ಕೂ ಅಧಿಕ ಜನ ಪತ್ರ ಬರೆದಿದ್ದಾರೆ.
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ ಶಾಸಕ ಸತೀಶ್ ಸೈಲ್ ಅವರಿಗೆ ಪುರಮಕ್ಕಿ-ಬೇಣದ ಜನ ಪತ್ರ ರವಾನಿಸಿದ್ದು, ಅದರಲ್ಲಿ ಅನೇಕ ಬಗೆಯ ಆರೋಪಗಳನ್ನು ಮಾಡಿದ್ದಾರೆ. ನಮ್ಮ ಕ್ಲಿನಿಕ್ ಕೇಂದ್ರದಲ್ಲಿ ಶುಶ್ರೂಷಕಿಯಾಗಿರುವ ರೇಖಾ ಬೂದಿಹಾಳ ಅವರ ವರ್ತನೆ ವಿರುದ್ಧ ಅಸಮಧಾನವ್ಯಕ್ತಪಡಿಸಿದ್ದಾರೆ. `ಇಲ್ಲಿ ನಾಲ್ಕು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ರೇಖಾ ಬೂದಿಹಾಳ ಅವರು ನಿತ್ಯ ತಕರಾರು ಮಾಡುತ್ತಿದ್ದು, ಅವರನ್ನು ಕೂಡಲೇ ಇಲ್ಲಿಂದ ವರ್ಗಾಯಿಸಿ’ ಎಂದು ಆಗ್ರಹಿಸಿದ್ದಾರೆ.
`ರೇಖಾ ಬೂದಿಹಾಳ ಅವರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಸಿಡುಕು ಸ್ವಭಾವದ ಅವರು ಜನರಿಗೆ ನಿತ್ಯ ಬೈಯುತ್ತಾರೆ. ಈ ಹಿಂದೆ ಇದ್ದ ವೈದ್ಯರಿಗೂ ಸಮಸ್ಯೆ ಮಾಡಿ, ಅವರನ್ನು ಓಡಿಸಿದ್ದಾರೆ. ವೈದ್ಯರು ಬರೆದ ಔಷಧಿ ಬದಲು ಬೇರೆ ಔಷಧಿ ನೀಡುವ ಬಗ್ಗೆಯೂ ದೂರುಗಳಿವೆ. ಈ ಎಲ್ಲಾ ವಿಷಯದ ಬಗ್ಗೆ ಎರಡು ವರ್ಷದ ಹಿಂದೆ ಮೇಲಧಿಕಾರಿಗಳು ಸಭೆ ಕರೆದು ಬುದ್ದಿ ಹೇಳಿದರೂ ಅವರ ನಡವಳಿಕೆ ಬದಲಾಗಿಲ್ಲ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
`ಈಚೆಗೆ ರೇಖಾ ಬೂದಿಹಾಳ ಅವರು ಆಸ್ಪತ್ರೆಯ ಪ್ರಯೋಗಶಾಲಾ ತಂತ್ರಜ್ಞರಿಗೆ ಕೆಟ್ಟದಾಗಿ ಬೈದಿದ್ದು, ಅವರಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಅದರಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಎಲ್ಲಾ ವಿಷಯದ ಬಗ್ಗೆ ಅಲ್ಲಿನ ನಿವಾಸಿಗಳು ಅನೇಕ ಬಾರಿ ದೂರು ನೀಡಿದರೂ ಕ್ರಮ ಆಗಿಲ್ಲ. ಈ ಎಲ್ಲಾ ಹಿನ್ನಲೆ ಅವರನ್ನು ಇಲ್ಲಿಂದ ಬೇರೆ ಕಡೆ ವರ್ಗಾಯಿಸಬೇಕು. ಜೊತೆಗೆ ಜನಸ್ನೇಹಿ ಸಿಬ್ಬಂದಿ ನೇಮಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಈ ಪತ್ರವನ್ನು ಆರೋಗ್ಯ ಇಲಾಖೆ, ಜಿಲ್ಲಾಡಳಿತ ಸೇರಿ ವಿವಿಧ ಕಡೆ ರವಾನಿಸಿದ್ದಾರೆ.