ಅರ್ಬನ್ ಬ್ಯಾಂಕಿನಲ್ಲಿ ಚಿನ್ನ ಅಡವಿಟ್ಟು 1.50 ಲಕ್ಷ ರೂ ಸಾಲ ಮಾಡಿ ಮನೆಗೆ ಮರಳುತ್ತಿದ್ದ ಶಂಕರ್ ನಾಯ್ಕ ಅವರನ್ನು ಅಪರಿಚಿತರೊಬ್ಬರು ಮಾತನಾಡಿಸಿದ್ದು, ಅವರ ಸ್ನೇಹ ಬೆಳಸಿದ ಪರಿಣಾಮ ಶಂಕರ ನಾಯ್ಕ ಅವರು ಹಣ ಕಳೆದುಕೊಂಡಿದ್ದಾರೆ. ಸಹಾಯ ಮಾಡುವುದಾಗಿ ನಂಬಿಸಿದ ಆ ಅಪರಿಚಿತ ಶಂಕರ ನಾಯ್ಕ ಅವರನ್ನು ತಮ್ಮ ಬೈಕಿನಲ್ಲಿ ಕರೆದುಕೊಂಡು ಹೋಗಿದ್ದು, ಹಣ ಕಸಿದು ಪರಾರಿಯಾಗಿದ್ದಾರೆ.
ಹೊನ್ನಾವರದ ವಂದೂರು ಬಳಿಯ ದುಗ್ಗೂರಿನಲ್ಲಿ ಶಂಕರ ವಿಠೋಬ ನಾಯ್ಕ ಅವರು ವಾಸವಾಗಿದ್ದಾರೆ. 58 ವರ್ಷದ ಅವರು ಅಗಸ್ಟ 7ರ ಬೆಳಗ್ಗೆ ಮನೆಯಿಂದ ಹೊರಟಿದ್ದಾರೆ. ಹೊನ್ನಾವರ ಅರ್ಬನ್ ಬ್ಯಾಂಕಿಗೆ ಬಂದ ಅವರು ತಮ್ಮ ಬಳಿಯಿದ್ದ ಬಂಗಾರದ ಸರ ಅಡವಿಟ್ಟು 1.50 ಲಕ್ಷ ರೂ ಸಾಲ ಮಾಡಿದ್ದಾರೆ. ಅದರಲ್ಲಿ ಆ ದಿನದ ಖರ್ಚಿಗಾಗಿ 3500ರೂ ಮೇಲಿನ ಕಿಸೆಯಲ್ಲಿರಿಸಿಕೊಂಡು ಪೇಟೆ ಕಡೆ ಹೊರಟಿದ್ದಾರೆ.
ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಶಂಕರ ನಾಯ್ಕ ಅವರನ್ನು ಮಾತನಾಡಿಸಿದ್ದಾರೆ. ಬಸ್ ನಿಲ್ದಾಣದ ಕಡೆಯಿಂದ ಬಂದ ಆ ಅಪರಿಚಿತ ನಡೆದು ಹೋಗುತ್ತಿದ್ದ ಶಂಕರ್ ನಾಯ್ಕ ಅವರಿಗೆ `ಬಾ ಅಣ್ಣ ಡ್ರಾಪ್ ಕೊಡುವೆ’ ಎಂದು ಕರೆದಿದ್ದಾರೆ. `ನಿನ್ನ ಪರಿಚಯ ಇಲ್ಲ. ನಾ ಬರಲ್ಲ’ ಎಂದು ಶಂಕರ ನಾಯ್ಕ ಅವರು ಹೇಳಿದ್ದಾರೆ. `ನನಗೆ ನಿಮ್ಮ ಪರಿಚಯ ಇದೆ, ಬನ್ನಿ’ ಎಂದು ಕರೆದಿದ್ದಾರೆ. ಅವರ ಆಮಂತ್ರಣದ ಮೇರೆಗೆ ಶಂಕರ ನಾಯ್ಕ ಅವರು ಆ ಬೈಕ್ ಏರಿದ್ದು, ಕೆಲ ದೂರ ಕ್ರಮಿಸಿದ ನಂತರ `ನನಗೆ ಹಣ ಕೊಡಬೇಕು’ ಎಂದು ಆ ಅಪರಿಚಿತ ತಾಕೀತು ಮಾಡಿದ್ದಾರೆ.
`ಹಣ ಕೊಡುವುದಿಲ್ಲ’ ಎಂದು ಶಂಕರ್ ನಾಯ್ಕ ಅವರು ಹೇಳಿದಾಗ `ಬೈಕಿನಿಂದ ಬೀಳಿಸಿ ಸಾಯಿಸಿಬಿಡುವೆ’ ಎಂದು ಆ ಅಪರಿಚಿತ ಹೇಳಿದ್ದಾರೆ. ಭಯಗೊಂಡ ಶಂಕರ ನಾಯ್ಕ ಅವರು ಬೈಕ್ ನಿಲ್ಲಿಸುವಂತೆ ಸೂಚಿಸಿದಾಗ ಬೈಕ್ ನಿಲ್ಲಿಸಿದ ಅಪರಿಚಿತ, ಕಿಸೆಯಲ್ಲಿದ್ದ 3500ರೂ ಕಿತ್ತು ಪರಾರಿಯಾಗಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಶಂಕರ ನಾಯ್ಕ ಅವರು ಪೊಲೀಸರಿಗೆ ದೂರಿ, ಪ್ರಕರಣ ದಾಖಲಿಸಿದ್ದಾರೆ.