`ತಂಬಾಕು ಸೇವಿಸುವ ವಿದ್ಯಾರ್ಥಿಗಳನ್ನು ಕಂಡು ಬಂದಲ್ಲಿ ಅವರು ದುಶ್ಚಟದಿಂದ ಹೊರಬರುವ ಹಾಗೇ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆರೋಗ್ಯ, ಶಿಕ್ಷಣ, ಸ್ಥಳೀಯ ಸಂಸ್ಥೆ ಹಾಗೂ ಪೊಲೀಸರು ಜಂಟಿಯಾಗಿ ಶಾಲೆ ಹಾಗೂ ಕಾಲೇಜು ಸಮೀಪ ತಂಬಾಕು ಉತ್ಪನ್ನಗಳ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಅವರು ನಿರ್ದೇಶನ ನೀಡಿದ್ದಾರೆ.
ಸರ್ಕಾರಿ ಕಚೇರಿಯಲ್ಲಿಯೂ ತಂಬಾಕು ಸೇವನೆ ವಿಷಯವಾಗಿ ಮಾತನಾಡಿದ ಅವರು `ಕಚೇರಿಯ ಮುಖ್ಯಸ್ಥರು ತಂಬಾಕು ನಿಯಂತ್ರಿಸುವ ಬಗ್ಗೆ ಕ್ರಮ ಜರುಗಿಸಬೇಕು’ ಎಂದು ಸೂಚಿಸಿದ್ದಾರೆ. `ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ತಂಬಾಕು ಪದಾರ್ಥಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು. ನಿರಂತರವಾಗಿ ಪರಿಶೀಲನೆ ನಡೆಸುವ ಮೂಲಕ ವಿದ್ಯಾರ್ಥಿಗಳು ಈ ದುಶ್ಟಟಕ್ಕೆ ಬಲಿಯಾಗದಂತೆ ಎಚ್ಚರವಹಿಸಬೇಕು. ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮಗಳ ಕುರಿತಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅರಿವು ಮೂಡಿಸಬೇಕು’ ಎಂದವರು ಸೂಚಿಸಿದರು.
`ಪ್ರಸಕ್ತ ಸಾಲಿನ ಅಕ್ಟೋಬರ್ ಜಿಲ್ಲೆಯಲ್ಲಿ ಕೋಟ್ಪಾ ಅಡಿಯಲ್ಲಿ 675 ಪ್ರಕರಣ ದಾಖಲಿಸಿ ರೂ 88,900 ದಂಡ ಸಂಗ್ರಹಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. `ಎಲ್ಲಾ ತಾಲೂಕುಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡ್ಡಾಯವಾಗಿ ಪ್ರತ್ಯೇಕ ವ್ಯಾಪಾರ ಪರವಾನಗೆಪಡೆಯುವುದು ಅಗತ್ಯ. ಷರತ್ತುಗಳನ್ನು ಪಾಲಿಸಿರುವ ಕುರಿತು ಕಟ್ಟುನಿಟ್ಟಿನ ಪರಿಶೀಲನೆ ನಡೆಸಿ, ಉಲ್ಲಂಘನೆ ಕಂಡು ಬಂದಲ್ಲಿ ಪರವಾನಿಗೆ ರದ್ದುಪಡಿಸಬೇಕು’ ಎಂದು ಡೀಸಿ ಸೂಚಿಸಿದರು.