ಶಿರಸಿಯಲ್ಲಿ ಮಾದಕ ವ್ಯಸನ ಸೇವಿಸುವವರ ಸಂಖ್ಯೆ ಹೆಚ್ಚಾಗಿದ್ದು, ನಶೆಯ ಗುಂಗಿನಲ್ಲಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಜೊತೆಗೆ ಗಾಂಜಾ ಗುಂಗಿನಲ್ಲಿದ್ದ ಆಟೋ ಚಾಲಕ-ಕೂಲಿ ಕಾರ್ಮಿಕನ ವಿರುದ್ಧವೂ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ನವೆಂಬರ್ 18ರಂದು ಕಸ್ತೂರಿಬಾ ನಗರದ ಲಿಡಕರ್ ಕಾಂಪ್ಲೆಕ್ಸ ಬಳಿಯ ಪ್ರಜ್ವಲ್ ಗಣಪತಿ ಅಂಬೇಕರ್ (20) ಅವರು ಕುಳವೆ ಕ್ರಾಸಿನ ಬಳಿ ಅಮಲಿನಲ್ಲಿದ್ದರು. ನಶೆಯ ಗುಂಗಿನಲ್ಲಿ ಅಲೆದಾಡುತ್ತಿದ್ದ ಅವರನ್ನು ಪೊಲೀಸರು ಪ್ರಶ್ನಿಸಿದರು. ಪ್ರಜ್ವಲ್ ಅಂಬೇಕರ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಗಾಂಜಾ ಸೇವಿಸಿದ್ದು ಗೊತ್ತಾಯಿತು.
ನೆಹರೂನಗರದ ರೇಹಮಾನಿಯಾ ಮಸೀದಿ ಬಳಿಯ ಸುಲ್ತಾನ್ ಹಜರತ್ ಹೈದರಲಿ ಭಾಷಾ (21) ಹಾಗೂ ಹೆಗಡೆಕಟ್ಟಾ ಹಕ್ಕಿಗದ್ದೆಯ ಗಣಪತಿ ಶೇಷಾ ಮರಾಠಿ (20) ಅವರು ಬನವಾಸಿ ರಸ್ತೆಯ ಇಂಡಸ್ಟಿಯಲ್ ಏರಿಯಾ ಬಳಿ ಅಲೆದಾಡುತ್ತಿದ್ದರು. ಅವರ ವರ್ತನೆ ಗಮನಿಸಿದ ಶಿರಸಿ ಗ್ರಾಮೀಣ ಠಾಣಾ ಉಪನಿರೀಕ್ಷಕ ಸಂತೋಷಕುಮಾರ ಎಂ ಅವರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದರು. ಅವರ ವೈದ್ಯಕೀಯ ವರದಿ ಸಹ ಪಾಸಿಟಿವ್ ಬಂದಿದ್ದು, ಮಾದಕ ವ್ಯಸನ ಸೇವನೆ ದೃಢವಾಯಿತು.
ಶಿರಸಿ ವಿದ್ಯಾನಗರ 2ನೇ ಕ್ರಾಸಿನ ಆಟೋ ಚಾಲಕ ರಾಘವೇಂದ್ರ ವೆಂಕಟೇಶ ಅಂಬಿಗ (41) ಅವರು ಎಸೆಳೆ ಕರೆ ಹತ್ತಿರ ಅಮಲಿನಲ್ಲಿ ಅಲೆದಾಡುತ್ತಿದ್ದರು. ಶಿರಸಿ ಗ್ರಾಮೀಣ ಠಾಣೆಯ ಉಪನಿರೀಕ್ಷಕ ಅಶೋಕ ರಾಥೋಡ್ ಅವರು ಆಟೋ ಚಾಲಕರನ್ನು ಮಾತನಾಡಿಸಿದರು. ಆದರೆ, ರಾಘವೇಂದ್ರ ಅಂಬಿಗ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅವರನ್ನು ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಅವರು ಸಹ ಗಾಂಜಾ ಸೇವನೆ ಮಾಡಿರುವುದು ಗೊತ್ತಾಯಿತು. ಶಿರಸಿ ಚಲವಾದಿ ಗಲ್ಲಿಯ ಕೂಲಿ ಕಾರ್ಮಿಕ ನಿತ್ಯಾನಂದ ಕೆರಿಯಾ ಚಲವಾದಿ (32) ಅವರು ಬನವಾಸಿ ರಸ್ತೆಯ ಕೆರೆಕೈ ಕ್ರಾಸಿನ ಬಳಿ ಗಾಂಜಾ ಸೇವಿಸಿದ್ದರು. ಪೊಲೀಸರು ಅದನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿದರು.
ಗಾಂಜಾ ಸೇವನೆಯ ದುಷ್ಪರಿಣಾಮದ ಬಗ್ಗೆ ಪೊಲೀಸರು ಆ ಎಲ್ಲರಿಗೂ ಅರಿವು ಮೂಡಿಸಿದರು. ಮತ್ತೆ ಗಾಂಜಾ ಸೇವನೆ ಮಾಡದಂತೆ ಬುದ್ಧಿಮಾತು ಹೇಳಿದರು. ಕಾಲೇಜು ವಿದ್ಯಾರ್ಥಿಗಳಿಗೆ `ಜೀವನ ಹಾಳು ಮಾಡಿಕೊಳ್ಳಬೇಡಿ’ ಎಂದು ಸೂಚಿಸಿದರು. ಅದಾದ ನಂತರ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ವರದಿ ಒಪ್ಪಿಸಿದರು.