ಕೆಲಸ ಇಲ್ಲದ ವೇಳೆ ಕಂಡಕoಡವರಲ್ಲಿ ಕಾಸು ಬೇಡುವ ಕಾರವಾರದ ಪ್ರಮೋದ ಲಮಾಣಿ ಅವರಿಗೆ ಅಪರಿಚಿತರೊಬ್ಬರು ಕೋಲಿನಿಂದ ಬಾರಿಸಿದ್ದಾರೆ.
ಕಾರವಾರದ ಹರಿದೇವನಗರದ ಪ್ರಮೋದ ಮಹಾದೇವ ಲಮಾಣಿ (35) ಸದ್ಯ ಸರ್ವೋದಯನಗರದಲ್ಲಿ ವಾಸವಾಗಿದ್ದಾರೆ. ಅವರು ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಕೆಲಸ ಇಲ್ಲದ ಅವಧಿಯಲ್ಲಿ ಅವರು ಸಿಕ್ಕ ಸಿಕ್ಕವರಲ್ಲಿ ಕಾಸು ಕೇಳುತ್ತಾರೆ. ಗುರುತು-ಪರಿಚಯ ಇಲ್ಲದವರ ಬಳಿ ತೆರಳಿಯೂ ಅವರು `2 ಸಾವಿರ ರೂ ಕೊಡಿ’ ಎಂದು ಬೇಡುತ್ತಾರೆ.
ನವೆಂಬರ್ 28ರ ರಾತ್ರಿ 11 ಗಂಟೆ ಸುಮಾರಿಗೆ ಪ್ರಮೋದ ಲಮಾಣಿ ಅವರು ಸರ್ವೋದಯನಗರದ ಗಣಪತಿ ದೇವಾಲಯದ ಬಳಿ ಹೋಗಿದ್ದರು. ಅಲ್ಲಿನ ಕಟ್ಟೆ ಮೇಲೆ ಅಪರಿಚಿತರೊಬ್ಬರು ಕೂತಿದ್ದರು. ಪ್ರಮೋದ ಲಮಾಣಿ ಅವರನ್ನು ಮಾತನಾಡಿಸಿದರು. ಕೊನೆಗೆ ತಮ್ಮ ಎಂದಿನ ಚಾಳಿಯಂತೆ `2 ಸಾವಿರ ರೂ ಸಹಾಯ ಮಾಡಿ’ ಎಂದು ಕೈ ವೊಡ್ಡಿದರು.
ಇದರಿಂದ ಆ ಅಪರಿಚಿತನ ಸಿಟ್ಟು ನೆತ್ತಿಗೇರಿತು. ಪ್ರಮೋದ ಲಮಾಣಿ ಅವರನ್ನು ಉದ್ದೇಶಿಸಿ ಅವರು ಬೈಗುಳ ಶುರು ಮಾಡಿದರು. ಪ್ರಮೋದ ಲಮಾಣಿ ಅವರು ತಾವು ಯಾರಿಗೂ ಕಡಿಮೆ ಇಲ್ಲ ಎಂದು ಜಗಳಕ್ಕೆ ನಿಂತರು. ಈ ವೇಳೆ ಆ ಅಪರಿಚಿತರು ಅಲ್ಲಿಯೇ ಇದ್ದ ಕಟ್ಟಿಗೆಯಿಂದ ಪ್ರಮೋದ ಲಮಾಣಿ ಅವರಿಗೆ ಬಾರಿಸಿದರು. ಇದರಿಂದ ಪ್ರಮೋದ ಲಮಾಣಿ ಅವರ ಕೈಗೆ ನೋವಾಗಿದ್ದು, ಅವರು ಆಸ್ಪತ್ರೆ ಸೇರಿದರು.
ಆಸ್ಪತ್ರೆಗೆ ಬಂದ ಪೊಲೀಸರಿಗೆ ಪ್ರಮೋದ ಲಮಾಣಿ ಆದ ವಿಷಯ ವಿವರಿಸಿದರು. ಆ ಅಪರಿಚಿತನಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಸರ್ವೋದಯ ನಗರದಲ್ಲಿಯೇ ಅಡ್ಡಾಡುವ ಅಪರಿಚಿತನ ವಿರುದ್ಧ ದೂರು ನೀಡಿ, ಪ್ರಕರಣ ದಾಖಲಿಸಿದರು.