ಕೀರ್ತಿ ಲಾಡ್ಜಿಗೆ ಭೇಟಿ ಕೊಟ್ಟ ಸಿಪಿಐ ಜಗದೀಶ ಹಂಚನಾಳ ಅವರು ರೂಂ ನಂ 206ರ ಬಾಗಿಲು ಬಡಿದಿದ್ದಾರೆ. ಆ ವೇಳೆ ಅಲ್ಲಿ ಕಾನೂನುಬಾಹಿರ ಕ್ರೀಡೆಯಲ್ಲಿ ಮಗ್ನರಾಗಿದ್ದ 11 ಜನ ಸಿಕ್ಕಿಬಿದ್ದಿದ್ದಾರೆ.
Advertisement. Scroll to continue reading.
ಭಟ್ಕಳದ ಮುರುಡೇಶ್ವರದ ಉತ್ತರಕೊಪ್ಪ ರಸ್ತೆ ಬಳಿಯಿರುವ ಕೀರ್ತಿ ಲಾಡ್ಜಿನಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಹಿನ್ನಲೆ ಡಿಸೆಂಬರ್ 18ರಂದು ಪೊಲೀಸರು ಲಾಡ್ಜಿನ ಮೇಲೆ ದಾಳಿ ಮಾಡಿದ್ದಾರೆ. ಆಗ, ಮುರುಡೇಶ್ವರದ ಗುಮ್ಮನಹಕ್ಲು ಬಳಿಯ ಟೇಲರಿಂಗ್ ಕೆಲಸ ಮಾಡುವ ಸುಬ್ರಹ್ಮಣ್ಯ ಜಟ್ಟಾ ನಾಯ್ಕ, ತೆರ್ನಮಕ್ಕಿಯ ಹಮಾಲಿ ನಾರಾಯಣ ಮಂಜಪ್ಪ ನಾಯ್ಕ, ಕಾಯ್ಕಿಣಿ ಬಿದ್ರೆಮನೆಯ ಶಿಲ್ಪಿ ಕೃಷ್ಣ ಮಂಜುನಾಥ ನಾಯ್ಕ, ಅದೇ ಊರಿನ ಮತ್ತೊಬ್ಬ ಶಿಲ್ಪಿ ರಮೇಶ ನಾಗಪ್ಪ ನಾಯ್ಕ ಅವರು ಎದುರಾಗಿದ್ದಾರೆ.
ಅವರ ಜೊತೆ ಬಿದ್ರೆಮನೆಯ ಹೊಟೇಲ್ ಕಾರ್ಮಿಕ ಗೋಪಾಲ ನಾರಾಯಣ ನಾಯ್ಕ, ತೆರ್ನಮಕ್ಕಿ ಸಭಾತಿಯ ಫೋಟೋಗ್ರಾಫರ್ ಮಹೇಶ ಗಣಪತಿ ನಾಯ್ಕ, ಭಟ್ಕಳ ಹರಾಡಿಯ ಶಿಲ್ಪಿ ಶ್ರೀನಿವಾಸ ಮಂಜುನಾಥ ನಾಯ್ಕ, ತೆರ್ನಮಕ್ಕಿ ಸಭಾತಿಯ ಕೂಲಿ ಕಾರ್ಮಿಕ ನಾಗರಾಜ ಮಂಜುನಾಥ ನಾಯ್ಕ, ಅದೇ ಊರಿನ ಶಿಲ್ಪಿ ಭಾಸ್ಕರ್ ಮಂಜುನಾಥ ನಾಯ್ಕ, ಮುರುಡೇಶ್ವರ ತೆರ್ನಮಕ್ಕಿಯ ಚಾಲಕ ರಾಜೇಶ ಮಾದೇವ ನಾಯ್ಕ ಅವರು ಇಸ್ಪೀಟ್ ಆಟದಲ್ಲಿ ಮಗ್ನರಾಗಿದನ್ನು ಪೊಲೀಸರು ಗಮನಿಸಿದ್ದಾರೆ.
ಮುರುಡೇಶ್ವರ ಪಿಎಸ್ಐ ಹಣಮಂತ ಬೀರಾದರ್, ಮಂಕಿ ಪಿಎಸ್ಐ ಭರತಕುಮಾರ ಸೇರಿ ಈ ಕಾರ್ಯಾಚರಣೆ ನಡೆಸಿದ್ದು, ಅಲ್ಲಿ ಸಿಕ್ಕ 7750ರೂ ಹಣವನ್ನು ವಶಕ್ಕೆಪಡೆದಿದ್ದಾರೆ. ಜೊತೆಗೆ ಆರೋಪಿತರ ಬಳಿಯಿದ್ದ 11 ಮೊಬೈಲುಗಳನ್ನು ಜಪ್ತು ಮಾಡಿದ್ದಾರೆ. ಅದಾದ ನಂತರ ಈ 11 ಜನರ ಜೊತೆ ಕೀರ್ತಿ ಲಾಡ್ಜಿನ ಮ್ಯಾನೇಜರ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.