ರೈತ ದಿನಾಚರಣೆಯ ಅವಧಿಯಲ್ಲಿಯೇ ರೈತರ ತೋಟಕ್ಕೆ ದಾಳಿ ಮಾಡಿದ ಅಧಿಕಾರಿಗಳು ಅಡಿಕೆ ಮರಗಳನ್ನು ನಾಶ ಮಾಡಿದ್ದಾರೆ. ಅನಗತ್ಯವಾಗಿ ಅಡಿಕೆ ಮರಗಳನ್ನು ಕಡಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ.
Advertisement. Scroll to continue reading.
ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷರಾಗಿರುವ ಅನಂತಮೂರ್ತಿ ಹೆಗಡೆ ಅವರು ಸಿದ್ದಾಪುರಕ್ಕೆ ದೌಡಾಯಿಸಿದ್ದು, ಅಲ್ಲಿನ ರೈತರ ಸಮಸ್ಯೆ ಆಲಿಸಿದ್ದಾರೆ. ಬಿಳಗಿ ಬಳಿಯ ಕ್ಯಾದಗಿ ಅರಣ್ಯ ವಲಯದ ಸಿಬ್ಬಂದಿ ಗೋಳಿಕೈ ಗ್ರಾಮದ ಗಣೇಶ ಹೆಗಡೆ ಅವರ ತೋಟಕ್ಕೆ ನುಗ್ಗಿ ಅಡಿಕೆ ಮರ ಹಾಳು ಮಾಡಿದನ್ನು ಅನಂತಮೂರ್ತಿ ಹೆಗಡೆ ಅವರು ಖಂಡಿಸಿದರು. `ಅರಣ್ಯ ಉಳಿಸುವವರೇ ಈ ರೀತಿಯ ದೌರ್ಜನ್ಯ ನಡೆಸಿದರೆ ರೈತರು ಎಲ್ಲಿಗೆ ಹೋಗಬೇಕು? ಅರಣ್ಯ ಇಲಾಖೆಯವರಿಗೆ ಮರಗಳನ್ನು ಕಡಿಯುವ ಅಧಿಕಾರವನ್ನು ನೀಡಿದವರಾರೂ ಯಾರು?’ ಎಂದು ಅನಂತಮೂರ್ತಿ ಹೆಗಡೆ ಅವರು ಪ್ರಶ್ನಿಸಿದರು. `ರೈತರನ್ನು ಒಕ್ಕಲೆಬ್ಬಿಸಿದರೆ ಉಗ್ರ ಹೋರಾಟ ಖಚಿತ’ ಎಂದು ಎಚ್ಚರಿಸಿದರು.
ಸಿದ್ದಾಪುರ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ ಕೆ ತಿಮ್ಮಪ್ಪ ಅವರು ಅರಣ್ಯಾಧಿಕಾರಿ ವರ್ತನೆ ವಿರುದ್ಧ ಅಸಮಧಾನ ಹೊರಹಾಕಿದರು. `ರೈತರು ನೆಮ್ಮದಿಯ ಜೀವನ ನಡೆಸದಂತೆ ಅರಣ್ಯ ಇಲಾಖೆಯವರು ಕಾಯುತ್ತಿದ್ದಾರೆ. ಬೇರೆ ದೇಶಗಳಿಂದ ವಲಸೆ ಬಂದವರಿಗೆ , ನಿರಾಶ್ರಿತರಿಗೆ ಸರ್ಕಾರ ಸಾವಿರಾರು ಎಕರೆ ಭೂಮಿ ಕೊಡುತ್ತಿದೆ. ಆದರೆ, ಇಲ್ಲಿನ ನಿವಾಸಿಗಳ ಮುಲಭೂತ ಹಕ್ಕನ್ನು ಕಸಿಯುತ್ತಿದೆ’ ಎಂದವರು ಕಿಡಿಕಾರಿದರು.
`ಕ್ಯಾದಗಿ ವಲಯ ಅರಣ್ಯಾಧಿಕಾರಿಗಳಿಗೆ ಫೋನ್ ಮಾಡಿದಾಗ `ನ್ಯಾಯಾಲಯದ ಆದೇಶದ ಪ್ರಕಾರ ಕೆಲಸ ಮಾಡಿದ್ದೇವೆ’ ಎಂದಿದ್ದಾರೆ. ಬಿಜೆಪಿ ಪ್ರಮುಖರಾದ ರಾಘವೇಂದ್ರ ಶಾಸ್ತ್ರಿ, ತೋಟಪ್ಪ ನಾಯ್ಕ, ಪ್ರಮುಖರಾದ ಕೃಷ್ಣಮೂರ್ತಿ ನಾಯ್ಕ ಐಸೂರು, ಆದರ್ಶ ಪೈ, ಅಣ್ಣಪ್ಪ ನಾಯ್ಕ ಕಡಕೇರಿ, ವಿಜಯ ಹೆಗಡೆ, ರೈತಸಂಘದ ಜಿಲ್ಲಾಧ್ಯಕ್ಷ ಕೆರಿಯಪ್ಪ ನಾಯ್ಕ ಇತರರು ಈ ಕೃತ್ಯವನ್ನು ಖಂಡಿಸಿದ್ದಾರೆ.