ಶಿರಸಿ-ಕುಮಟಾ ರಸ್ತೆಯಲ್ಲಿ ರಾತ್ರಿ ವೇಳೆ ರಾಜಾರೋಷವಾಗಿ ಮರಳು ಲಾರಿಗಳ ಓಡಾಟ ನಡೆದಿದೆ. ಆದರೆ, ಜನ ಸಾಮಾನ್ಯರಿಗೆ ಅನುಕೂಲವಾಗಬೇಕಾದ ಸ್ಥಳೀಯ ಬಸ್ಸುಗಳ ಓಡಾಟಕ್ಕೆ ಮಾತ್ರ ಅವಕಾಶ ಸಿಗುತ್ತಿಲ್ಲ!
ಹೊನ್ನಾವರದಿಂದ ಶಿರಸಿಗೆ ಮರಳು ಸಾಗಾಟ ನಡೆಯುತ್ತಿದೆ. ಭಾರೀ ವಾಹನಗಳ ಓಡಾಟಕ್ಕೆ ನಿಷೇಧವಿರುವ ಶಿರಸಿ-ಕುಮಟಾ ಮಾರ್ಗವಾಗಿಯೇ ಮರಳು ಲಾರಿಗಳು ಚಲಿಸುತ್ತಿವೆ. ರಾತ್ರಿ ವೇಳೆ ಇಲ್ಲಿ ಆ ಪ್ರಮಾಣದಲ್ಲಿ ಲಾರಿ ಸಂಚಾರ ನಡೆದರೂ ಅದನ್ನು ಕೇಳುವವರಿಲ್ಲ. ಆದರೆ, ಸಾರ್ವಜನಿಕರಿಗೆ ಅನುಕೂಲಕರವಾಗಿರುವ ಸರ್ಕಾರಿ ಬಸ್ಸುಗಳ ಓಡಾಟಕ್ಕೆ ಮಾತ್ರ ಇಲ್ಲಿ ಅವಕಾಶವೇ ಸಿಗುತ್ತಿಲ್ಲ.
ಶಿರಸಿ: ಕುಮಟಾ- ಶಿರಸಿ ಹೆದ್ದಾರಿ ನಿರ್ಮಾಣ ಶೇ 85 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದರೂ ಜಿಲ್ಲಾಡಳಿತ ಅಧಿಕೃತವಾಗಿ ವಾಹನ ಸಂಚಾರ ಮುಕ್ತಗೊಳಿಲ್ಲ. ಶಿರಸಿ ಜಾತ್ರೆ ಸಮೀಪಿಸಿದ್ದರಿಂದ ಓಡಾಟಕ್ಕೆ ಅವಕಾಶ ನೀಡಬೇಕು ಎಂದು ಸರ್ಕಾರದ ನಡುವೆ ಪತ್ರ ವಹಿವಾಟು ಶುರುವಾಗಿದ್ದು, ಜನವರಿ 1ರಿಂದ ಬಸ್ ಓಡಾಟ ನಡೆಸುವುದಾಗಿ ಸಂಸದರು ಸಹ ಹೇಳಿದ್ದಾರೆ. ಆದರೆ, ಅದು ಪಕ್ಕಾ ಆಗಿಲ್ಲ.
ಸಾಗರಮಾಲಾ ಯೋಜನೆಯ ಕುಂಟುತ್ತ ಸಾಗಿರುವ ಶಿರಸಿ-ಕುಮಟಾ ರಸ್ತೆ ಕಾಮಗಾರಿ ಅಂತೂ ಇಂತೂ ಕೊನೆಯ ಹಂತ ತಲುಪಿದೆ. ಭೂಸ್ವಾಧೀನವಾಗದ ಪ್ರದೇಶಗಳನ್ನುಳಿದು ಇನ್ನುಳಿದ ರಸ್ತೆ ಬಹುತೇಕ ಪೂರ್ಣವಾಗಿದೆ. ಹಾರೂಗಾರ ಸಮೀಪದ ಸೇತುವೆ ಹೊರತುಪಡಿಸಿ ಉಳಿದ ಸೇತುವೆಗಳ ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ದೇವಿಮನೆ ಘಟ್ಟದಲ್ಲಿ ಒಂದೂವರೆ ಕಿಲೋಮೀಟರ್ ಕಾಂಕ್ರೀಟ್ ಹಾಕುವುದು ಬಾಕಿ ಇದೆ. ಇವು ಯಾವುದೂ ರಸ್ತೆ ಬಂದ್ ಮಾಡಿಕೊಂಡು ಮಾಡುವ ಕೆಲಸವಲ್ಲ. ಆದಾಗಿಯೂ ಜಿಲ್ಲಾಡಳಿತ ರಸ್ತೆ ಸಂಚಾರವನ್ನು ಮುಕ್ತವಾಗಿಸುವಲ್ಲಿ ಕ್ರಮ ಕೈಗೊಳ್ಳದಿರುವುದು ಜನರಿಗೆ ಬೇಸರ ತರಿಸಿದೆ.
ಕರಾವಳಿ ಮತ್ತು ಮಲೆನಾಡು, ಬಯಲುಸೀಮೆಯನ್ನು ಬೆಸೆಯುವ ಸಮೀಪದ ಮತ್ತು ಪ್ರಮುಖ ರಸ್ತೆ ಬಂದ್ ಆಗಿದ್ದರಿಂದ ಜನ ಸಂಚಾರಕ್ಕೆ ಹೆಚ್ಚು ಸಮಯ ಮತ್ತು ಹಣವನ್ನು ಖರ್ಚು ಮಾಡುತ್ತಿದ್ದಾರೆ. ಬದಲಿ ರಸ್ತೆಗಳಲ್ಲಿ ಹೆಚ್ಚು ದೂರ ಸಾಗಬೇಕಾಗಿರುವುದರಿಂದ ಸಾರಿಗೆ ಬಸ್ ದರವನ್ನೂ ಹೆಚ್ಚು ಮಾಡಲಾಗಿದೆ. ಉತ್ತರ ಕರ್ನಾಟಕದಿಂದ ಶಿರಸಿ ಮೂಲಕ ಸಾಗುತ್ತಿದ್ದ ಅನೇಕ ಬಸ್ಸುಗಳು ಯಲ್ಲಾಪುರ ಮೂಲಕ ಸಂಚರಿಸುತ್ತಿವೆ. ಇದರಿಂದಾಗಿ ಕುಮಟಾದವರಿಗೆ ಶಿರಸಿ, ಶಿರಸಿಯವರಿಗೆ ಕುಮಟಾ ಹೋಗುವುದಕ್ಕಾಗಿ ದಿನವಿಡೀ ಪ್ರಯಾಣ ಮಾಡಬೇಕಾಗುತ್ತದೆ. ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಮುಂದಾದರೂ ಒಳ್ಳೆಯ ರಸ್ತೆಯಲ್ಲಿ ಕಡಿಮೆ ಸಮಯದಲ್ಲಿ ಸಾಗಬಹುದು ಎಂಬ ಕಾರಣದಿಂದ ಇದನ್ನೆಲ್ಲ ಜನ ಸಹಿಸಿಕೊಂಡು ಸುಮ್ಮನಿದ್ದಾರೆ. ಆದರೆ ನಿಗದಿತ ಸಮಯ ಮುಗಿದರೂ ಕಾಮಗಾರಿ ಮುಗಿದಿಲ್ಲ!
ಇನ್ನೂ ಕುಮಟಾ ತಾಲೂಕಿನಲ್ಲಿ ಕತಗಾಲ ಮತ್ತು ದೇವಿಮನೆ ಘಟ್ಟ ಸೇರಿದಂತೆ ಒಟ್ಟೂ ಐದು ಕಿಲೋಮೀಟರ್ ಭೂಸ್ವಾಧೀನ ಬಾಕಿಯಿದೆ. ಶಿರಸಿ ಮತ್ತು ಸಂಪಖAಡ ಹಾಗೂ ಒಂದು ಸೇತುವೆ ಸ್ಥಳ ಸಂಬoಧಿಸಿದoತೆ ಮೂರು ಕಿಲೋಮೀಟರ್, ಹೀಗೆ ಒಟ್ಟೂ ಎಂಟು ಕಿಲೋಮೀಟರ್ ಭೂಸ್ವಾಧೀನ ಬಾಕಿಯಿದೆ. ಖಾಸಗಿ ಜಮೀನು ಇರುವಲ್ಲಿ ಕೆಲವು ಕುಟುಂಬದ ಸದಸ್ಯರಲ್ಲಿನ ಗೊಂದಲದಿoದಾಗಿ ಸಮಸ್ಯೆ ಪರಿಹಾರವಾಗಿಲ್ಲ.