ಕಲಘಟಗಿಯಿಂದ ಹಳಿಯಾಳಕ್ಕೆ ಬರುತ್ತಿದ್ದ ಬಸ್ಸು ಅಪಘಾತಕ್ಕೀಡಾಗಿದ್ದು, 12ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯವಾಗಿದೆ. 20ಕ್ಕೂ ಅಧಿಕ ಪ್ರಯಾಣಿಕರಿಗೆ ಈ ಅವಘಡದಲ್ಲಿ ಪೆಟ್ಟಾಗಿದೆ.
ಹಳಿಯಾಳ ತಾಲೂಕಿನ ಬಾಣಸಗೇರಿ ಗ್ರಾಮದ ಬಳಿ ಈ ಅವಘಡ ನಡೆದಿದೆ. ಮುಂದಿನಿAದ ಬಂದ ಕಾರಿಗೆ ಬಸ್ಸು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್ಸಿನ ಚಾಲಕ ಸ್ಟೇರಿಂಗ್ ತಿರುಗಿಸಿದ್ದು, ಆ ಬಸ್ಸು ಮರಕ್ಕೆ ಗುದ್ದಿದೆ. ಬಸ್ಸಿನ ಚಾಲಕನಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಜೊತೆಗೆ ಇಬ್ಬರು ಮಕ್ಕಳಿಗೂ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯರು ಆರೈಕೆ ಮಾಡುತ್ತಿದ್ದಾರೆ.
ಈ ಬಸ್ಸಿನಲ್ಲಿ 40ಕ್ಕೂ ಅಧಿಕ ಪ್ರಯಾಣಿಕರಿದ್ದರು. ಆ ಪೈಕಿ 8 ವಿದ್ಯಾರ್ಥಿನಿಯರು, ಇಬ್ಬರು ಮಹಿಳೆಯರು ಹಾಗೂ ಇಬ್ಬರು ಶಾಲಾ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ನೋವು ಅನುಭವಿಸಿದರು. ಬಸ್ಸಿನ ಮುಂದಿನ ಭಾಗ ಸಂಪೂರ್ಣವಾಗಿ ಜಖಂ ಆಗಿದ್ದು, ಮುಂದಿನ ಆಸನದಲ್ಲಿದ್ದ ವಿದ್ಯಾರ್ಥಿಯ ಕಾಲು ಅಲ್ಲಿಯೇ ಸಿಲುಕಿ ಬಿದ್ದಿತ್ತು. ಒಂದು ತಾಸಿನ ಕಾರ್ಯಾಚರಣೆ ನಂತರ ಆ ವಿದ್ಯಾರ್ಥಿಯನ್ನು ಅಲ್ಲಿಂದ ಹೊರ ತೆಗೆಯಲಾಯಿತು.
ಹಳಿಯಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಸುಗಳ ಕಾಲ ಸಂಚಾರ ದಟ್ಟಣೆ ಕಾಣಿಸಿತು. ನಂತರ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.