ರಾತ್ರಿ ವೇಳೆ ವೇಗವಾಗಿ ಬೈಕ್ ಓಡಿಸುತ್ತಿದ್ದ ಜೊಯಿಡಾದ ಜನಾರ್ಧನ ವೇಳಿಪ್ ಅವರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಸೇತುವೆ ಕಟ್ಟೆಗೆ ಬೈಕ್ ಗುದ್ದಿದ ಪರಿಣಾಮ ಅವರ ಬದುಕು ಅಲ್ಲಿಯೇ ಅಂತ್ಯವಾಗಿದೆ.
ಜೊಯಿಡಾದ ಕಳಸಾಯಿ ಬಳಿಯ ಮಾತಕರ್ಣಿ ಬಳಿ ಜನಾರ್ಧನ ಅರ್ಜುನ ವೇಳಿಪ್ (24) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಮನೆಗೆ ಆಧಾರವಾಗಿದ್ದರು. ಜನವರಿ 26ರಂದು ಅವರು ಕಳಸಾಯಿಗೆ ಹೋಗಿ ಬರುವುದಾಗಿ ಹೊರಟಿದ್ದರು. ಉಳವಿ-ಕಳಸಾಯಿ ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸುತ್ತಿದ್ದ ಅವರು ಅಪಘಾತಕ್ಕೀಡಾದರು.
ರಾತ್ರಿ ವೇಳೆ ಅವರ ಬೈಕು ಮಾತಕರ್ಣಿ ಕ್ರಾಸಿನ ಬಳಿ ಸೇತುವೆ ಕಟ್ಟೆಗೆ ಡಿಕ್ಕಿಯಾಯಿತು. ಆ ಡಿಕ್ಕಿ ರಭಸಕ್ಕೆ ಜನಾರ್ಧನ ವೇಳಿಪ್ ಅವರು ಬಹುದೂರ ಹಾರಿ ಬಿದ್ದು ಗಂಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡರು. ಕೈ, ಎದೆ ಹಾಗೂ ಕುತ್ತಿಗೆಗೆ ನೋವು ಮಾಡಿಕೊಂಡಿದ್ದ ಜನಾರ್ಧನ ವೇಳಿಪ್ ಅವರನ್ನು ಜೊಯಿಡಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆ ಅಪಘಾತದ ಬಗ್ಗೆ ಅದೇ ಊರಿನ ರೂಪೇಶ್ ಅವರು ಕುಟುಂಬಕ್ಕೆ ಸುದ್ದಿ ಮುಟ್ಟಿಸಿದರು. ಮಗನಿಗೆ ಅಪಘಾತವಾದ ವಿಷಯ ಕೇಳಿ ಅರ್ಜುನ ವೇಳಿಪ್ ಅವರು ಆಸ್ಪತ್ರೆಗೆ ದೌಡಾಯಿಸಿದರು. ಆದರೆ, ಅಷ್ಟರೊಳಗೆ ಚಿಕಿತ್ಸೆ ಫಲಿಸದೇ ಅರ್ಜುನ ವೆಳಿಪ್ ಅಸುನೀಗಿದ್ದರು.
`ರಾತ್ರಿ ವೇಳೆ ಬೈಕ್ ಓಡಿಸುವಾಗ ಎಚ್ಚರ’