ಗೋಕರ್ಣ ಬಳಿಯ ನಾಡುಮಾಸ್ಕೇರಿ ಸುತ್ತಲಿನ ಅಕ್ರಮ ರೆಸಾರ್ಟ ಹಾಗೂ ಹೊಟೇಲ್ ಮಾಲಕರಿಗೆ ನಡುಕ ಶುರುವಾಗಿದೆ. ಆ ಭಾಗದ ಹೊಟೇಲ್ ಹಾಗೂ ರೆಸಾರ್ಟಗಳ ಸರ್ವೇ ಕಾರ್ಯ ಶುರುವಾಗಿದೆ.
ಇಲ್ಲಿನ ಕಡಲತೀರ ವ್ಯಾಪ್ತಿಯಲ್ಲಿ ಸಾಕಷ್ಟು ಹೊಟೇಲುಗಳಿವೆ. ಅದೇ ಪ್ರಮಾಣದಲ್ಲಿ ಅಕ್ರಮ ರೆಸಾರ್ಟುಗಳಿವೆ. ಭಾವಿಕೊಡ್ಲ ಗ್ರಾಮದ ದುಬ್ಬನಸಶಿ, ಹಾರೂಮಾಸ್ಕೇರಿ ಗ್ರಾಮ, ನಾಡುಮಾಸ್ಕೇರಿ ಗ್ರಾಮದ ಗಂಗೆಕೊಳ್ಳ ಭಾಗದ 57 ಕಟ್ಟಡಗಳ ಜಾಗದ ಸರ್ವೆಯನ್ನ ಭೂಮಾಪನಾ ಇಲಾಖೆಯ ಜೊತೆ ಕಂದಾಯ ಇಲಾಖೆ ಶುರು ಮಾಡಿದೆ. ಕಳೆದ ಹಲವು ತಿಂಗಳ ಹಿಂದೆ ಅಕ್ರಮ ಕಟ್ಟಡ ತೆರವಿನ ಕುರಿತು ಸಿ.ಆರ್.ಝಡ್ ಇಲಾಖೆ ನೀಡಿದ್ದ ನೋಟಿಸ್ ವಿರುದ್ದ ರೆಸಾರ್ಟನವರು ನ್ಯಾಯಾಲಯ ಮೊರೆ ಹೋಗಿದ್ದರು. ನಂತರ ಜಾಗದ ಅತಿಕ್ರಮಣವಾಗಿರುವ ಬಗ್ಗೆ ಪರಿಶೀಲಿಸಿ ಸರಿಯಾದ ರೀತಿಯಲ್ಲಿ ಕ್ರಮಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿತ್ತು.
ಅದರಂತೆ ಇದೀಗ ಸರ್ವೇ ಕಾರ್ಯ ನಡೆದಿದ್ದು, ಇದು ಪೂರ್ಣಗೊಂಡ ನಂತರ ಅಕ್ರಮ ಕಟ್ಟಡಗಳ ತೆರವು ನಡೆಯಲಿದೆ ಎನ್ನಲಾಗುತ್ತಿದೆ. ಸರ್ವೆ ಕಾರ್ಯದಲ್ಲಿ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು, ಭೂಮಾಪನಾ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯತ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಪಿಸೈ ಅನಿಲ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು ಸೂಕ್ತ ಬಂದೂಬಸ್ತ ಕಲ್ಪಿಸಿದ್ದಾರೆ.