ಹೊನ್ನಾವರದ ಜಲವಳ್ಳಿ ಅಂಚೆ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ. ಅಂಚೆ ಅಧಿಕಾರಿಯಾಗಿದ್ದ ಮೋಹನ ಪೂಜಾರಿ ಅವರೇ ಅಲ್ಲಿ ಅಪರಾತಪರ ಮಾಡಿದ್ದಾರೆ.
ಹೊನ್ನಾವರ ಜಲವಳ್ಳಿ ಕರ್ಕಿಯಲ್ಲಿ ಮೋಹನ ಹನುಮಂತ ಪೂಜಾರಿ ಅವರು ವಾಸವಾಗಿದ್ದಾರೆ. ಜಲವಳ್ಳಿಯ ಅಂಚೆ ಕಚೇರಿಯಲ್ಲಿ ಅವರು ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ತಾವು ಕೆಲಸ ಮಾಡುವ ಜಲವಳ್ಳಿ ಅಂಚೆ ಕಚೇರಿಯ ಗ್ರಾಹಕರಿಗೆ ಅವರು ಅನ್ಯಾಯ ಮಾಡಿದ್ದಾರೆ. ಆ ಭಾಗದ ಜನ ಅಂಚೆ ಇಲಾಖೆಗೆ ಜಮಾ ಮಾಡಿದ್ದ ಹಣವನ್ನು ಮೋಹನ ಪೂಜಾರಿ ಅವರು ದುರುಪಯೋಗಪಡಿಸಿಕೊಂಡಿದ್ದಾರೆ. ಅಂಚೆ ಇಲಾಖೆಗೆ ಜನ ಹಣ ಜಮಾ ಮಾಡಲು ಬಂದಾಗ ಅವರ ಪಾಸ್ಬುಕ್’ನಲ್ಲಿ ಹಣ ಜಮಾ ಮಾಡಿದ ಹಾಗೇ ತೋರಿಸಿದ ಹನುಮಂತ ಪೂಜಾರಿ ಅವರು ಆ ಹಣವನ್ನು ಅಂಚೆ ಇಲಾಖೆಗೆ ಜಮಾ ಮಾಡಿಲ್ಲ. ಹೀಗಾಗಿ ಪಾಸ್ ಬುಕ್’ನಲ್ಲಿ ಹಣ ಕಾಣಿಸಿದರೂ ಗ್ರಾಹಕರ ಖಾತೆಯಲ್ಲಿ ಹಣ ಇರಲಿಲ್ಲ.
ಈ ವಿಷಯ ಊರಿನಲ್ಲಿ ದೊಡ್ಡ ಗೌಜಿ ಆಗದಿದ್ದರೂ ಅಂಚೆ ಇಲಾಖೆಯ ಗಮನಕ್ಕೆ ಬಂದಿತ್ತು. ಹೀಗಾಗಿ ಅಂಚೆ ಇಲಾಖೆಯವರು ಆಂತರಿಕ ತನಿಖೆ ನಡೆಸಿದಾಗ ಸರ್ಕಾರಿ ಹಣ ದುರುಪಯೋಗ ನಡೆದಿರುವುದು ಗೊತ್ತಾಯಿತು. ಖಾತೆದಾರರಿಂದ ಹಣಪಡೆದು ಅದನ್ನು ಸ್ವಂತ ಉಪಯೋಗಕ್ಕೆ ಬಳಸಿರುವುದು ಸಾಭೀತಾಯಿತು. ಈ ಎಲ್ಲಾ ಹಿನ್ನಲೆ ಅಂಚೆ ಅಧೀಕ್ಷಕ ಕೃಷ್ಣಪ್ಪ ಸಂಕ್ರಟ್ಟಿ ಅವರು ಕಾನೂನು ಕ್ರಮಕ್ಕೆ ಮುಂದಾದರು. ಹೊನ್ನಾವರ ಪೊಲೀಸ್ ಠಾಣೆಗೆ ಹೋದ ಅವರು ಮೋಹನ ಪೂಜಾರಿ ವಿರುದ್ಧ ದೂರು ನೀಡಿದರು.
ಸದ್ಯದ ಮಾಹಿತಿ ಪ್ರಕಾರ 1.83 ಲಕ್ಷ ರೂ ವಂಚನೆ ನಡೆದಿದೆ. ಆ ಹಣ ದುರುಪಯೋಗಪಡಿಸಿಕೊಂಡ ಅಂಚೆ ಸಿಬ್ಬಂದಿ ಮೋಹನ ಪೂಜಾರಿ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.