ಕಾರ್ಮಿಕ ವಿರೋಧಿ ನೀತಿ ಹಾಗೂ ಜನ ವಿರೋಧಿ ಬಜೆಟ್ ವಿರುದ್ಧ ಫೆಬ್ರವರಿ 12ರಂದು ವಿವಿಧ ಸಂಘಟನೆಯವರು ದೇಶದ ಎಲ್ಲಡೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈ ಹೋರಾಟಕ್ಕೆ ಬೆಂಬಲ ನೀಡುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ, ಸಿಐಟಿಯು ಜಿಲ್ಲಾಧ್ಯಕ್ಷ ತಿಲಕ್ ಗೌಡ ಮತ್ತು ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಭೀಮಣ್ಣ ಬೋವಿ ಜಂಟಿಯಾಗಿ ಕರೆ ನೀಡಿದ್ದಾರೆ.
ಸಿಐಟಿಯ, ಅಖಿಲ ಭಾರತ ಕಿಸಾನ್ ಸಭಾ ಮತ್ತು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘಗಳುವ ಜಂಟಿಯಾಗಿ ಮುಷ್ಕರವನ್ನು ಸಂಘಟಿಸಿವೆ. ದೇಶದ ಕಾರ್ಮಿಕ ವರ್ಗ, ರೈತರು ಮತ್ತು ಗ್ರಾಮೀಣ ಕೃಷಿ ಕೂಲಿಕಾರರ ಹಕ್ಕುಗಳು, ರೈತರ ಜೀವನೋಪಾಯ, ಸಾರ್ವಜನಿಕ ಸಂಪತ್ತು ಮತ್ತು ರಾಷ್ಟ್ರೀಯ ಸಾರ್ವಭೌಮತ್ವದ ಮೇಲೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಹುಮುಖಿ ದಾಳಿಯ ವಿರುದ್ಧ ಈ ಪ್ರತಿಭಟನೆ ನಡೆಯುತ್ತಿದೆ. ‘ಮನರೇಗಾವನ್ನು ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕಾ ಮಿಶನ್ (ಗ್ರಾಮೀಣ) ಕಾಯಿದೆ 2025 ರೊಂದಿಗೆ ಬದಲಾಯಿಸುವುದು ಹಕ್ಕು-ಆಧಾರಿತ ಉದ್ಯೋಗ ಖಾತರಿಯನ್ನು ಕೊನೆಗೊಳಿಸುತ್ತದೆ. ಆರ್ಥಿಕ ಜವಾಬ್ದಾರಿಯನ್ನು ರಾಜ್ಯಗಳಿಗೆ ವರ್ಗಾಯಿಸುತ್ತದೆ. ಅಗ್ಗದ ಕಾರ್ಮಿಕರ ಲಭ್ಯತೆಯ ಖಾತರಿಗಾಗಿ ಸುಗ್ಗಿಯ ಕಾಲದಲ್ಲಿ ಕೆಲಸವನ್ನು ನಿಷೇಧಿಸುತ್ತದೆ’ ಎಂದು ಹೋರಾಟಗಾರರು ವಿಶ್ಲೇಷಿಸಿದ್ದಾರೆ. ‘ಪ್ರಸ್ತಾವಿತ ವಿಕಸಿತ ಭಾರತ ಶಿಕ್ಷಾ ಅನುಷ್ಠಾನ ಮಸೂದೆ, ಕರಡು ಬೀಜ ಮಸೂದೆ ಮತ್ತು ಕರಡು ವಿದ್ಯುತ್ (ಸಂಶೋಧನೆ) ಮಸೂದೆ, 2025 ಒಟ್ಟಾಗಿ ಕೃಷಿ, ಶಿಕ್ಷಣ, ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕ ಕ್ಷೇತ್ರಗಳ ಸಂಸ್ಥೆಗಳ ಮೇಲಿನ ನೇರ ದಾಳಿಯನ್ನು ನಡೆಸಲಾಗುತ್ತಿದೆ’ ಎಂದವರು ವಿವರಿಸಿದ್ದಾರೆ.
ಪರಮಾಣು ಸುರಕ್ಷತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಗಂಭೀರ ಬೆದರಿಕೆಯೊಡ್ಡುವ ಕಾಯಿದೆ, ಜನರ ಜೀವನ ಮತ್ತು ಜೀವನೋಪಾಯಗಳ ಮೇಲೆ ಹಾನಿಕಾರಕ ಪರಿಣಾಮ ಬೀರಿದ ಹಲವಾರು ಬೆಳವಣಿಗೆಗಳನ್ನು ಸಂಘಟನೆಯವರು ಖಂಡಿಸಿದ್ದಾರೆ.
