ಶಿರಸಿಯ ಬ್ಯಾಗದ್ದೆಯಲ್ಲಿ ಸೋದೆ ಅರಸರ ಕಾಲದಲ್ಲಿದ್ದ ಶ್ರೀ ಉಮಾಮಹೇಶ್ವರ ದೇವಾಲಯದ ಪುನರ್ ನಿರ್ಮಾಣಕ್ಕೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಸಂಕಲ್ಪ ಮಾಡಿದ್ದಾರೆ. 500 ವರ್ಷಕ್ಕೂ ಹಳೆದ ದೇಗುಲದ ಜೀರ್ಣೋದ್ಧಾರಕ್ಕಾಗಿ ಅವರು ಶ್ರಮಿಸುತ್ತಿದ್ದು, ಇದಕ್ಕಾಗಿ ಭೂಮಿ ಪೂಜೆ ನೆರವೇರಿಸಿದ್ದಾರೆ.
ಬ್ಯಾಗದ್ದೆಯಲ್ಲಿರುವ ಉಮಾಮಹೇಶ್ವರ ದೇವಾಲಯ ಅತ್ಯಂತ ಶಕ್ತಿಪೀಠಗಳಲ್ಲಿ ಒಂದಾಗಿದೆ. ಇಲ್ಲಿ ಶೀಘ್ರ ಪ್ರಸಾದ ಸ್ವರೂಪಿ ಉಮಾಮಹೇಶ್ವರ ದೇವರ ಜೊತೆಗೆ ಪಾರ್ವತಿ ದೇವಿ, ಗಣಪತಿ, ಲಕ್ಷ್ಮೀನಾರಾಯಣ, ಆಂಜನೇಯ ದೇವರ ಸಾನಿಧ್ಯವಿದೆ. ಮಹಾಶಿವರಾತ್ರಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಭಕ್ತರ ಮನದಾಸೆಯನ್ನು ಈಡೇರಿಸುವ ಉಮಾಮಹೇಶ್ವರ ದೇವರಿಗೆ ಸುತ್ತಲಿನ ಅನೇಕ ಭಕ್ತರು ನಡೆದುಕೊಳ್ಳುತ್ತಾರೆ.
ಅನೇಕ ವರ್ಷಗಳಿಂದ ಈ ದೇವಾಲಯ ಪುನರ್ ನಿರ್ಮಾಣಕ್ಕೆ ಜನ ಪ್ರಯತ್ನಿಸುತ್ತಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ದೇವಾಲಯ ಶಿಥಿಲವಾಗಿದ್ದು, ಆ ಬಗ್ಗೆ ಊರಿನವರು ಅನಂತಮೂರ್ತಿ ಹೆಗಡೆ ಅವರ ಗಮನಕ್ಕೆ ತಂದಿದ್ದರು. ದೇವಾಲಯ ಅಭಿವೃದ್ಧಿಗೆ ಕೈ ಜೋಡಿಸುವಂತೆ ಊರಿನವರು ಮನವಿ ಮಾಡಿದ್ದು, ಹುಟ್ಟೂರಿನ ದೇಗುಲ ಪುನರ್ ನಿರ್ಮಾಣಕ್ಕೆ ಅನಂತಮೂರ್ತಿ ಹೆಗಡೆ ಅವರು ಸಂಕಲ್ಪ ಮಾಡಿದರು. ಅದರ ಮುಂದುವರೆದ ಭಾಗವಾಗಿ ಊರಿನವರ ಸಹಕಾರದಲ್ಲಿ ದೇಗುಲ ಜೀರ್ಣೋದ್ಧಾರಕ್ಕಾಗಿ ಅನಂತಮೂರ್ತಿ ಹೆಗಡೆ ಮುಂದಾಗಿದ್ದಾರೆ.