ಶಿರಸಿ – ಸಿದ್ದಾಪುರ ಬಳಿಯಿರುವ ಶೀಗೇಹಳ್ಳಿಯ ಆನಂದ ಹೆಗಡೆ ಅವರು ಶಾಸಕರಲ್ಲ. ಸಂಸದರಾಗಿಯೂ ಅವರು ಕೆಲಸ ಮಾಡಿಲ್ಲ. ಕನಿಷ್ಟ ಅವರು ಗ್ರಾಮ ಪಂಚಾಯತ ಸದಸ್ಯರು ಸಹ ಅಲ್ಲ. ಅದಾಗಿಯೂ ಅವರು ತಮ್ಮ ಊರಿನ ಅಭಿವೃದ್ಧಿ ಮಾಡಿದ್ದಾರೆ!
ADVERTISEMENT
ಆನಂದ ಹೆಗಡೆ ಅವರು ತಮ್ಮ ನಿರಂತರ ಪತ್ರ ಚಳುವಳಿಯಿಂದ ಅವರ ಊರಿಗೆ ಸರ್ಕಾರದಿಂದ ರಸ್ತೆ ಮಾಡಿಸಿದ್ದಾರೆ. ಆ ರಸ್ತೆಯಲ್ಲಿ ಬಸ್ ಓಡಾಡುವ ಹಾಗೇ ಮಾಡಿದ್ದಾರೆ. ಊರಿಗೆ ಇಂಟರ್ನೆಟ್ ಸಂಪರ್ಕ ಕೊಡಿಸಿದ್ದಾರೆ. ಮನೆ ಮನೆಗೂ ಗ್ಯಾಸ್ ಸಿಲೆಂಡರ್ ತಲುಪುವ ವ್ಯವಸ್ಥೆ ಮಾಡಿದ್ದಾರೆ. ಮೊಬೈಲ್ ನೆಟ್ವರ್ಕ ಬರುವ ಹಾಗೇ ಟವರ್ ಮಾಡಿಸಿದ್ದಾರೆ. ಚುನಾವಣೆ ವೇಳೆ ಮತದಾನಕ್ಕಾಗಿ ದೂರದ ಊರಿಗೆ ತೆರಳುವ ಬದಲು ಸಮೀಪದಲ್ಲಿಯೇ ಮತಗಟ್ಟೆ ಮಾಡಿಸಿದ್ದಾರೆ.
ಶಿರಸಿಯ ಶೀಗೇಹಳ್ಳಿ ಅತ್ಯಂತ ಹಿಂದುಳಿದ ಪ್ರದೇಶ. ಸಾಪ್ಟೆಂಬರ್ ಇಂಜಿನಿಯರ್ ಆಗಿರುವ ಆನಂದ ಹೆಗಡೆ ಅವರು ಸಹ ಅದೇ ಊರಿನವರು. ಕೊರೊನಾ ಕಾಲಘಟ್ಟದ ಅವಧಿಯಲ್ಲಿ ಊರಿಗೆ ಬಂದಿದ್ದ ಆನಂದ ಹೆಗಡೆ ಅವರು ಆ ಪ್ರದೇಶದ ಸಮಸ್ಯೆಗಳಿಗೆ ಮುಕ್ತಿ ಕೊಡುವ ಸಂಕಲ್ಪ ಮಾಡಿದರು. ಕಾನೂನಾತ್ಮಕ ಹೋರಾಟ ನಡೆಸಿ ಆ ಊರಿನ ಅಗತ್ಯ ಸೌಕರ್ಯಗಳನ್ನು ಕೊಡಿಸಿದರು. ನಿರಂತರ ಪತ್ರ ಚಳುವಳಿ ಅವರ ಸಾಧನೆಗೆ ಪೂರಕವಾಗಿದ್ದು, ಐದು ವರ್ಷದ ಅವಧಿಯಲ್ಲಿ ಶೀಗೇಹಳ್ಳಿಯ ಚಿತ್ರಣವೇ ಬದಲಾಗಿದೆ.
ADVERTISEMENT
ಶೀಗೆಹಳ್ಳಿ ಗ್ರಾಮಕ್ಕೆ ತೆರಳಲು ಮೊದಲು ರಸ್ತೆ ಇರಲಿಲ್ಲ. ಕಾಲು ದಾರಿಯಲ್ಲಿ ಜನ ಸಂಚರಿಸಬೇಕಾದ ಪರಿಸ್ಥಿತಿಯಿದ್ದು, ವಾಹನಗಳ ಓಡಾಟ ಸುಲಭವಾಗಿರಲಿಲ್ಲ. ಮಕ್ಕಳು ಶಾಲೆಗೆ ಹೋಗಲು ಸಹ 12ಕಿಮೀ ನಡೆಯಬೇಕಿತ್ತು. ಜನಪ್ರತಿನಿಧಿಗಳ ಭೇಟಿ ಮಾಡಿದ ನಂತರ ಹೋರಾಟ ಶುರು ಮಾಡಿದ ಆನಂದ ಹೆಗಡೆ ಅವರು ಸರ್ಕಾರದಿಂದ ರಸ್ತೆ ಮಂಜೂರಿ ಮಾಡಿಸಿದರು. ಊರಿಗೆ ಡಾಂಬರ್ ರಸ್ತೆ ನಿರ್ಮಾಣವಾದ ನಂತರ ಬಸ್ಸು ಬಿಡುವಂತೆ ಪಟ್ಟುಹಿಡಿದರು. ಊರಿಗೆ ಬಸ್ಸು ಬಿಡಿಸುವಲ್ಲಿಯೂ ಅವರು ಯಶಸ್ವಿಯಾದರು. ಕೋವಿಡ್ ಅವಧಿಯಲ್ಲಿ ನೆಟ್ವರ್ಕ ಸಿಗದ ಸಮಸ್ಯೆ ಅರಿತಿದ್ದ ಅವರು ಊರಿಗೆ ಇಂಟರ್ನೆಟ್ ವ್ಯವಸ್ಥೆ ಕೊಡಿಸುವಂತೆ ಪತ್ರ ಚಳುವಳಿ ಮಾಡಿದರು. ಅದರ ಪರಿಣಾಮ ಶೀಗೆಹಳ್ಳಿ ಗ್ರಾಮ ಡಿಜಿಟಲ್ ವ್ಯವಸ್ಥೆಗೆ ಬದಲಾಗಿದ್ದು, ಊರಿನಲ್ಲಿ ಟವರ್ ನಿರ್ಮಾಣವೂ ಆಗಿದ್ದರಿಂದ ಮೊಬೈಲುಗಳು ರಿಂಗಣಿಸಲು ಶುರುವಾದವು.
ಶಿಗೇಹಳ್ಳಿ ಗ್ರಾಮದ ಎಲ್ಲರ ಮನೆಯಲ್ಲಿಯೂ ಅಡುಗೆ ಗ್ಯಾಸ್ ಸಿಲೆಂಡರ್ ಇತ್ತು. ಆದರೆ, ಅದನ್ನುಪಡೆಯುವುದಕ್ಕಾಗಿ ಜನ ಶಿರಸಿ ಅಥವಾ ಸಿದ್ದಾಪುರಕ್ಕೆ ಹೋಗಬೇಕಿತ್ತು. 13ಕಿಮೀ ದೂರದವರೆಗೆ ಗ್ಯಾಸ್ ಸಿಲೆಂಡರ್ ಹೋರಬೇಕಿತ್ತು. ಆನಂದ ಹೆಗಡೆ ಅವರ ಪ್ರಯತ್ನದಿಂದ ಇದೀಗ ಮನೆ ಮನೆಗೂ ಗ್ಯಾಸ್ ಸಿಲೆಂಡರ್ ಡಿಲೆವರಿ ಆಗುತ್ತಿದೆ. ಕಂಪನಿ ಜೊತೆ ಮಾತನಾಡಿದ ಆನಂದ ಹೆಗಡೆ ಅವರು ನಿಯಮಗಳ ಬಗ್ಗೆ ಕಟ್ಟುನಿಟ್ಟಾಗಿ ವಿವರಿಸಿ ಆ ಸೇವೆಯನ್ನು ಒದಗಿಸಿದ್ದಾರೆ. ಶೀಗೇಹಳ್ಳಿ ಸಮೀಪದಲ್ಲಿ ಬ್ಯಾಂಕ್ ವ್ಯವಸ್ಥೆ ಇರಲಿಲ್ಲ. ಶಿರಸಿ-ಸಿದ್ದಾಪುರದ ಬ್ಯಾಂಕ್ ಕೆಲಸಕ್ಕೆ ಹೋದರೆ ಇಡೀ ದಿನ ಹಾಳಾಗುತ್ತಿತ್ತು. ಆ ಬಗ್ಗೆ ಅರಿತ ಆನಂದ ಹೆಗಡೆ ಅವರು ಅಂಚೆ ಇಲಾಖೆ ಜೊತೆ ಸಂಪರ್ಕ ಬೆಳೆಸಿ ಊರಿನಲ್ಲಿ ಅಂಚೆ ಕಚೇರಿ ತೆರೆಸಿದರು. ಅಲ್ಲಿಂದಲೇ ಇದೀಗ ಬ್ಯಾಂಕ್ ಕೆಲಸವೂ ನಡೆಯುತ್ತಿದೆ.
ಆ ಊರಿನ ಜನ ಚುನಾವಣೆ ಅವಧಿಯಲ್ಲಿಯೂ ಸಂಕಷ್ಟ ಅನುಭವಿಸುತ್ತಿದ್ದರು. ಮತದಾನಕ್ಕಾಗಿ ಸಹ 10ಕಿಮೀ ಹೆಚ್ಚು ನಡೆಯಬೇಕಿತ್ತು. ಈ ಸಮಸ್ಯೆ ಬಗೆಹರಿಸಲು ಆನಂದ ಹೆಗಡೆ ಅವರು ಚುನಾವಣಾ ಆಯೋಗದ ಮೊರೆ ಹೋದರು. ಊರಿನ ಸಮಸ್ಯೆ ಬಗ್ಗೆ ವಿವರಿಸಿ ತಮ್ಮ ಊರಿಗೆ ಮತಗಟ್ಟೆಯನ್ನು ಮಂಜೂರಿ ಮಾಡಿಸಿದರು. ಅದರ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಶೇ 92ರಷ್ಟು ಮತದಾನವೂ ನಡೆಯಿತು. ಊರಿನಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವಗಳಿಗೂ ಆನಂದ ಹೆಗಡೆ ಅವರು ಕೈ ಜೋಡಿಸಿದ್ದಾರೆ. ಕಳೆದ ಐದು ವರ್ಷದ ಅವಧಿಯಲ್ಲಿ ಆನಂದ ಹೆಗಡೆ ಅವರು ಊರಿನ ಚಿತ್ರಣವನ್ನೇ ಬದಲಿಸಿದ್ದಾರೆ. ಹುದ್ದೆಯಿಲ್ಲದೇ ಮಾಡಿದ ಅವರ ಸೇವೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ ಗೌರವ ಸಿಕ್ಕಿದೆ. `ವೈಯಕ್ತಿಕ ಬದ್ಧತೆ, ನಿರಂತರ ಪ್ರಯತ್ನವೇ ಈ ಯಶಸ್ಸಿಗೆ ಕಾರಣ’ ಎಂದು ಆನಂದ ಹೆಗಡೆ ಅವರು ಮೊಬೈಲ್ ಮಿಡಿಯಾ ನೆಟ್ವರ್ಕ ಜೊತೆ ಮಾತನಾಡಿದ್ದಾರೆ.
ನಿಮ್ಮೂರಿನ ಅಭಿವೃದ್ಧಿಗೂ ಈ ವಿಡಿಯೋ ಪ್ರೇರಣೆ ಆಗಲಿ.. ಐದು ವರ್ಷದ ಅವಧಿಯಲ್ಲಿ ಆನಂದ ಹೆಗಡೆ ಮಾಡಿದ್ದೇನು? ವಿಡಿಯೋ ಇಲ್ಲಿ ನೋಡಿ..