ಅರಣ್ಯ ಅತಿಕ್ರಮಣದಾರರು ಸಲ್ಲಿಸಿದ ಭೂಮಿ ಹಕ್ಕಿನ ಅರ್ಜಿ ಮರುಪರಿಶೀಲನೆಗೆ ನಿಗದಿಪಡಿಸಿದ ಗಡುವು ಫೆಬ್ರವರಿ 13ಕ್ಕೆ ಮುಗಿಯಲಿದೆ. ಹೀಗಾಗಿ ಈ ಅವಧಿಯನ್ನು ಇನ್ನೂ 6 ತಿಂಗಳು ವಿಸ್ತರಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿ ಆಗ್ರಹಿಸಿದೆ.
ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾAತ ಕೊಚರೇಕರ ನೇತ್ರತ್ವದಲ್ಲಿ ಒಂದು ನಿಯೋಗದವರು ಈ ಬಗ್ಗೆ ಹೊನ್ನಾವರ ತಹಶೀಲ್ದಾರ್ ಪ್ರವೀಣ ಕರಾಂಡೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಅದಾದ ನಂತರ ಜಿಲ್ಲಾಡಳಿತ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ. `ಅರಣ್ಯ ಹಕ್ಕು ರಾಜ್ಯ ಮಟ್ಟದ ಮೇಲುಸ್ತುವಾರಿ ಸಮಿತಿಯ ನಿರ್ದೇಶನದಂತೆ ಜಿಲ್ಲೆಯಲ್ಲಿ ಈಗಷ್ಟೇ ಅರಣ್ಯ ಒತ್ತುವರಿ ಸ್ಥಳದ ಮಹಜರು ಪ್ರಕ್ರಿಯೆ ಆರಂಭವಾಗಿದೆ. ಮಹಜರು ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಆ ನಂತರವೇ ತಿರಸ್ಕರಿಸಿದ ಅರ್ಜಿಗಳ ಪುನರ್ ಪರಿಶೀಲನೆಯ ಕಾರ್ಯಕ್ಕೆ ಚಾಲನೆ ನೀಡಲು ಉಪವಿಭಾಗೀಯ ಮಟ್ಟದಲ್ಲಿ ಸಮಿತಿಗಳಿಗೆ ಸಾಧ್ಯವಾಗಲಿದೆ’ ಎಂಬ ಅಂಶವನ್ನು ನಿಯೋಗದವರು ವಿವರಿಸಿದ್ದಾರೆ.
`ಪಾರಂಪರಿಕ ಅರಣ್ಯವಾಸಿಗಳು ಭೂಮಿಯ ಹಕ್ಕಿನಿಂದ ಅರಣ್ಯ ಹಕ್ಕುನಿಯಮ 13ರಲ್ಲಿ ಸೂಚಿಸಿರುವ ಅಗತ್ಯ ಸಾಕ್ಷ್ಯ ಮತ್ತು ಪುರಾವೆಯನ್ನು ಗುರುತಿಸುವ ಸಲುವಾಗಿ ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳ ಜಂಟಿ ಸಮಿತಿ ರಚಿಸಿದ್ದಾರೆ. ಸ್ಥಳ ಮಹಜರು ಕೇವಲ ಕಾಟಾಚಾರ ಪ್ರಕ್ರಿಯೆ ಆದರೆ ಪ್ರಯೋಜನವಿಲ್ಲ. ಸರ್ವೆ ಕಾರ್ಯ ನಡೆಸಿ ನೈಜ ಸಾಗುವಳಿ ಕ್ಷೇತ್ರವನ್ನು ಮತ್ತು ಸ್ಥಳದಲ್ಲಿನ ಪುರಾವೆಗಳನ್ನು ಗುರುತಿಸಿ ಅರಣ್ಯಭೂಮಿ ಸಾಗುವಳಿದಾರರಿಗೆ ಭೂಮಿಯ ಹಕ್ಕು ನೀಡುವ ಕೆಲಸ ಆಗಬೇಕು’ ಎಂದು ಆಗ್ರಹಿಸಿದ್ದಾರೆ. ಪ್ರಮುಖರಾದ ಶ್ರೀಧರ ಶೆಟ್ಟಿ ಜಂಬೆಬೆಟ್ಟ ಗುಂಡಬಾಳಾ, ಮನೋಹರ ಅಂಕೋಲೇಕರ ಮತ್ತಿತರು ಈ ಬಗ್ಗೆ ಅಧಿಕಾರಿಗಳ ಮನವರಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ.