ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ವಿವಿಧ ಸಂಘಟನೆಯವರು ಸೇರಿ ಮುಷ್ಕರಕ್ಕೆ ಕರೆ ನೀಡಿದ್ದು, ಅಂಕೋಲಾದಲ್ಲಿಯೂ ಮುಷ್ಕರಕ್ಕೆ ಬೆಂಬಲವ್ಯಕ್ತವಾಗಿದೆ. ಸತ್ಯಾಗ್ರಹ ಸ್ಮಾರಕ ಭವನದ ಎದುರು 500ಕ್ಕೂ ಅಧಿಕ ರೈತ, ಕಾರ್ಮಿಕ, ನೌಕರ ಹಾಗೂ ಕೂಲಿ ಕಾರ್ಮಿಕರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಪಟ್ಟಣದ ಜೈಹಿಂದ್ ಸರ್ಕಲ್ ಬಳಿ ಬಹಿರಂಗ ಸಭೆ ನಡೆದಿದ್ದು, ಮೆರವಣಿಗೆಯಲ್ಲಿ ಭಾಗವಹಿಸಿದ ಜನರು ಸಹ ಜನ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ವಿಬಿ ಗ್ರಾಮ ಜಿ ಕಾಯ್ದೆ, ವಿದ್ಯುತ್ ಶಕ್ತಿ ತಿದ್ದುಪಡಿ ಮಸೂದೆ, ಶಾಂತಿ ಕಾಯ್ದೆ, ಬೀಜ ಮಸೂದೆ, ವಿಮಾ ಮಸೂದೆ ನೀತಿಗಳು ಜನ ವಿರೋಧಿ ಎಂದು ಪ್ರತಿಭಟನಾಕಾರರು ಹೇಳಿದರು. ಅಮೆರಿಕ-ಭಾರತ ವಾಣಿಜ್ಯ ಒಪ್ಪಂದ ರದ್ದತಿಗಾಗಿ ಒತ್ತಾಯಿಸಿದರು. ಇದರೊಂದಿಗೆ `ಸ್ಕೀಂ ನೌಕರರ ಕಾಯಂ ಮಾಡಬೇಕು. ಕನಿಷ್ಠ ವೇತನ ಕಾಯ್ದೆ ಜಾರಿ ಆಗಬೇಕು. ಅರಣ್ಯ ಭೂಮಿ ಹಕ್ಕು ಸಿಗಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ `ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜನ ವಿರೋಧಿಯಾಗಿದೆ. ಕಾರ್ಪೋರೇಟ್ ಕಂಪನಿ ಪರವಾಗಿ ಸರಕಾರ ಕೆಲಸ ಮಾಡುತ್ತಿದೆ. ದೇಶ ವಿರೋಧಿ ಈ ಕಾರ್ಮಿಕ ಸಂಹಿತೆಗಳು ರದ್ಧಾಗಬೇಕು. ನರೆಗಾ ಯೋಜನೆ ಮತ್ತೆ ಸ್ಥಾಪನೆಯಾಗಬೇಕು’ ಎಂದು ಆಗ್ರಹಿಸಿದರು. ಸಿಐಟಿಯು ತಾಲೂಕು ಸಂಚಾಲಕ ಎಚ್ ಬಿ ನಾಯಕ ಮಾತನಾಡಿ `ಸಾರ್ವಜನಿಕ ಆರೋಗ್ಯ, ಶಿಕ್ಷಣ, ಪಿಂಚಣಿ, ಉದ್ಯೋಗ ಭದ್ರತೆ ಮತ್ತು ಭೂಮಿ ಹಕ್ಕನ್ನು ರಕ್ಷಣೆ ಮಾಡುವ ಮೂಲಕ ಜನರ ಬದುಕಿನ ಹಕ್ಕನ್ನು ರಕ್ಷಿಸಬೇಕು’ ಎಂದು ಒತ್ತಾಯಿಸಿದರು.
ಅಂಗನವಾಡಿ ನೌಕರರ ಸಂಘ ಅದ್ಯಕ್ಷೆ ಗೀತಾ ಗೌಡ, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ವರದಾ ಅಂಕೋಲೆಕರ ಸಭೆಯಲ್ಲಿ ಮಾತನಾಡಿದರು. ವಿವಿಧ ಸಂಘಟನೆಗಳ ಪದಾದಿಕಾರಿಗಳಾದ ಗೌರೀಶ ನಾಯಕ, ಸಂತೋಷ ನಾಯ್ಕ, ಉಷಾ ಪಡ್ತಿ, ರಾಜೇಶ್ವರಿ, ಮಾದೇವ ಗೌಡ, ವೆಂಕಟರಮಣ ಗೌಡ, ಯಶೋದಾ ನಾಯ್ಕ, ಪುಷ್ಪಾ ನಾಯ್ಕ, ರಾಜಗೋಪಾಲ್ ಶೇಟ್, ಗುರುದಾಸ ನಾಯ್ಕ ಪ್ರತಿಭಟನೆಯಲ್ಲಿದ್ದರು.
ಯಲ್ಲಾಪುರದಲ್ಲಿಯೂ ಪ್ರತಿಭಟನೆ:
ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಿಮಿತ್ತ ಯಲ್ಲಾಪುರದಲ್ಲಿಯೂ ಪ್ರತಿಭಟನೆ ನಡೆದಿದೆ. ನಾಲ್ಕು ಕಾರ್ಮಿಕ ಕೋಡ್ ವಾಪಸ್ ಪಡೆಯುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಕೆಯಾಗಿದೆ. ವಿದ್ಯುತ್ ತಿದ್ದುಪಡಿ ಮಸೂದೆ, ಬೀಜ ಮಸೂದೆ, ರೇಗಾ ಬದಲಾವಣೆಯನ್ನು ಪ್ರತಿಭಟನಾಕಾರರು ವಿರೋಧಿಸಿದರು. ಸಿಐಟಿಯು ಮುಖಂಡರಾದ ಲಕ್ಷ್ಮಿ ಸಿದ್ದಿ, ಗೌರಿ ಮರಾಠೆ, ತ್ರೇಷಾ ರೊಜಾರಿಯೋ, ನಾಗರತ್ನ, ಬಾಗಿ ಸಿದ್ದ, ರೂಪಾ ಪಾಟಣಕರ, ಶಾಂತಾ ಮೋಗೆರ, ರೈತ ಮುಖಂಡರಾದ ನಾಗಪ್ಪ ಸಿದ್ದಿ, ಮಂಜು ಮುಂತಾದವರು ಹಾಜರಿದ್ದರು.