ಕುಮಟಾದ ನಾಡುಮಾಸ್ಕೇರಿ ಗ್ರಾಮ ಪಂಚಾಯತ ಸುತ್ತಲಿನ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮ ರೆಸಾರ್ಟುಗಳಿದ್ದು, ಆ ಜಾಗದ ಸರ್ವೇ ಕಾರ್ಯ ಮುಕ್ತಾಯವಾಗಿದೆ. ಸರ್ವೇಯ ಕೊನೆಯ ದಿನವಾದ ಗುರುವಾರ ರೆಸಾರ್ಟ ಮಾಲಕರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದವೂ ನಡೆದಿದೆ.
ನಾಡುಮಾಸ್ಕೇರಿ ಗ್ರಾಮದ ಗಂಗೆಕೊಳ್ಳ, ಹಾರುಮಾಸ್ಕೇರಿ ಗ್ರಾಮ, ಭಾವಿಕೊಡ್ಲ ಗ್ರಾಮದ ದುಬ್ಬನಶಸಿ ಭಾಗದಲ್ಲಿ ಒಟ್ಟು 57 ರೆಸಾರ್ಟುಗಳ ಸರ್ವೇ ಮುಗಿದಿದೆ. ಮೂರು ಹಂತದಲ್ಲಿ ಈ ಸರ್ವೇ ನಡೆಸಲಾಗಿದೆ. ಸರ್ಕಾರಿ ಜಾಗ ಅತ್ರಿಕ್ರಮಿಸಿದರ ಕುರಿತು ಹಾಗೂ ಈ ಬಗ್ಗೆ ಆಕ್ಷೇಪಣೆಯ ಕುರಿತು ನೋಟಿಸ್ ನೀಡಿ ಅದರ ತೆರವಿಗೆ ಕ್ರಮ ಜರುಗಿಸುವ ಸಾಧ್ಯತೆಗಳಿವೆ. ಅತಿಕ್ರಮಣದಾರರು ಸ್ವಯಂ ಪ್ರೇರಣೆಯಿಂದ ತೆರವು ಮಾಡುವಂತೆ ಸೂಚಿಸಲಾಗಿದ್ದು, ಅದಕ್ಕೆ ಬಗ್ಗದೇ ಇದ್ದರೆ ಸರ್ಕಾರದಿಂದಲೇ ತೆರವು ಮಾಡುವ ಬಗ್ಗೆ ಚಿಂತನೆ ನಡೆದಿದೆ.
ಕಂದಾಯ ಹಾಗೂ ಭೂ ಮಾಪನಾ ಇಲಾಖೆ ಜಂಟಿ ಸರ್ವೇ ನಡೆದಿದ್ದರಿಂದ ಈ ಭಾಗದ ಅಕ್ರಮ ಕಟ್ಟಡಗಳ ನೆಲಸಮ ಆಗುವ ಲಕ್ಷಣಗಳಿವೆ. ಭೂ ಮಾಪನಾ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ಅಂತಿಮ ಹಂತ ಸರ್ವೆ ಪೂರ್ಣಗೊಳಿಸುವ ವೇಳೆ ಹಲವು ರೆಸಾರ್ಟ ಮಾಲಕರು ತಕರಾರು ಸಲ್ಲಿಕೆ ಮಾಡಿದ್ದಾರೆ. `ಎಲ್ಲರಿಗೂ ಒಂದೇ ರೀತಿಯ ಕಾನೂನು ಮಾಡಿ’ ಎಂದು ಕೆಲ ರೆಸಾರ್ಟ ಮಾಲಕರು ವಾಗ್ವಾದ ನಡೆಸಿದ್ದಾರೆ.
ವಿವಾದ ದೊಡ್ಡದಾದ ಹಿನ್ನಲೆ ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಅವರು ಅಲ್ಲಿದ್ದವರನ್ನು ಸಮಾಧಾನ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪಿಐ ಶ್ರೀಧರ ಎಸ್ ಆರ್ ನೇತೃತ್ವದಲ್ಲಿ ಪಿಎಸ್ಐ. ಅನಿಲ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು ಕಟ್ಟೆಚ್ಚರವಹಿಸಿದ್ದರು.