ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸೂರಜ ನಾಯ್ಕ ಸೋನಿ ಅವರು ಆಯ್ಕೆಯಾಗಿದ್ದು, ಇದಕ್ಕೆ ಜೆಡಿಎಸ್ ಕಾರ್ಯಕರ್ತರಿಂದಲೇ ಅಸಮಧಾನವ್ಯಕ್ತವಾಗಿದೆ. `ಪಕ್ಷಕ್ಕಾಗಿ ದುಡಿದವರಿಗೆ ಬಿಟ್ಟು ಬಕೆಟ್ ಹಿಡಿದವರನ್ನು ಆಯ್ಕೆ ಮಾಡಲಾಗಿದೆ’ ಎಂದು ಅನೇಕರು ಕಿಡಿಕಾರಿದ್ದಾರೆ.
ಕುಮಟಾ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಸೂರಜ ನಾಯ್ಕ ಸೋನಿ ಅವರು ಅತಿ ಅಲ್ಪ ಮತದಿಂದ ಸೋಲು ಅನುಭವಿಸಿದ್ದಾರೆ. ಉತ್ತಮ ಸಂಘಟನಾ ಶಕ್ತಿ ಹೊಂದಿದ ಅವರನ್ನು ಗುರುತಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನ ನೀಡಿದೆ. ಸದ್ಯ. ಪಕ್ಷ ಸಂಘಟನೆಗಾಗಿ ಅವರು ಶಪಥ ಮಾಡಿದ್ದಾರೆ. ಆದರೆ, ಸೂರಜ ನಾಯ್ಕ ಸೋನಿ ಅವರ ವಿರುದ್ಧ ಅವರದ್ದೇ ಪಕ್ಷದವರು ತಿರುಗಿ ಬಿದ್ದಿದ್ದು, ಆಂತರಿಕ ಕಲಹಕ್ಕೆ ಕಾರಣವಾಗಿದೆ. `ವರಿಷ್ಠರು ಪಕ್ಷಕ್ಕಾಗಿ ದುಡಿಯುವವರನ್ನು ಬಿಟ್ಟು ಬಕೆಟ್ ಹಿಡಿಯುವವರಿಗೆ ಮಣೆ ಹಾಕುತ್ತಿದ್ದಾರೆ’ ಎಂದು ಪಕ್ಷದ ಪ್ರಮುಖರಾದ ರಮೇಶ ನಾಯ್ಕ ಅವರು ದೂರಿದ್ದಾರೆ. `ಸೂರಜ್ ಸೋನಿ ಅವರು ಈವರೆಗೂ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದಿಲ್ಲ. ಯಾವುದೇ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಇಂತಹ ವ್ಯಕ್ತಿಯನ್ನು ಏಕಾಏಕಿ ಅಧ್ಯಕ್ಷರನ್ನಾಗಿ ಮಾಡಿರುವುದು ಇಡೀ ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅವಮಾನ’ ಎಂದು ಅವರು ಕಿಡಿಕಾರಿದ್ದಾರೆ.
`ಕಳೆದ 15 ವರ್ಷಗಳಿಂದ ಪಕ್ಷದ ಉಪಾಧ್ಯಕ್ಷರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಜಿ ಕೆ ಪಟಗಾರ ಅವರನ್ನು ಜೆಡಿಎಸ್ ಪಕ್ಷ ಕಡೆಗಣಿಸಿದೆ’ ಎಂದು ಜಿ ಕೆ ಪಟಗಾರ ಅವರೇ ಹೇಳಿದ್ದಾರೆ. `ಸೂರಜ್ ನಾಯ್ಕ ಸೋನಿ ಅವರನ್ನು ಏಕಾಏಕಿ ಜಿಲ್ಲಾಧ್ಯಕ್ಷರನ್ನಾಗಿ ಘೋಷಿಸಿರುವುದು ಸರಿಯಲ್ಲ’ ಎಂದವರು ತಮ್ಮ ಅಸಮಧಾನಹೊರಹಾಕಿದ್ದಾರೆ. `ಕಳೆದ ಸಾಕಷ್ಟು ವರ್ಷದಿಂದ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾಗಿ ನಾನು ಕಾರ್ಯ ನಿರ್ವಹಿಸುತಿದ್ದು, ಸಂಘಟನೆಗೆ ದುಡಿದಿದ್ದೇನೆ. ಜಿಲ್ಲಾಧ್ಯಕ್ಷರಾಗಿದ್ದ ಗಣಪಯ್ಯ ಗೌಡ ಅವರಿಗೆ ಅಪಘಾತವಾಗಿದ್ದ ಸಂದರ್ಭದಲ್ಲಿಯೂ ಹೆಚ್ಚಿನ ಜವಾಬ್ದಾರಿ ಹೊತ್ತು ಕೆಲಸ ಮಾಡಿದ್ದೇನೆ. ಪಕ್ಷ ಸಂಘಟನೆಗಾಗಿ ಸದಸ್ಯತ್ವ ಮಾಡಿದ್ದೇನೆ. ಹೀಗಿರುವಾಗ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಪಕ್ಷದ ವರಿಷ್ಠರ ಆದೇಶದಂತೆ ಚುನಾವಣೆ ಮಾಡಿ ನನ್ನ ಜಿಲ್ಲಾಧ್ಯಕ್ಷನಾಗಿ ಆಯ್ಕೆ ಮಾಡಲಾಗಿತ್ತು. ಉತ್ತರ ಕರ್ನಾಟಕದ ಸಮಾವೇಶದ ಬಿಜಾಪುರದಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ವರಿಷ್ಠರು ಏಕಾಏಕಿ ಸೂರಜ್ ಸೋನಿ ಜಿಲ್ಲಾಧ್ಯಕ್ಷ ಎಂದು ಘೋಷಣೆ ಮಾಡಿದ್ದಾರೆ. ಇದು ಪ್ರಾಮಾಣಿಕ ಸೇವೆಗೆ ಮಾಡಿದ ಅನ್ಯಾಯ’ ಎಂದು ಅವರು ಹೇಳಿದ್ದಾರೆ.
`ಚುನಾವಣಾಧಿಕಾರಿ ರಾಘವೇಂದ್ರ ಮಡಿವಾಳ ಅವರ ಸಮ್ಮುಖದಲ್ಲಿ ಯಲ್ಲಾಪುರದಲ್ಲಿ ನಡೆದ ಸಾಂಸ್ಥಿಕ ಚುನಾವಣೆಯಲ್ಲಿ 65 ಸದಸ್ಯರ ಪೈಕಿ 53 ಸದಸ್ಯರ ಬೆಂಬಲದೊAದಿಗೆ ಜಿ ಕೆ ಪಟಗಾರ ಅವರು ಅಧಿಕೃತವಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಅವರಿಗೆ ಗುರುತಿನ ಚೀಟಿಯನ್ನು ಸಹ ಪಕ್ಷದಿಂದ ನೀಡಲಾಗಿತ್ತು. ಮಾಜಿ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡರ ಅವಧಿಯಲ್ಲಿಯೂ ಸಕ್ರಿಯರಾಗಿದ್ದ ಪಟಗಾರ ಅವರು, ಜಿಲ್ಲಾಧ್ಯಕ್ಷರ ಅನುಪಸ್ಥಿತಿಯಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಹೀಗಿದ್ದರೂ, ಹೈಕಮಾಂಡ್ ಚುನಾವಣಾ ಪ್ರಕ್ರಿಯೆಯನ್ನು ಬದಿಗೊತ್ತಿ ಹೊಸಬರನ್ನು ನೇಮಿಸಿರುವುದು ಅಚ್ಚರಿ ಮೂಡಿಸಿದೆ’ ಎಂದವರು ಹೇಳಿದ್ದಾರೆ.
ಗುಣವಂತೆಯ ಗೋವಿಂದೇ ಗೌಡರು ಮಾತನಾಡಿ `ಮೂರು ಸಲ ಚುನಾವಣೆ ಸೋತ ಕುಮಟಾದ ಸೂರಜ್ ಸೋನಿ, ರಾಮನಗರದ ನಿಖಿಲ್ ಕುಮಾರಸ್ವಾಮಿ ಅಂಥವರಿಗೆ ಹುದ್ದೆ ಕೊಡುವುದಾದರೆ ನಮ್ಮಂಥ ನಿಷ್ಟಾವಂತರಿಗೆ ಬೆಲೆಯೇ ಇಲ್ಲ. ನಾನು ವಿದ್ಯಾರ್ಥಿಯಾದಾಗಿನಿಂದ ಜೆಡಿಎಸ್ ಪಕ್ಷದಲ್ಲಿದ್ದೇನೆ. ಯಾವುದೇ ಹುದ್ದೆ ಪಡೆದಿಲ್ಲ. ಗಣಪೇ ಗೌಡರು ಜಿಲ್ಲಾಧ್ಯಕ್ಷರಾಗಿ ಹಣ ಮಾಡಲಿಲ್ಲ. ಆಮಿಷಕ್ಕೆ ಒಳಗಾಗಲಿಲ್ಲ’ ಎಂದರು. ರಾಜ್ಯ ಸಮಿತಿ ಸದಸ್ಯ ಗೋವಿಂದೆ ಗೌಡ ಮಾತನಾಡಿ `ಪಕ್ಷದ ವರಿಷ್ಠರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ, ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಯಾದ ಜಿ ಕೆ ಪಟಗಾರ ಅವರಿಗೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಪಕ್ಷಕ್ಕೆ ಒಂದು ವಾರದ ಕಾಲಾವಕಾಶ ನೀಡಲಾಗಿದ್ದು, ಅಷ್ಟರೊಳಗೆ ಸರಿಪಡಿಸದಿದ್ದಲ್ಲಿ ಜಿಲ್ಲೆಯ ಪ್ರಮುಖ ಪದಾಧಿಕಾರಿಗಳು ಮತ್ತು ಬೆಂಬಲಿಗರು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ’ ಎಂದು ಎಚ್ಚರಿಸಿದರು.
ಪ್ರಮುಖರಾದ ಶೇಖರ್ ಪೂಜಾರಿ, ಸತೀಶ್ ಮಹಾಲೆ, ಈಶ್ವರ ನಾಯ್ಕ ಭಟ್ಕಳ, ಶೇಖರ್ ನಾಯ್ಕ ಶಿರಸಿ, ಗಣೇಶ ನಾಯ್ಕ, ಶಂಕರ್ ನಾಯ್ಕ, ರಾಜೇಶ ಪಟಗಾರ್, ಲಕ್ಷ್ಮಣ ಪಟಗಾರ, ರಾಮು ಆರ್. ಶಿರಸಿ, ವಿನಾಯಕ ಶಿರಸಿ, ಅನಿಲ್ ಗೌಡ ಹಾಗೂ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.