ಶಿರಸಿ ಮರಾಠಿಕೊಪ್ಪದ ಶಿವಾ ಬಾಯ್ಸ ಗೆಳೆಯರ ಬಳಗದವರು ಮೂರು ದಿನದ ಆರು ಜನರ ಹೊನಲು ಬೆಳಕಿನ ಖೊಡ್ಡಾ ವಾಲಿಬಾಲ್ ಪಂದ್ಯಾವಳಿ ಆಯೋಜಿಸಿದ್ದಾರೆ. ಫೆ 13ರಿಂದ ಈ ಕ್ರೀಡಾಕೂಟ ಶುರುವಾಗಿದ್ದು, ಫೆ 15ರವರೆಗೆ ನಡೆಯಲಿದೆ.
ಮೊದಲ ದಿನ ನಡೆದ ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ ಅವರು ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಅವರು `ಕ್ರೀಡೆ ಎಂಬುದು ಕೇವಲ ಸೋಲು-ಗೆಲುವಿನ ಮಾತಲ್ಲ. ಅದು ನಮ್ಮ ದೈಹಿಕ, ಮಾನಸಿಕ ಆರೋಗ್ಯದ ಸಂಕೇತ’ ಎಂದು ಹೇಳಿದ್ದಾರೆ
ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಮಾದನಗೇರಿ ಅವರು ಮಾತನಾಡಿ `ಕ್ರೀಡೆಯಿಂದ ಮನೋಬಲ ಹೆಚ್ಚುತ್ತದೆ. ಹೀಗಾಗಿ ಇಂಥ ಪಂದ್ಯಾವಳಿಗಳು ಹೆಚ್ಚು ನಡೆಯಬೇಕು’ ಎಂದಿದ್ದಾರೆ. ಅಧ್ಯಕ್ಷತೆವಹಿಸಿದ್ದ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ಮಾತನಾಡಿ `ಕ್ರೀಡೆಯಲ್ಲಿ ಒಬ್ಬರ ಚಾಕಚಕ್ಯತೆಗಿಂತಲೂ ಇಡೀ ತಂಡದ ಸಮನ್ವಯತೆ ಮುಖ್ಯ.ಸೋಲಿಗೆ ಕುಗ್ಗಬೇಡಿ, ಗೆಲುವಿಗೆ ಬೀಗಬೇಡಿ. ಇಂತಹ ಪಂದ್ಯಾವಳಿಗಳೇ ನಾಳಿನ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಆಟಗಾರರನ್ನು ರೂಪಿಸುತ್ತವೆ ಎಂದರು.
`ಲೋಕಧ್ವನಿ ಹೆಮ್ಮೆಯ ಸಾಧಕ ಪ್ರಶಸ್ತಿ’ಪಡೆದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಪರವಾಗಿ ವಿನಾಯಕ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ನಾಗರಾಜ ಗುಡಿಗಾರ್, ಮಹೇಶ ಪ್ರಭು, ಅಜಯಲಾಡನವರ್, ಉಪೇಂದ್ರ ಮೇಸ್ತ, ಅಶೋಕ ಶೆಟ್ಟಿ ಅವರು ಕಾರ್ಯಕ್ರಮದಲ್ಲಿದ್ದರು. ಕೇಮು ವಂದಿಗೆ ಅವರು ನಿರೂಪಿಸಿದರು.